ಮೈಸೂರು, ಸೆ. 30(ಆರ್ಕೆ)- ನಾಡಹಬ್ಬಕ್ಕೆ ಬಿನ್ನಾಣಗಿತ್ತಿಯಂತೆ ಸಿಂಗಾರಗೊಂಡಿರುವ ಸಾಂಸ್ಕøತಿಕ ನಗರಿ ಮೈಸೂರು ಇದೀಗ ವಿದ್ಯುತ್ ದೀಪಾಲಂಕಾರದಿಂದ ಜಗಮಗಿಸುತ್ತಿದೆ.ಬಣ್ಣ ಬಣ್ಣದ ಚಿತ್ತಾರವುಳ್ಳ ಕಲಾಕೃತಿಯ ಮೋಹಕ ದೀಪಾಲಂಕಾರಕ್ಕೆ ಆಕರ್ಷಿತರಾಗುತ್ತಿರುವ ಪ್ರವಾ ಸಿಗರು ಈ ಸುಂದರ ದೃಶ್ಯವನ್ನು ಕಣ್ತುಂಬಿಕೊಳ್ಳಲು ಮೈಸೂರಿನತ್ತ ಮುಖ ಮಾಡಿರುವುದರಿಂದ ನಗರ ದಲ್ಲಿ ಟ್ರಾಫಿಕ್ ಜಾಮ್ ಆಗತೊಡಗಿದೆ.
ರಾತ್ರಿ ವೇಳೆ ಇಡೀ ನಗರವೇ ಚಿತ್ತಾರದ ಬೆಳಕಿ ನಿಂದ ಕಂಗೊಳಿಸುವ ಮನಮೋಹಕ ದೃಶ್ಯ ನೋಡಲು ಸ್ಥಳೀಯ ಹಾಗೂ ನೆರೆಯ ಜಿಲ್ಲೆಗಳಿಂದ ನಾಗರಿ ಕರು ಮಕ್ಕಳೊಂದಿಗೆ ಆಗಮಿಸಿ ವಾಹನ ದಟ್ಟಣೆ ನಡುವೆಯೂ ಆಗಮಿಸಿ ಆನಂದಿಸಿ ವಿಶೇಷ ಅನುಭವ ಪಡೆದು ತಮ್ಮ ಮೊಬೈಲ್ನಲ್ಲಿ ವಿಡಿಯೋ ಮಾಡಿಕೊಂಡು ಫೋಟೋಗಳನ್ನು ತೆಗೆದು ಕೊಳ್ಳುತ್ತಿರುವುದು ಸಾಮಾನ್ಯವಾಗಿದೆ.
90 ಕಿ.ಮೀ. ದೀಪ: ಇದೇ ಮೊದಲ ಬಾರಿಗೆ ದಸರಾ ಮಹೋತ್ಸವಕ್ಕೆ ಮೈಸೂರಿನ 90 ಕಿ.ಮೀ ಉದ್ದದ ರಸ್ತೆಗಳಿಗೆ ವಿದ್ಯುದ್ದೀಪಾಲಂಕಾರ ಮಾಡಿ ಪಾರಂಪ ರಿಕ ನಗರಿಯನ್ನು ಪ್ರಜ್ವಲಿಸುವಂತೆ ಮಾಡಲಾಗಿದೆ.ಪ್ರಮುಖ ರಸ್ತೆ, ಸರ್ಕಲ್, ಜಂಕ್ಷನ್, ಅಲ್ಲದೆ ಚಾಮುಂಡಿ ಬೆಟ್ಟ ಹಾಗೂ ಅರಮನೆಯ ವಿದ್ಯುದ್ದೀಪಾ ಲಂಕಾರಗಳು ನೋಡುವವರ ಕಣ್ಣು ಕುಕ್ಕುವಂತಿದೆ.
ಅಲ್ಲದೆ ವಿಶ್ವೇಶ್ವರಯ್ಯ ಬಿಲ್ಡಿಂಗ್, ದೇವರಾಜ ಮಾರುಕಟ್ಟೆ, ಕೆ.ಆರ್.ಆಸ್ಪತ್ರೆ, ಸರ್ಕಾರಿ ಆಯು ರ್ವೇದ ಕಾಲೇಜು, ರೈಲ್ವೆ ಸ್ಟೇಷನ್, ಮುಡಾ, ಜಿಲ್ಲಾಧಿಕಾರಿ ಕಚೇರಿ ಸೇರಿದಂತೆ ಬಹುತೇಕ ಸರ್ಕಾರಿ ಕಚೇರಿಗಳಿಗೂ ದೀಪಾಲಂಕಾರ ಮಾಡಿರುವುದ ರಿಂದ ಪಾರಂಪರಿಕ ಕಟ್ಟಡಗಳೂ ಸಹ ಪ್ರಜ್ವಲಿಸುತ್ತಿವೆ.
ರಸ್ತೆಗಳು: ಅರಮನೆಯಿಂದ ಬನ್ನಿಮಂಟಪದ ಎಲ್ಐಸಿ ಸರ್ಕಲ್ವರೆಗಿನ ರಾಜಮಾರ್ಗ, ಬೆಂಗ ಳೂರು-ನೀಲಗಿರಿ ರಸ್ತೆ, ಅಶೋಕ ರಸ್ತೆ, ಡಿ. ದೇವ ರಾಜ ಅರಸು ರಸ್ತೆ, ಜೆಎಲ್ಬಿ ರಸ್ತೆ, ಎಂ.ಜಿ. ರೋಡ್, ಲಲಿತ ಮಹಲ್ ರೋಡ್, ಚಾಮುಂಡಿ ಬೆಟ್ಟದ ರಸ್ತೆ, ಶಿವರಾಂಪೇಟೆ ರೋಡ್, ಇರ್ವಿನ್ ರಸ್ತೆ, ವಿನೋಬ ರಸ್ತೆ, ಕೆ.ಆರ್.ಎಸ್. ರಸ್ತೆ, ಬನ್ನೂರು ರಸ್ತೆ, ಹಿನಕಲ್ ಫ್ಲೈಓವರ್ ಸೇರಿದಂತೆ ಹಲವು ಪ್ರಮುಖ ರಸ್ತೆಗಳು, ರಿಂಗ್ ರೋಡ್ ಜಂಕ್ಷನ್ಗಳು, ಹಾರ್ಡಿಂಜ್ ಸರ್ಕಲ್,
ಕೆ.ಆರ್. ಸರ್ಕಲ್, ಸರ್ಕಾರಿ ಆಯುರ್ವೇದ ಕಾಲೇಜು ಸರ್ಕಲ್, ಮೆಟ್ರೋಪೋಲ್, ದಾಸಪ್ಪ, ರೈಲ್ವೆ ಸ್ಟೇಷನ್, ಹೈವೇ, ಎಲ್ಐಸಿ, ರಾಮಸ್ವಾಮಿ, ಫೌಂಟನ್, ಗನ್ಹೌಸ್ ಸರ್ಕಲ್ ಸೇರಿ ಹಲವು ಸರ್ಕಲ್ಗಳಲ್ಲಿ ವಿನೂತನ ಮಾದರಿಯ ಕಲಾಕೃತಿ ಬೆಳಕಿನ ಚಿತ್ತಾರ ಮಾಡಲಾಗಿದೆ.
ಕಲಾಕೃತಿ ದೀಪ: ಕುರುಬಾರಹಳ್ಳಿ ಸರ್ಕಲ್ನಲ್ಲಿ ಲೋಟಸ್, ಕ್ರಿಸ್ಮಸ್ ಕಲಾಕೃತಿ, ಎಲ್ಐಸಿ ಸರ್ಕಲ್ ನಲ್ಲಿ ಹೂವಿನ ಮರ, ಏಕಲವ್ಯ ಸರ್ಕಲ್ ನಲ್ಲಿ ನರ್ತನ ಸುಂದರಿ, ಜಾನಪದ ಶೈಲಿ ಗೊಂಬೆ, ರೈಲ್ವೆ ಸ್ಟೇಷನ್ ಸರ್ಕಲ್ನಲ್ಲಿ ಯಕ್ಷಗಾನ, ರಾಮ ಸ್ವಾಮಿ ಸರ್ಕಲ್ನಲ್ಲಿ ಅರಮನೆಯ ಚಿತ್ರಗಳು ದೀಪಾಲಂಕಾರದಲ್ಲಿ ಮೂಡಿ ಬಂದಿವೆ.
ಕೊಲ್ಕತ್ತಾದಿಂದ: ಈ ಚಿತ್ತಾಕರ್ಷಕ ಕಲಾಕೃತಿ ಗಳನ್ನು ಪಶ್ಚಿಮ ಬಂಗಾಳದ ಕೊಲ್ಕತ್ತಾ ನಗರ ದಿಂದ ತರಿಸಲಾಗಿದ್ದು, ರಾಜಮಾರ್ಗವೊಂದಕ್ಕೆ ಇನ್ಕ್ಯಾಂಡಿಸನಲ್ ದೀಪ ಹೋಲುವ 60,000 ಎಲ್ಇಡಿ ಬಲ್ಬ್ಗಳನ್ನು ಅಳವಡಿಸಿರುವುದರಿಂದ ಸಯ್ಯಾಜಿರಾವ್ ರಸ್ತೆ ಜನಾಕರ್ಷಣೆಯಾಗಿದೆ. ಸಿಎಂ, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಂಸದರ ಸಲಹೆಯಂತೆ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ವ್ಯವಸ್ಥಾಪಕ ನಿರ್ದೇಶಕ ಡಾ. ಹೆಚ್.ಎಸ್. ಗೋಪಾಲಕೃಷ್ಣ, ಸೂಪರಿಂಟೆಂಡಿಂಗ್ ಇಂಜಿನಿಯರ್ ಕೆ.ಎಂ. ಮುನಿಗೋಪಾಲರಾಜು, ಎಕ್ಸಿಕ್ಯೂಟಿವ್ ಇಂಜಿ ನಿಯರ್ ಗಳಾದ ಹೆಚ್.ಎಸ್. ಸ್ವಾಮಿ, ಚಿಕ್ಕ ಸಿದ್ದೇಗೌಡ, ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿ ನಿಯರ್ಗಳಾದ ರುದ್ರೇಶ, ಏಸನ್ ಉಲ್ಲಾ ಖಾನ್, ಕಿರಣ್ ಅವರು ದೀಪಾಲಂಕಾರ ಮಾಡುವ ಕಾರ್ಯದಲ್ಲಿ ಕಳೆದ ಒಂದು ತಿಂಗಳಿಂದ ಶ್ರಮಿಸಿದ್ದಾರೆ.