ಮೈಸೂರು, ಜ.29(ಆರ್ಕೆ)-ಖಾಸಗಿ ಬ್ಯಾಂಕಿನ ಮಾಜಿ ಅಧಿಕಾರಿಯೋರ್ವರು ನಿಗೂಢವಾಗಿ ಸಾವನ್ನಪ್ಪಿದ್ದು, ಅವರ ಪತ್ನಿ ಮತ್ತು ಆಕೆಯ ಸಹೋದರನನ್ನು ವಶಕ್ಕೆ ಪಡೆ ದಿರುವ ಮೈಸೂರಿನ ವಿಜಯನಗರ ಠಾಣೆ ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ.
ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲದ ಮುಡಿಗುಂಡಂ ನಿವಾಸಿ ನಾಗೇಂದ್ರ ಮೂರ್ತಿ ಎಂಬುವರ ಪುತ್ರ ಸುಬ್ರಹ್ಮಣ್ಯ(35) ನಿಗೂಢ ವಾಗಿ ಸಾವನ್ನಪ್ಪಿದವರಾಗಿದ್ದು, ಇವರು ಈ ಹಿಂದೆ ಬೆಂಗಳೂರಿನ ಬಹುರಾಷ್ಟ್ರೀಯ ಖಾಸಗಿ ಬ್ಯಾಂಕ್ವೊಂದರ ಅಸಿಸ್ಟೆಂಟ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು.
ಅನಾರೋಗ್ಯ ಪೀಡಿತರಾಗಿದ್ದ ಸುಬ್ರಹ್ಮಣ್ಯ ತಮ್ಮ ಪತ್ನಿಗೆ ಸೇರಿದ 87 ಲಕ್ಷ ರೂ. ಗಳನ್ನು ಷೇರು ಮಾರುಕಟ್ಟೆ ವ್ಯವಹಾರ ಮತ್ತು ದುಶ್ಚಟಗಳಿಗೆ ಪೋಲು ಮಾಡಿದ್ದು, ಈ ಕಾರಣಕ್ಕಾಗಿ ಪತ್ನಿ ಹಾಗೂ ಇತರರು ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಆಸ್ಪತ್ರೆಗೆ ದಾಖ ಲಾಗಿದ್ದ ಸುಬ್ರಹ್ಮಣ್ಯ, ಕೆಲ ದಿನಗಳ ನಂತರ ಸಾವಿಗೀಡಾಗಿದ್ದಾರೆ. ಅವರು ತಮ್ಮ ಸಾವಿಗೂ ಮುನ್ನ ಪತ್ನಿ ಹಾಗೂ ಇತರರಿಂದ ತನ್ನ ಮೇಲೆ ನಡೆದ ಹಲ್ಲೆ ಕುರಿತು ಪೊಲೀ ಸರಿಗೆ ಹೇಳಿಕೆ ನೀಡಿದ್ದಾರೆ. ಸಾವಿನ ನಂತರ ಅವರ ತಂದೆ ನೀಡಿದ ದೂರನ್ನಾಧರಿಸಿ ಭಾರತೀಯ ದಂಡ ಸಂಹಿತೆ 304 (ಉದ್ದೇಶ ಪೂರ್ವಕವಲ್ಲದ ಕೊಲೆ) ರೆಡ್ವಿತ್ 34 (ಸಮಾನ ಕೃತ್ಯಗಳಲ್ಲಿ ಇತರರೂ ಭಾಗಿ ಯಾಗಿರುವುದು)ರಡಿ ಪ್ರಕರಣ ದಾಖಲಿಸಿ ಕೊಂಡು ತನಿಖೆ ಆರಂಭಿಸಿದ್ದಾರೆ.
ಸುಬ್ರಹ್ಮಣ್ಯ ಅವರ ಸಾವು ಹೇಗೆ ಸಂಭ ವಿಸಿದೆ? ಎಂಬುದರ ಬಗ್ಗೆ ವಿಧಿ-ವಿಜ್ಞಾನ ಪ್ರಯೋಗಾಲಯದ ವರದಿ ಬಂದ ನಂತರ ನಿಖರವಾಗಿ ತಿಳಿಯಲಿದೆ ಎಂದು `ಮೈಸೂರು ಮಿತ್ರ’ನಿಗೆ ತಿಳಿಸಿದ ವಿಜಯ ನಗರ ಠಾಣೆ ಇನ್ಸ್ಪೆಕ್ಟರ್ ಬಾಲಕೃಷ್ಣೇ ಗೌಡ, ಸುಬ್ರಹ್ಮಣ್ಯ ಸಾವಿಗೂ ಮುನ್ನ ನೀಡಿದ್ದ ಹೇಳಿಕೆ ಆಧರಿಸಿ ಹಲ್ಲೆ ಪ್ರಕರಣ ದಾಖಲಿಸಲಾಗಿತ್ತು. ಈಗ ಅವರು ಮೃತಪಟ್ಟಿರುವುದರಿಂದ ಐಪಿಸಿ 304ಕ್ಕೆ ಪ್ರಕರಣವನ್ನು ಬದಲಾಯಿಸ ಲಾಗಿದೆ ಎಂದರು.
ವಿವರ: ಸುಬ್ರಹ್ಮಣ್ಯ ಬೆಂಗಳೂರಿನ ಬಹು ರಾಷ್ಟ್ರೀಯ ಖಾಸಗಿ ಬ್ಯಾಂಕ್ವೊಂದರಲ್ಲಿ ಅಸಿಸ್ಟೆಂಟ್ ಮ್ಯಾನೇಜರ್ ಆಗಿ ಕೆಲಸ ಮಾಡು ತ್ತಿದ್ದ ವೇಳೆ ಮೂಲತಃ ಆನೇಕಲ್ನವರಾದ ವಿಚ್ಛೇದಿತ ಮಹಿಳೆ ರಶ್ಮಿ ಎಂಬುವರೊಂ ದಿಗೆ ಫೇಸ್ಬುಕ್ನಲ್ಲಿ ಗೆಳೆತನ ಬೆಳೆಸಿದ್ದಾರೆ. ರಶ್ಮಿ ಈ ಹಿಂದೆ ವಕೀಲರೊಬ್ಬರನ್ನು ವಿವಾಹ ವಾಗಿದ್ದು, ವಿಚ್ಛೇದನ ಪಡೆದು ಬೆಂಗಳೂ ರಿನ ಕಂಪನಿಯೊಂದರಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿ ದ್ದರು. ಇವರಿಬ್ಬರ ಸ್ನೇಹ ಪ್ರೇಮಕ್ಕೆ ತಿರುಗಿ ಕಳೆದ 2 ವರ್ಷಗಳ ಹಿಂದೆ ಇಬ್ಬರೂ ವಿವಾಹವಾಗಿದ್ದರು.
ನಂತರ ಬೆಂಗಳೂ ರಿನ ಉದ್ಯೋಗವನ್ನು ತೊರೆದು ಈ ದಂಪತಿ ಮೈಸೂರಿನ ವಿಜಯ ನಗರ 4ನೇ ಹಂತದ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ರಶ್ಮಿ ಮೈಸೂರಿನಲ್ಲೇ ಖಾಸಗಿ ಕಂಪನಿಯೊಂದರ ಉದ್ಯೋಗಿಯಾಗಿದ್ದು, ಅವರು ಆನೇಕಲ್ನ ಸಿರಿವಂತ ಕುಟುಂಬ ದವರಾಗಿದ್ದು, ಅವರ ತಂದೆ ಆಸ್ತಿ ಮಾರಾಟ ಮಾಡಿ ಬಂದಿದ್ದ 1 ಕೋಟಿ ರೂ.ಗಳನ್ನು ರಶ್ಮಿ ಅವರಿಗೆ ನೀಡಿದ್ದರು ಎನ್ನಲಾಗಿದೆ. ಪತ್ನಿ ರಶ್ಮಿ ಅವರಿಂದ ಹಂತಹಂತವಾಗಿ 87 ಲಕ್ಷ ರೂ.ಗಳನ್ನು ವ್ಯವಹಾರ ನಡೆಸು ವುದಕ್ಕೆಂದು ಪಡೆದಿದ್ದ ಸುಬ್ರಹ್ಮಣ್ಯ, ಸ್ವಲ್ಪ ಹಣವನ್ನು ಷೇರು ಮಾರುಕಟ್ಟೆ ವ್ಯವಹಾರಕ್ಕೆ ತೊಡಗಿಸಿ ನಷ್ಟ ಅನುಭವಿಸಿದ್ದ. ಅಲ್ಲದೇ ಕ್ರಿಕೆಟ್ ಬೆಟ್ಟಿಂಗ್ ಮುಂತಾದ ದುಶ್ಚಟ ಗಳಿಗೆ ಬಲಿಯಾಗಿ ಹಣವನ್ನೆಲ್ಲಾ ಪೋಲು ಮಾಡಿದ್ದ ಎಂದು ಹೇಳಲಾಗಿದೆ.
ತನ್ನ ಪತಿ ಲಕ್ಷಾಂತರ ರೂ.ಗಳನ್ನು ಪೋಲು ಮಾಡಿದ್ದರಿಂದ ಸಿಟ್ಟಾಗಿದ್ದ ರಶ್ಮಿ, ತನ್ನ ಸಹೋದರ ರಾಕೇಶ್ ಮತ್ತಿತರರನ್ನು ಕರೆಸಿಕೊಂಡು ಸುಬ್ರಹ್ಮಣ್ಯ ಜೊತೆ ಜಗಳ ವಾಡಿದ್ದರು ಎನ್ನಲಾಗಿದೆ. ಜ.15ರಂದು ಮುಡಿಗುಂಡಂಗೆ ಎಲ್ಲರೂ ತೆರಳಿ ಸುಬ್ರಹ್ಮಣ್ಯ ತಂದೆಯವರ ಮುಂದೆ ಪಂಚಾಯ್ತಿ ನಡೆಸಿ ಸುಬ್ರಹ್ಮಣ್ಯನನ್ನು ಅಲ್ಲೇ ಬಿಟ್ಟು ಬಂದಿ ದ್ದರಂತೆ. ಆ ವೇಳೆ ಅನಾರೋಗ್ಯದಿಂದ ಬಳಲುತ್ತಿದ್ದ ಆತನನ್ನು ತಂದೆ ನಾಗೇಂದ್ರ ಮೂರ್ತಿ ಕೊಳ್ಳೇಗಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಬಹು ಅಂಗಾಂಗ ಗಳ ಸಮಸ್ಯೆಯಿಂದ ಆತ ಬಳಲುತ್ತಿದ್ದ ಕಾರಣ ವೈದ್ಯರ ಸಲಹೆ ಮೇರೆಗೆ ಮೈಸೂ ರಿನ ಜೆಎಸ್ಎಸ್ ಆಸ್ಪತ್ರೆಗೆ ಜ.21ರಂದು ದಾಖಲಿಸಲಾಗಿತ್ತು. ಆತನ ಮೈಮೇಲೆ ಹಲ್ಲೆಯಿಂದಾದ ಗಾಯಗಳಿದ್ದ ಕಾರಣ ಆಸ್ಪತ್ರೆಯಿಂದ ಮೆಮೋ ಬಂದ ಹಿನ್ನೆಲೆ ಯಲ್ಲಿ ವಿಜಯನಗರ ಪೊಲೀಸರು ಆಸ್ಪತ್ರೆಗೆ ತೆರಳಿ ಸುಬ್ರಹ್ಮಣ್ಯ ಅವರಿಂದ ಹೇಳಿಕೆ ಪಡೆದು ಪತ್ನಿ, ಆಕೆಯ ಸಹೋದರ ಸೇರಿದಂತೆ 9 ಮಂದಿ ವಿರುದ್ಧ ಹಲ್ಲೆ ಪ್ರಕರಣ ದಾಖ ಲಿಸಿದ್ದರು. ಜ.26ರಂದು ಸುಬ್ರಹ್ಮಣ್ಯ ಮೃತ ಪಟ್ಟ ಹಿನ್ನೆಲೆಯಲ್ಲಿ ಐಪಿಸಿ 304 ಮತ್ತು ರೆಡ್ವಿತ್ 34ರಡಿ ಪ್ರಕರಣ ದಾಖಲಿಸಿ ಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.