ಹುಟ್ಟೂರಲ್ಲಿ ಅಂಬಿ ಅಂತ್ಯಕ್ರಿಯೆಗೆ ಗ್ರಾಮಸ್ಥರ ಆಗ್ರಹ
ಮಂಡ್ಯ, ಮೈಸೂರು

ಹುಟ್ಟೂರಲ್ಲಿ ಅಂಬಿ ಅಂತ್ಯಕ್ರಿಯೆಗೆ ಗ್ರಾಮಸ್ಥರ ಆಗ್ರಹ

November 26, 2018

ಭಾರತೀನಗರ: ಚಿತ್ರನಟ ಅಂಬರೀಶ್ ಅಂತ್ಯಕ್ರಿಯೆಯನ್ನು ಅವರ ಹುಟ್ಟೂರು ದೊಡ್ಡರಸಿನ ಕೆರೆಯಲ್ಲೇ ನಡೆಸಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು ದೊಡ್ಡ ರಸಿನಕೆರೆ ಗೇಟ್ ಬಳಿ ಮದ್ದೂರು-ಮಳವಳ್ಳಿ ಮುಖ್ಯರಸ್ತೆಯಲ್ಲಿ ವಾಹನ ತಡೆದು ಪ್ರತಿಭಟನೆ ನಡೆಸಿದರು. ಅಂಬರೀಶ್ ಪರ ಘೋಷಣೆ ಕೂಗಿದ ದೊಡ್ಡರಸಿನಕೆರೆ ಗ್ರಾಮಸ್ಥರು, ಅಂಬರೀಶ್ ಅಂತ್ಯಕ್ರಿಯೆಯನ್ನು ಬೆಂಗಳೂರಿನಲ್ಲಿ ನಡೆಸದೇ ಅವರ ಹುಟ್ಟೂರಿ ನಲ್ಲಿಯೇ ನೆರವೇರಿಸಬೇಕೆಂದು ಸರ್ಕಾರವನ್ನು ಆಗ್ರಹಿಸಿದರು.

ಗ್ರಾಮದ ಮುಖಂಡರಾದ ಜಯರಾಮು ಮಾತನಾಡಿ, ದೊಡ್ಡರಸಿನ ಕೆರೆ ಅಂಬರೀಶ್ ಅವರ ಹುಟ್ಟೂರು. ಅವರು ಹಾಗೂ ನಮ್ಮ ನಡುವೆ ಅಪಾರ ಪ್ರೀತಿಯಿತ್ತು. ಅವರು ಆಗಾಗ ಗ್ರಾಮಕ್ಕೆ ಬಂದು ಜನರ ಕಷ್ಟಸುಖ ವಿಚಾರಿಸುತ್ತಿದ್ದರು. ಯಾವುದೇ ಚುನಾವಣೆ ನಡೆದರೂ ಪ್ರತಿ ಬಾರಿಯೂ ಗ್ರಾಮಕ್ಕೆ ಬಂದು ಮತ ಚಲಾಯಿಸುತ್ತಿದ್ದರು. ಹೀಗಾಗಿ ಅವರ ಹಾಗೂ ಗ್ರಾಮಸ್ಥರ ನಡುವಿನ ಬಾಂಧವ್ಯ ಅಪಾರ. ಅವರ ಅಂತ್ಯಕ್ರಿಯೆಯನ್ನು ಹುಟ್ಟೂರಿನಲ್ಲಿ ನಡೆಸಲು ರಾಜ್ಯ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಅರ್ಧ ಗಂಟೆಗೂ ಹೆಚ್ಚು ಕಾಲ ರಸ್ತೆ ತಡೆ ನಡೆಸಿದ್ದರಿಂದ ವಾಹನ ಸಂಚಾರ ಅಸ್ತವ್ಯಸ್ತವಾಗಿ, ವಾಹನ ಚಾಲಕರು ಪರದಾಡುವಂತಾಗಿತ್ತು. ಪ್ರತಿಭಟನೆಯಲ್ಲಿ ಹುಚ್ಚೇಗೌಡ, ಪ್ರದೀಪ್, ಸಣ್ಣೇಗೌಡ, ಸತೀಶ್, ಕೊಂಡಯ್ಯ, ಜಗದೀಶ್, ಕೃಷ್ಣ ಸೇರಿದಂತೆ ಹಲವರಿದ್ದರು.

Translate »