‘ಸ್ಟೆರ್ಲೈಟ್’ ಮುಚ್ಚುವಂತೆ ತಮಿಳುನಾಡು ಮಾಲಿನ್ಯ ನಿಯಂತ್ರಣ ಮಂಡಳಿ ಆದೇಶ, ಕಾರ್ಖಾನೆಗೆ ವಿದ್ಯುತ್ ಸೇವೆ ಸ್ಥಗಿತ
ದೇಶ-ವಿದೇಶ

‘ಸ್ಟೆರ್ಲೈಟ್’ ಮುಚ್ಚುವಂತೆ ತಮಿಳುನಾಡು ಮಾಲಿನ್ಯ ನಿಯಂತ್ರಣ ಮಂಡಳಿ ಆದೇಶ, ಕಾರ್ಖಾನೆಗೆ ವಿದ್ಯುತ್ ಸೇವೆ ಸ್ಥಗಿತ

May 25, 2018

ಚೆನ್ನೈ: ಜನರ ಸಾವಿಗೆ ಕಾರಣವಾದ ತಮಿಳುನಾಡಿನ ಸ್ಟೆರ್ಲೈಟ್ ಕಾಪರ್ ಸಂಸ್ಥೆಯ ವಿರುದ್ಧದ ಪ್ರತಿಭಟನೆ ಮುಂದುವರೆದಿರುವಂತೆಯೇ ಇತ್ತ ತಮಿಳುನಾಡು ಮಾಲಿನ್ಯ ನಿಯಂತ್ರಣ ಮಂಡಳಿ ಸಂಸ್ಥೆಯನ್ನು ಮುಚ್ಚುವಂತೆ ಆದೇಶ ನೀಡಿದೆ.

ತತ್ ಕ್ಷಣದಿಂದಲೇ ಜಾರಿಗೆ ಬರುವಂತೆ ವೇದಾಂತ ಸ್ಟೆರ್ಲೈಟ್ ಕಾಪರ್ ಸ್ಮೆಲ್ಟರ್ ಘಟಕವನ್ನು ಮುಚ್ಚುವಂತೆ ಮಾಲಿನ್ಯ ನಿಯಂತ್ರಣ ಮಂಡಳಿ ಆದೇಶಿಸಿದ್ದು, ಅಲ್ಲದೆ ಕಂಪನಿಗೆ ನೀಡಲಾಗುತ್ತಿರುವ ವಿದ್ಯುತ್ ಸಂಪರ್ಕವನ್ನೂ ಕಡಿತಗೊಳಿಸುವಂತೆ ಆದೇಶಿಸಿದೆ. ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ನಸೀಮುದ್ದೀನ್ ಅವರು ಈ ಆದೇಶ ಹೊರಡಿಸಿದ್ದು, ನಿನ್ನೆ ಸಂಜೆಯಿಂದಲೇ ಸಂಸ್ಥೆಯ ವಿದ್ಯುತ್ ಸಂಪರ್ಕವನ್ನೂ ಕೂಡ ಸ್ಥಗಿತಗೊಳಿಸಲಾಗಿದೆ. ತೂತ್ತುಕುಡಿಯಲ್ಲಿ ಸ್ಟೆರ್ಲೈಟ್ ಸಂಸ್ಥೆಯ ವಿರುದ್ಧದ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿದ ಬೆನ್ನಲ್ಲೇ ರಾಜ್ಯದ ಮಾಲಿನ್ಯ ನಿಯಂತ್ರಣ ಮಂಡಳಿ ಈ ಸಂಬಂಧ ತನಿಖೆಗೆ ಆದೇಶಿಸಿತ್ತು. ಹೀಗಾಗಿ ಜಂಟಿ ಮುಖ್ಯ ಪರಿಸರ ಇಂಜಿನಿಯರ್ ನೇತೃತ್ವದಲ್ಲಿ ಕಳೆದ ಮೇ 18 ಮತ್ತು ಮೇ 19ರಂದು ಘಟಕದಲ್ಲಿ ಪರಿಶೀಲನೆ ನಡೆಸಲಾಯಿತು. ಈ ವೇಳೆ ಘಟಕದಿಂದ ವಿಷಕಾರಿ ಅನಿಲ ಬಿಡುಗಡೆಯಾಗುತ್ತಿರುವುದು ಪತ್ತೆಯಾಗಿತ್ತು. ಇದೇ ಕಾರಣಕ್ಕೆ ಘಟಕವನ್ನು ಮುಚ್ಚಲು ಇಲಾಖೆ ಅದೇಶ ನೀಡಿದೆ. ಅಂತೆಯೇ ತನ್ನ ಆದೇಶದ ಪ್ರತಿಯನ್ನು ಇಲಾಖೆ ಜಿಲ್ಲಾಧಿಕಾರಿಗಳಿಗೂ ರವಾನೆ ಮಾಡಿದೆ.

ಆತ್ಮರಕ್ಷಣೆಗಾಗಿ ಗೋಲಿಬಾರ್: ತೂತ್ತುಕುಡಿಯ ಅಣ್ಣಾನಗರದಲ್ಲಿ ಸ್ಟೆರ್ಲೈಟ್ ಕಂಪನಿಯ ವಿರುದ್ಧ ನಡೆಸಲಾದ ಪ್ರತಿಭಟನೆ ವೇಳೆ ಪೆÇಲೀಸರು ನಡೆಸಿದ ಗೋಲಿಬಾರ್ ಆತ್ಮರಕ್ಷಣೆಗಾಗಿಯೇ ಹೊರತು, ಪೂರ್ವನಿಯೋಜಿತವಲ್ಲ ಎಂದು ತಮಿಳುನಾಡು ಮುಖ್ಯಮಂತ್ರಿ ಇ.ಕೆ. ಪಳನಿಸ್ವಾಮಿ ಹೇಳಿದ್ದಾರೆ.

ವ್ಯಕ್ತಿಯೊಬ್ಬ ದಾಳಿ ನಡೆಸಿದಾಗ, ಆತ್ಮರಕ್ಷಣೆಗಾಗಿ ಹೋರಾಡುವುದು ಸಾಮಾನ್ಯ. ಪೆÇಲೀಸರೂ ಕೂಡ ಅದನ್ನೇ ಮಾಡಿದ್ದಾರೆ ಎಂದು ಪೆÇಲೀಸರ ಕ್ರಮವನ್ನು ಸಮರ್ಥಿಸಿ ಕೊಂಡಿದ್ದಾರೆ. ಕೆಲ ರಾಜಕೀಯ ಪಕ್ಷಗಳು, ಎನ್‍ಡಿಓಗಳು ಹಾಗೂ ಸಮಾಜಘಾತುಕ ಶಕ್ತಿಗಳಿಂದಾಗಿ ರಾಜ್ಯದಲ್ಲಿ ಹಿಂಸಾತ್ಮಕ ಪರಿಸ್ಥಿತಿ ಎದುರಾಗಿದೆ. ಸಮಾಜಘಾತುಕ ಶಕ್ತಿಗಳು ಪ್ರತಿಭಟನಾಕಾರರನ್ನು ತಪ್ಪು ಹಾದಿಗೆಳೆಯುತ್ತಿವೆ ಎಂದು ತಿಳಿಸಿದ್ದಾರೆ. ತೂತುಕುಡಿಯಲ್ಲಿ ಸಂಭವಿಸಿರುವ ಹಿಂಸಾತ್ಮಕ ಘಟನೆ ಕುರಿತಂತೆ ತಮಿಳುನಾಡು ಸರ್ಕಾರದೊಂದಿದೆ ಗೃಹ ಸಚಿವಾಲಯ ಸಂಪರ್ಕದಲ್ಲಿದ್ದು, ಘಟನೆ ಸಂಬಂಧ ಸಂಪೂರ್ಣ ವರದಿಯನ್ನು ಕೇಳಲಾಗಿದೆ. ರಾಜ್ಯದಲ್ಲಿ ಶಾಂತಿ ಕಾಪಾಡುವಂತೆ ಈ ಮೂಲಕ ಮನವಿ ಮಾಡಿಕೊಳ್ಳುತ್ತೇನೆಂದು ರಾಜನಾಥ್ ಸಿಂಗ್ ತಿಳಿಸಿದ್ದಾರೆ.

Translate »