ಮೈಸೂರು: ನವೀಕೃತಗೊಂಡಿರುವ ಮೈಸೂರಿನ ಶ್ರೀ ಜಯಚಾಮರಾಜೇಂದ್ರ ಕಲಾ ಗ್ಯಾಲರಿಯು ಜುಲೈನಲ್ಲಿ ಪ್ರವಾಸಿಗರ ವೀಕ್ಷಣೆಗೆ ತೆರೆದುಕೊಳ್ಳಲಿದೆ.
ಜಗನ್ಮೋಹನ ಅರಮನೆಯಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ರಾಜಮಾತೆ ಶ್ರೀಮತಿ ಪ್ರಮೋದಾದೇವಿ ಒಡೆ ಯರ್ ಅವರು, ರಿಪೇರಿ, ನವೀ ಕರಣಕ್ಕಾಗಿ ಜಗನ್ಮೋಹನ ಅರ ಮನೆಯ ಶ್ರೀ ಜಯಚಾಮ ರಾಜೇಂದ್ರ ಆರ್ಟ್ ಗ್ಯಾಲರಿಯನ್ನು ಕಳೆದ 8 ತಿಂಗಳ ಹಿಂದೆ ಬಂದ್ ಮಾಡಲಾಗಿತ್ತು. ಈಗ ಶೇ.90ರಷ್ಟು ಕೆಲಸ ಪೂರ್ಣಗೊಂಡಿದೆ ಎಂದರು. ಇನ್ನೂ ನವೀಕರಣ ಕೆಲಸ ನಡೆ ಯುತ್ತಿದ್ದು, 1861ರಲ್ಲಿ ನಿರ್ಮಾಣ ಗೊಂಡ ಅತೀ ಹಳೆಯದಾದ ಈ ಕಲಾ ಗ್ಯಾಲರಿಯ ಕಟ್ಟಡ ಅಲ್ಲಲ್ಲಿ ಶಿಥಿಲಗೊಂಡಿತ್ತು. ಆದ್ದರಿಂದ ಒಂದೇ ಭಾರಿಗೆ ಸಂಪೂರ್ಣವಾಗಿ ರಿಪೇರಿ ಮಾಡಲಾಗದು. ನಿರಂತರವಾಗಿ ಆಧುನೀಕರಣ ಕಾಮಗಾರಿ ಮಾಡಬೇಕಾಗುತ್ತದೆ ಎಂದು ತಿಳಿಸಿದರು. ಈಗ ಬಹುತೇಕ ಕೆಲಸ ಮುಗಿದಿರು ವುದರಿಂದ ಜೂನ್ 2ನೇ ವಾರದಿಂದ ಪ್ರಾಯೋಗಿಕವಾಗಿ ವೀಕ್ಷಣೆಗೆ ಅವಕಾಶ ನೀಡಿ ಪ್ರವಾಸಿಗರಿಂದ ಅಭಿಪ್ರಾಯ, ಸಲಹೆಗಳನ್ನು ಪಡೆದು ಜುಲೈ ಮಾಹೆಯಿಂದ ಅಧಿಕೃತ ವಾಗಿ ಆರ್ಟ್ ಗ್ಯಾಲರಿಗೆ ಪ್ರವೇಶಾವಕಾಶ ನೀಡಲಾಗುವುದು ಎಂದು ತಿಳಿಸಿದರು. ಗ್ಯಾಲರಿಯ ನೆಲ, ಛಾವಣಿ, ಗೋಡೆ ಗಳೂ ಸೇರಿದಂತೆ ಎಲ್ಲಾ ಸಿವಿಲ್ ಕೆಲಸಗಳನ್ನು ಸುಣ್ಣದ ಗಾರೆ ಬಳಸಿ ಮಾಡಲಾಗಿದೆ. ಎಲ್ಲಿಯೂ ಸಿಮೆಂಟ್ ಬಳಸ ದಿರುವುದು ವಿಶೇಷ. ಗೋಡೆಗಳು, ಮರಗಳಿಗೆ 6ರಿಂದ 8 ಲೇಯರ್ ಬಣ್ಣ ಬಳಿಯಲಾಗಿತ್ತು. ಅದನ್ನು ತೆಗೆದು ಪಾರಂಪರಿಕ ಸ್ವರೂಪದಲ್ಲಿ ಬಿಳಿ ಬಣ್ಣ ಬಳಿದು ಮರದ ವಸ್ತುಗಳಿಗೆ ವಾರ್ನಿಷ್ ಮಾಡಿದ್ದೇವೆ ಎಂದು ಪ್ರಮೋದಾದೇವಿ ಒಡೆಯರ್ ನುಡಿದರು.
ಆರ್ಟ್ ಗ್ಯಾಲರಿಗೆ ಸಿಸಿಟಿವಿ ಕ್ಯಾಮರಾಗಳು, ಅಗ್ನಿ ಶಾಮಕ ಸಲಕರಣೆಗಳು, ಕಲಾಕೃತಿ ಮತ್ತು ಚಿತ್ರಕಲೆಗಳಿಗೆ ಫೋಕಸ್ ಲೈಟ್ ಸೇರಿದಂತೆ ಹಲವು ಸುರಕ್ಷತಾ ಕ್ರಮಗಳನ್ನು ಒದಗಿಸಲಾಗಿದೆ. ಅಲ್ಲಿನ ಹಳೆಯ ಅಪರೂಪದ ಕಲಾಕೃತಿ, ಚಿತ್ರಕಲೆಗಳನ್ನು ಯಥಾವತ್ತಾಗಿ ಸಂರಕ್ಷಿಸಿದ್ದೇವೆ ಎಂದು ಅವರು ನುಡಿದರು.
ಮೂಲ ಸ್ವರೂಪ: ಇದೇ ಮೊದಲ ಭಾರಿಗೆ ಆರ್ಟ್ ಗ್ಯಾಲರಿ ಕಟ್ಟಡವನ್ನು ಅದರ ಮೂಲ ಸ್ವರೂಪ ಹಾಗೂ ಪಾರಂಪರಿಕತೆಗೆ ಧಕ್ಕೆ ಬಾರದಂತೆ ಗಾಯತ್ರಿ ಮತ್ತು ನಮಿತ ಆರ್ಕಿಟೆಕ್ಟ್ಸ್(ಜಿಎನ್ಎ) ಸಂಸ್ಥೆಯ ನುರಿತ ಕೆಲಸಗಾರರಿಂದ ರಿಪೇರಿ ಮಾಡಿಸಿ ನವೀಕರಿಸಲಾಗಿದೆ. ಆ ಕಾರಣಕ್ಕಾಗಿ ಇಡೀ ಕಟ್ಟಡ ಅಂದ ಹೆಚ್ಚಾಗಿದೆ ಎಂದು ರಾಜಮಾತೆ ಅವರು ಇದೇ ಸಂದರ್ಭ ನುಡಿದರು.
ಪ್ರವೇಶ ಶುಲ್ಕ: ಸಂಪೂರ್ಣ ಸುಸಜ್ಜಿತ ರೀತಿಯಲ್ಲಿ ನವೀಕರಣಗೊಂಡಿದ್ದು, ಅದೇ ಮಾದರಿಯಲ್ಲಿ ಕಲಾ ಗ್ಯಾಲರಿಯನ್ನು ನಿರ್ವಹಣೆ ಮಾಡಬೇಕಾಗಿರುವ ಕಾರಣ, ಸಹಜವಾಗಿ ಪ್ರವೇಶ ಟಿಕೆಟ್ ದರವನ್ನು ಹೆಚ್ಚಿಸುವುದು ಅನಿವಾರ್ಯವಾಗುತ್ತದೆ. ಪ್ರಸ್ತುತ ಇದ್ದ 75 ರೂ.ಗಳ ಬದಲಾಗಿ ಟಿಕೆಟ್ ದರವನ್ನು 125ರಿಂದ 150 ರೂ.ಗಳಿಗೆ ಹೆಚ್ಚಿಸಲು ಚಿಂತನೆ ನಡೆಸಲಾಗಿದೆ ಎಂದೂ ತಿಳಿಸಿದರು.
2,000 ಚಿತ್ರಕಲೆಗಳು: ಈ ಹಿಂದೆ ಇದ್ದಂತೆಯೇ 2000 ಕಲಾಕೃತಿಗಳು ಹಾಗೂ ಚಿತ್ರಕಲೆಗಳನ್ನು ಆರ್ಟ್ ಗ್ಯಾಲರಿಯಲ್ಲಿ ಪ್ರದರ್ಶಿಸಲಾಗುವುದು. ಸ್ಥಳಾವಕಾಶದ ಕೊರತೆಯಿಂದಾಗಿ ಇನ್ನೂ ಹಲವು ಪೇಂಟಿಂಗ್ಗಳನ್ನು ಸ್ಟೋರ್ನಲ್ಲಿ ಇರಿಸಿದ್ದೇವೆ. ಬೆಂಗಳೂರು ಮೂಲದ ಜಿ.ಎನ್. ಹೆರಿಟೇಜ್ ಮ್ಯೂಟರ್ಸ್ನ ಪ್ರಧಾನ ಕನ್ಸರ್ವೇಷನ್ ಆರ್ಕಿಟೆಕ್ಟ್ ಶರತ್ಚಂದ್ರ ಅವರ ನೇತೃತ್ವದಲ್ಲಿ ಕಲಾ ಗ್ಯಾಲರಿಯ ನವೀಕರಣ ಕೆಲಸ ನಡೆಯುತ್ತದೆ ಎಂದೂ ಪ್ರಮೋದಾದೇವಿ ಒಡೆಯರ್ ನುಡಿದರು.
ಚಾಮುಂಡಿವಿಹಾರ ಕ್ರೀಡಾಂಗಣ ಬಳಿಯ ಶ್ರೀ ಚಾಮಂಡೇಶ್ವರಿ ದೇವಸ್ಥಾನ, ಗನ್ಹೌಸ್, ವಾಣಿವಿಲಾಸ ಮಹಿಳಾ ಕಾಲೇಜು, ಅರಸು ಬೋರ್ಡಿಂಗ್ ಶಾಲಾ ಕಟ್ಟಡ, ರಾಜೇಂದ್ರ ವಿಲಾಸ ಅರಮನೆ, ಬೆಂಗಳೂರು ಅರಮನೆಯ ಒಂದು ಭಾಗ ಹಾಗೂ ಅಲ್ಲಿನ ಆಂಜನೇಯಸ್ವಾಮಿ ದೇವಸ್ಥಾನಗಳ ನವೀಕರಣ ಕಾಮಗಾರಿಯನ್ನು ಕೈಗೊಂಡಿದ್ದು ಅವು ಪ್ರಗತಿಯಲ್ಲಿವೆ ಎಂದೂ ರಾಜಮಾತೆ ಇದೇ ವೇಳೆ ತಿಳಿಸಿದರು. ಶ್ರೀ ಜಯಚಾಮರಾಜೇಂದ್ರ ಆರ್ಟ್ ಗ್ಯಾಲರಿ ಟ್ರಸ್ಟ್ ಕಾರ್ಯದರ್ಶಿ ಎಂ.ಲಕ್ಷ್ಮೀನಾರಾಯಣ್, ಎಸ್ಡಿಎನ್ ಒಡೆಯರ್ ಫೌಂಡೇಷನ್ ಕಾರ್ಯದರ್ಶಿ ರೆಜಿನಾಲ್ಡ್ ವೆಸ್ಲಿ, ಆರ್ಕಿಟೆಕ್ಟ್ ಶರತ್ಚಂದ್ರ ಹಾಗೂ ಇತರರು ಪತ್ನಿಕಾಗೋಷ್ಠಿ ವೇಳೆ ಉಪಸ್ಥಿತರಿದ್ದರು.