ವಿಶ್ವಮಾನವ ಸಂದೇಶ ಒಂದು ವರ್ಗಕ್ಕೆ ಸೀಮಿತವಲ್ಲ ಮಾಜಿ ಸಚಿವ ಎನ್.ಚೆಲುವರಾಯಸ್ವಾಮಿ ಅಭಿಮತ
ಮಂಡ್ಯ

ವಿಶ್ವಮಾನವ ಸಂದೇಶ ಒಂದು ವರ್ಗಕ್ಕೆ ಸೀಮಿತವಲ್ಲ ಮಾಜಿ ಸಚಿವ ಎನ್.ಚೆಲುವರಾಯಸ್ವಾಮಿ ಅಭಿಮತ

December 30, 2019

ಮಂಡ್ಯ, ಡಿ.29(ನಾಗಯ್ಯ)- ಕುವೆಂಪು ಅವರ ವಿಶ್ವಮಾನವ ಸಂದೇಶವನ್ನು ಒಂದು ವರ್ಗಕ್ಕೆ ಸೀಮಿತಗೊಳಿಸುವುದು ಸರಿಯಲ್ಲ ಎಂದು ಮಾಜಿ ಸಚಿವ ಎನ್. ಚೆಲುವರಾಯಸ್ವಾಮಿ ಅಭಿಪ್ರಾಯಪಟ್ಟರು.

ನಗರದ ಸಿಲ್ವರ್ ಜ್ಯೂಬಿಲಿ ಪಾರ್ಕ್‍ನಲ್ಲಿ ಕರುನಾಡ ಸೇವಕರು-ಕನ್ನಡಪರ ಸಂಘಟನೆ ಗಳ ಒಕ್ಕೂಟ ಏರ್ಪಡಿಸಿದ್ದ ವಿಶ್ವಮಾನವ ಕುವೆಂಪು ಜನ್ಮದಿನದ ಪ್ರಯುಕ್ತ ಕುವೆಂಪು ಕನ್ನಡ ಹಬ್ಬ ಮತ್ತು ಜಾನಪದ ಜಾತ್ರೆ ಉದ್ಘಾಟಿಸಿ ಅವರು ಮಾತನಾಡಿದರು.

ಮಂತ್ರ ಮಾಂಗಲ್ಯ ಅಳವಡಿಸಿಕೊಳ್ಳಬೇಕು. ಗುಡಿ, ಚರ್ಚ್, ಮಸೀದಿಗಳನ್ನು ಬಿಟ್ಟು ಹೊರಬನ್ನಿ, ಮನುಜಮತ ವಿಶ್ವಪಥ, ವಿಶ್ವಮಾನವರಾಗಿ ಎಂಬ ಸಂದೇಶ ಸಾರಿದವರು ಕುವೆಂಪು ಅಂತಹವರನ್ನು ಇಂದು ಒಂದು ವರ್ಗಕ್ಕೆ ಸೀಮಿತಗೊಳಿಸುವ ಕೆಲಸವಾಗು ತ್ತಿದೆ ಅದು ಸರಿಯಲ್ಲ ಎಂದರು. ಸಮಾಜಕ್ಕೆ ಮಹತ್ತರ ಕೊಡುಗೆ ನೀಡಿದ ಮಹಾನ್ ವ್ಯಕ್ತಿಗಳನ್ನು ಜಾತಿ, ಧರ್ಮದ ಹಿನ್ನೆಲೆಯಲ್ಲಿ ಸೀಮಿತಗೊಳಿಸಬಾರದು. ಈ ನಿಟ್ಟಿನಲ್ಲಿ ಯುವಜನರು ಮುಂದಾಗಬೇಕು, ರಾಷ್ಟ್ರಕವಿ, ರಸ ಋಷಿ ಕುವೆಂಪು ಅವರ ಚಿಂತನೆ ಮೈಗೂಡಿಸಿಕೊಂಡು ಜೀವನ ಸಾಗಿಸೋಣ ಎಂದು ಕರೆ ನೀಡಿದರು.

ರಾಜ್ಯದಲ್ಲಿ ಹಲವು ಸಂಘಟನೆಗಳು ಅಸ್ತಿತ್ವದಲ್ಲಿದೆ. ಆದರೆ ಜನಪರವಾಗಿರುವ, ಕಾಳಜಿ ಹೊಂದಿರುವ ಸಂಘಟನೆಗೆ ಸಾರ್ವಜನಿಕ ಬೆಂಬಲ ಸದಾ ಇರುತ್ತದೆ ಎಂದರು. ರಾಜೀವ್ ಗಾಂಧಿ ಆರೋಗ್ಯ ವಿವಿ ಸಿಂಡಿಕೇಟ್ ಸದಸ್ಯ ಹೆಚ್.ಎನ್.ರವೀಂದ್ರ ಮಾತನಾಡಿ, ಕುವೆಂಪು ತತ್ವಗಳನ್ನು ಬಳಸಿಕೊಳ್ಳಲು ನಾವು ವಿಫಲರಾಗಿದ್ದೇವೆ ಎಂದು ವಿಷಾದಿಸಿದರು.

ಕಾಂಗ್ರೆಸ್ ಮುಖಂಡ ಗಣಿಗ ರವಿಕುಮಾರ್ ಮಾತನಾಡಿ, ಶೇ.100ರಷ್ಟು ಕನ್ನಡ ಬಳಕೆ ಮಾಡುವ ಮಂಡ್ಯ ಜಿಲ್ಲೆಯ ಜೊತೆ ಕುವೆಂಪು ಅವರು ಅವಿನಾಭಾವ ಸಂಬಂಧ ಹೊಂದಿದ್ದರು ಎಂದು ಪ್ರಶಂಸೆ ವ್ಯಕ್ತಪಡಿಸಿದರು. ವೇದಿಕೆಯಲ್ಲಿ ಕರುನಾಡ ಸೇವಕರು ರಾಜ್ಯಾಧ್ಯಕ್ಷ ಲೋಕೇಶ್ ಗೌಡ, ನಗರಸಭೆ ಮಾಜಿ ಅಧ್ಯಕ್ಷ ಅರುಣ್ ಕುಮಾರ್, ಸದಸ್ಯ ನಾಗೇಶ್, ಜನಪರ ಹೋರಾಟ ಗಾರರಾದ ಎಂ.ಬಿ.ನಾಗಣ್ಣಗೌಡ, ಸಂಪತ್ ಗೌಡ ಮೊದಲಾದವರು ಹಾಜರಿದ್ದರು.

ಇದಕ್ಕೂ ಮುನ್ನಾ ನಗರದ ಕಾಳಿಕಾಂಬ ದೇವಾಲಯದ ಬಳಿಯಿಂದ ಪೇಟೆಬೀದಿ, ಆರ್.ಪಿ ರಸ್ತೆ, ವಿವಿ ರಸ್ತೆ ಮೂಲಕ ಮೆರವಣಿಗೆ ವೇದಿಕೆ ತಲುಪಿತು. 500 ಅಡಿ ಉದ್ದದ ಕನ್ನಡ ಬಾವುಟ ಹಿಡಿದು ಶಾಲಾ ಕಾಲೇಜು ವಿದ್ಯಾರ್ಥಿಗಳು ಗಮನ ಸೆಳೆದರು. ಕುವೆಂಪು ಭಾವಚಿತ್ರವನ್ನು ಬೆಳ್ಳಿರಥದಲ್ಲಿಟ್ಟು ಮೆರವಣಿಗೆ ನಡೆಸಲಾಯಿತು. ಆರ್‍ಎಪಿಸಿಎಂಎಸ್ ಮುಂಭಾಗದ ಕುವೆಂಪು ಪ್ರತಿಮೆಗೆ ಗಣ್ಯರು ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.

Translate »