ವೀರಾಜಪೇಟೆ: ಸೇತುವೆ ನಿರ್ಮಿಸಲು ರಸ್ತೆಗೆ ಅಡ್ಡಲಾಗಿ ತೆಗೆದಿದ್ದ ಸುಮಾರು 20 ಅಡಿ ಆಳದ ಹೊಂಡಕ್ಕೆ ದ್ವಿಚಕ್ರ ಸವಾರನೊಬ್ಬ ಬಿದ್ದು ಮೃತಪಟ್ಟಿರುವ ಘಟನೆ ವೀರಾಜಪೇಟೆ-ಕೇರಳ ಅಂತರರಾಜ್ಯ ಹೆದ್ದಾರಿಯಲ್ಲಿ ನಡೆದಿದೆ. ವೀರಾಜ ಪೇಟೆ ಬಳಿಯ ಪೆರುಂಬಾಡಿ ನಿವಾಸಿ ವಿನೋದ್ ಕುಮಾರ್ (29) ಮೃತಪಟ್ಟವರು.
ಕಳೆದ ಎರಡು ತಿಂಗಳಿನಿಂದ ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದ ವಿನೋದ್ಕುಮಾರ್ ಏ.6 ರಂದು ತನ್ನ ಸ್ನೇಹಿತನ ಮದುವೆಗೆಂದು ವೀರಾಜಪೇಟೆಗೆ ಬಂದಿದ್ದು, ರಾತ್ರಿ ಮದುವೆ ಕಾರ್ಯ ಮುಗಿಸಿ ಪೆರುಂಬಾಡಿಯಲ್ಲಿರುವ ತನ್ನ ಮನೆಗೆ ವೀರಾಜಪೇಟೆ ಕಡೆಯಿಂದ ಹೊರಟಿದ್ದಾರೆ.
ವೀರಾಜಪೇಟೆ ಮತ್ತು ಆರ್ಜಿ ಗ್ರಾಮದ ಒತ್ತಿನಲ್ಲಿ ಕೊಣನೂರು- ಮಾಕುಟ್ಟ ರಾಜ್ಯ ಹೆದ್ದಾರಿಯಲ್ಲಿ ರಸ್ತೆ ಅಭಿವೃದ್ಧಿಗಾಗಿ ಸೇತುವೆ ನಿರ್ಮಿಸುವ ಕಾಮಗಾರಿ ನಡೆಸಲಾಗುತ್ತಿದೆ. ಈ ವಿಚಾರ ವಿನೋದ್ಕುಮಾರ್ಗೆ ತಿಳಿಯದ ಕಾರಣ ವಾಹನಗಳ ಸಂಚಾರಕ್ಕಾಗಿ ಅಡ್ಡರಸ್ತೆಯನ್ನು ನಿರ್ಮಿಸಿದ್ದರೂ, ಕಾಣದಿರುವು ದರಿಂದ ನೇರವಾಗಿ ಹೊಂಡಕ್ಕೆ ಸ್ಕೂಟರ್ ಸಮೇತ ಉರುಳಿ ಬಿದ್ದಿದ್ದಾರೆ.
ಮಧ್ಯರಾತ್ರಿ ಸ್ಕೂಟರ್ನ ಲೈಟ್ ಬೆಳಗುತ್ತಿರುವುದನ್ನು ಗಮನಿಸಿದ ಸ್ಥಳೀಯರು ದೂರವಾಣಿ ಮೂಲಕ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ, ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ವಿನೋದ್ಕುಮಾರ್ ಮೃತಪಟ್ಟಿರುವುದು ಗೋಚರಿಸಿದೆ. ಮೃತನ ಸೋದರಮಾವ ವಿ.ಎನ್.ಸುಧಾಕರ ಅವರು ನೀಡಿರುವ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡಿರುವ ನಗರ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಗುತ್ತಿಗೆದಾರ ಸೇತುವೆ ಹೊಂಡಕ್ಕೆ ಅಡ್ಡಲಾಗಿ ರಸ್ತೆಗೆ ಸೂಚನಾ ಫಲಕ ಹಾಕದಿ ರುವುದರಿಂದ ಮತ್ತು ಸ್ಕೂಟರ್ ಸವಾರ ಅತಿ ವೇಗವಾಗಿ ಚಾಲನೆ ಮಾಡಿರು ವುದೇ ಘಟನೆಗೆ ಕಾರಣ ಎಂದು ಸರ್ಕಲ್ ಇನ್ಸ್ಪೆಕ್ಟರ್ ಕ್ಯಾತೇಗೌಡ ತಿಳಿಸಿದ್ದಾರೆ. ಮೃತರು ಪತ್ನಿ ಹಾಗೂ ಎರಡು ವರ್ಷದ ಪುತ್ರನನ್ನು ಅಗಲಿದ್ದಾರೆ.