ಹನ್ನೊಂದು ತಿಂಗಳಿಂದ ಸಂಬಳವಿಲ್ಲದೆ  ಶಿಕ್ಷಕರ ಪರಿತಾಪ
ಮೈಸೂರು

ಹನ್ನೊಂದು ತಿಂಗಳಿಂದ ಸಂಬಳವಿಲ್ಲದೆ ಶಿಕ್ಷಕರ ಪರಿತಾಪ

February 22, 2019

ಮೈಸೂರು: ಸಾರ್ವ ಜನಿಕ ಶಿಕ್ಷಣ ಇಲಾಖೆಯಲ್ಲಿ ಭ್ರಷ್ಟಾಚಾರ ಮತ್ತು ಶಿಕ್ಷಕರ ಶೋಷಣೆ ನಡೆಯುತ್ತಿದೆ ಎಂದು ಆರೋಪಿಸಿ ಮೈಸೂರು ಜಿಲ್ಲಾ ಕಾಯಕ ಸಮಾಜಗಳ ಒಕ್ಕೂಟದ ಆಶ್ರಯ ದಲ್ಲಿ ವಿವಿಧ ಸಂಘಟನೆಗಳ ಕಾರ್ಯ ಕರ್ತರು ಗುರುವಾರ ಮೈಸೂರಿನ ಸಾರ್ವ ಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇ ಶಕ (ಡಿಡಿಪಿಐ)ರ ಕಚೇರಿ ಎದುರು ಪ್ರತಿ ಭಟನೆ ನಡೆಸಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಸಿ.ಪುಟ್ಟಸಿದ್ದಶೆಟ್ಟಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಡಿಡಿಪಿಐ ಮತ್ತು ಅವರ ಕಚೇರಿಯ ಅಧೀಕ್ಷಕರ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದರು.

ಭ್ರಷ್ಟಾ ಚಾರದಲ್ಲಿ ತೊಡಗಿರುವ ಈ ಇಬ್ಬರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಮೈಸೂರು ಶ್ರೀರಾಂಪುರದಲ್ಲಿರುವ ಶ್ರೀಮತಿ ಪುಟ್ಟತಾಯಮ್ಮ ಸ್ಮಾರಕ ಹಿರಿಯ ಅನುದಾನಿತ ಕನ್ನಡ ಪ್ರಾಥಮಿಕ ಶಾಲಾ ಶಿಕ್ಷಕರಿಗೆ 11 ತಿಂಗ ಳಿಂದ ಸಂಬಳ ನೀಡದೆ ಡಿಡಿಪಿಐ ಅವರು ಶೋಷಣೆ ಮಾಡುತ್ತಿದ್ದಾರೆ. ಸುಳ್ಳು ದಾಖಲೆ ಸೃಷ್ಟಿಸಿ ಶಿಕ್ಷಕರ ಸಂಬಳ ತಡೆ ಹಿಡಿದಿದ್ದಾರೆ ಎಂದು ಆರೋಪಿಸಿದರು. ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ದರು. ಪ್ರತಿಭಟನೆಯಲ್ಲಿ ಪ್ರೊ. ಪಿ.ವಿ.ನಂಜ ರಾಜ ಅರಸು ಇನ್ನಿತರರು ಭಾಗವಹಿಸಿದ್ದರು.

ಡಿಡಿಪಿಐ ಮಮತಾ ಸ್ಪಷ್ಟನೆ
ಮೈಸೂರು: ಮೈಸೂರಿನ ಕುವೆಂಪುನಗರ ಎಂ.ಬ್ಲಾಕ್‍ನ ಪುಟ್ಟ ತಾಯಮ್ಮ ಸ್ಮಾರಕ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಕುರಿತಂತೆ ಡಿಡಿಪಿಐ ಮಮತಾ ಸ್ಪಷ್ಟೀಕರಣ ನೀಡಿದ್ದಾರೆ. 1996-97ನೇ ಸಾಲಿನಲ್ಲಿ ಎಸ್‍ಎಂಎಸ್ ಆಂಗ್ಲ ಮಾಧ್ಯಮ ಕಾನ್ವೆಂಟ್ ಕುವೆಂಪುನಗರ ಹೆಸರಿನಲ್ಲಿ 5ರಿಂದ 7ನೇ ತರಗತಿವರೆಗೆ ಶಾಲೆ ಆರಂಭಿಸಿ, ಅದಕ್ಕೆ 2003ರಲ್ಲಿ ನೋಂದಣಿ ಸಹ ಪಡೆದಿದ್ದಾರೆ. ಶಾಲೆಯು ಶ್ರೀಮತಿ ಪುಟ್ಟತಾಯಮ್ಮ ಸ್ಮಾರಕ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಎಂ.ಬ್ಲಾಕ್, ಕುವೆಂಪುನಗರ ಮೈಸೂರು ಎಂಬ ಹೆಸರಿನಲ್ಲಿ
1ರಿಂದ 7ನೇ ತರಗತಿವರೆಗೆ 1.8.2012ರಲ್ಲಿ ಅನುದಾನಕ್ಕೂ ಒಳಪಟ್ಟಿರುತ್ತದೆ.

21.8.2017ರಲ್ಲಿ ಬಿಇಓ ಅವರು ಡಿಡಿಪಿಐ ಕಚೇರಿಗೆ ಪತ್ರ ಬರೆದು ಪುಟ್ಟತಾಯಮ್ಮ ಸ್ಮಾರಕ ಅನುದಾನಿತ ಹಿರಿಯ ಪ್ರಾಥ ಮಿಕ ಶಾಲೆ ಎಂ.ಬ್ಲಾಕ್ ಕುವೆಂಪುನಗರ ಮೈಸೂರು ಈ ವಿಳಾಸದ ಶಾಲೆಯು ಪೂರ್ವಾನುಮತಿಯಿಲ್ಲದೆ ಬೇರೆ ವಿಳಾಸಕ್ಕೆ ಅಂದರೆ ಸಿಎ-1, ನಿವೇಶನ, ಶ್ರೀರಾಂಪುರ, 3ನೇ ಹಂತ, ಮೈಸೂರು ಇಲ್ಲಿಗೆ ಸ್ಥಳಾಂತರಗೊಂಡಿದ್ದು ಅನುಮತಿ ಪಡೆದಿರುವ ವಿಳಾಸಕ್ಕೆ ಬದಲಾಗಿ ಬೇರೆಡೆ ನಡೆಯುತ್ತಿದೆ. ಹೀಗಾಗಿ 2016-17ನೇ ಸಾಲಿಗೆ ಮಾನ್ಯತೆ ಮುಕ್ತಾಯಗೊಂಡಿದ್ದು, 2017-18ನೇ ಸಾಲಿಗೆ ನವೀಕರಿಸಲು ಅವಕಾಶವಾಗುತ್ತಿಲ್ಲ. ಈ ಬಗ್ಗೆ ಆಡಳಿತ ಮಂಡಳಿಗೆ ನೋಟೀಸ್ ಸಹ ನೀಡಲಾಗಿದ್ದರೂ ಸ್ಪಂದಿಸಿರುವುದಿಲ್ಲ.

ಜೊತೆಗೆ ಪುಟ್ಟತಾಯಮ್ಮ ಸ್ಮಾರಕ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಎಂ.ಬ್ಲಾಕ್, ಕುವೆಂಪುನಗರ ಈ ಶಾಲೆಯು 1ರಿಂದ 4ನೇ ತರಗತಿಗೆ ಮಾತ್ರ ಕನ್ನಡ ಮಾಧ್ಯಮಕ್ಕೆ ಅನುಮತಿ ಪಡೆದಿದ್ದು, 1ರಿಂದ 7ನೇ ತರಗತಿವರೆಗೆ ಅನುದಾನಕ್ಕೆ ಒಳ ಪಟ್ಟಿರುತ್ತದೆ. 5ರಿಂದ 7ನೇ ತರಗತಿಗೆ ಆಂಗ್ಲ ಮಾಧ್ಯಮದಲ್ಲಿ ಅನುಮತಿ ನೀಡಿದ್ದು, ನೋಂದಣಿ ಪತ್ರದಲ್ಲಿ ಆಂಗ್ಲ ಮಾಧ್ಯಮ ಎಂಬುದನ್ನು ಕನ್ನಡ ಮಾಧ್ಯಮ ಎಂಬುದಾಗಿ ತಿದ್ದಲಾಗಿದೆ. 1ರಿಂದ 7ನೇ ತರಗತಿಗಳನ್ನು ಕನ್ನಡ ಮಾಧ್ಯಮದಲ್ಲಿ ಅನುದಾನಕ್ಕೆ ಒಳಪಡಿಸಲಾಗಿದೆ. ಈ ಎಲ್ಲಾ ಅಂಶಗಳ ಹಿನ್ನೆಲೆಯಲ್ಲಿ ಶಿಕ್ಷ್ಷಕರ ವೇತನವನ್ನು ತಾತ್ಕಾಲಿಕ ವಾಗಿ ತಡೆ ಹಿಡಿಯಲಾಗಿದೆ. ಮಾನ್ಯತೆ ನವೀಕರಿಸಿಲ್ಲ ಎಂಬುದಾಗಿ ತಿಳಿಸಿ, ದಕ್ಷಿಣ ವಲಯ ಬಿಇಒ ಅವರು ಮಾರ್ಗದರ್ಶನ ಕೋರಿದ್ದಾರೆ. ಈ ಎಲ್ಲಾ ಅಂಶಗಳನ್ನು ಪರಿಶೀಲಿಸಿದಾಗ ಕಂಡು ಬಂದಿರುವ ಅಂಶಗಳನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಮತ್ತು ನಿರ್ದೇಶಕರಿಗೆ ಪತ್ರ ಮುಖೇನ ಗಮನಕ್ಕೆ ತರಲಾಗಿದೆ. ಈ ವಿಚಾರದಲ್ಲಿ ಯಾವ ರೀತಿಯ ತೀರ್ಮಾನ ಕೈಗೊಳ್ಳಬೇಕೆಂಬುದರ ಬಗ್ಗೆ ಅವರಿಂದ ಮಾರ್ಗದರ್ಶನ ಕೋರಿರುವುದಾಗಿ ಡಿಡಿಪಿಐ ಮಮತಾ ಸ್ಪಷ್ಪಪಡಿಸಿದ್ದಾರೆ.

Translate »