ವಿವೇಕಾನಂದರು ಆಧುನಿಕ ಭಾರತ ಯುವಜನರ ಪ್ರೇರಕಶಕ್ತಿ
ಚಾಮರಾಜನಗರ

ವಿವೇಕಾನಂದರು ಆಧುನಿಕ ಭಾರತ ಯುವಜನರ ಪ್ರೇರಕಶಕ್ತಿ

January 13, 2020

ಚಾಮರಾಜನಗರ, ಜ.12- ಏಳಿ ಏದ್ದೇಳಿ, ಗುರಿ ಮುಟ್ಟುವ ತನಕ ನಿಲ್ಲದಿರಿ ಸಂದೇಶದ ಮೂಲಕ ದೇಶದ ಯುವಜನತೆಯನ್ನು ಬಡಿ ದೆಬ್ಬಿಸಿದ ಸ್ವಾಮಿ ವಿವೇಕಾನಂದರು ಆಧುನಿಕ ಭಾರತದ ಯುವಜನರ ಪ್ರೇರಕಶಕ್ತಿಯಾಗಿದ್ದಾರೆ ಎಂದು ಶಾಸಕ ಸಿ. ಪುಟ್ಟರಂಗಶೆಟ್ಟಿ ಅಭಿಪ್ರಾಯಪಟ್ಟರು.

ನಗರದ ಜೆ.ಎಚ್. ಪಟೇಲ್ ಸಭಾಂಗಣ ದಲ್ಲಿಂದು ರಾಷ್ಟ್ರೀಯ ಯುವ ದಿನದ ಅಂಗವಾಗಿ ಜಿಲ್ಲಾಡಳಿತ ಹಾಗೂ ಕಾಲೇಜು ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ ಹಾಗೂ ಯುವ ಸಬಲೀಕರಣ ಕೇಂದ್ರದ ಉದ್ಘಾಟನಾ ಸಮಾ ರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ವಿವೇಕಾನಂದರದ್ದು ಸ್ಫೂರ್ತಿದಾಯಕ ವ್ಯಕ್ತಿತ್ವ. ವಿದ್ಯಾರ್ಥಿ ಹಾಗೂ ಯುವಜನರ ಜೀವನ ಬಹಳ ಅಮೂಲ್ಯವಾದದ್ದು, ವಿವೇಕಾನಂದರ ಜೀವನ, ತ್ಯಾಗ, ಪರಿಶ್ರಮ, ಮೌಲ್ಯಯುತ ವಿಚಾರಧಾರೆಗಳನ್ನು ಅಳವಡಿಸಿಕೊಂಡು ಅವರಂತೆ ಸಾಧನೆ ಗೈಯ್ಯಬೇಕು. ಅವರ ದೇಶಪ್ರೇಮ ನಮಗೆಲ್ಲರಿಗೂ ಮಾದರಿಯಾಗಿದೆ ಎಂದರು.

ಜಿಲ್ಲಾ ಪಂಚಾಯತ್ ಸದಸ್ಯ ಬಾಲರಾಜು ಮಾತನಾಡಿ, ವಿವೇಕಾನಂದರ ಜೀವಿತಾವಧಿ ಕೇವಲ 39 ವರ್ಷಗಳಾದರೂ ದೊಡ್ಡ ಸಾಧನೆ ಮಾಡಿದರು. ದೇಶಪ್ರೇಮವನ್ನು ನಾಡಿನಾದ್ಯಂತ ಪಸರಿಸಿ ರಾಷ್ಟ್ರೀ ಯತೆಯನ್ನು ಬಿತ್ತಿ ಬೆಳೆಸಿದರು. 1893ರ ಚಿಕಾಗೋ ವಿಶ್ವಧರ್ಮ ಸಮ್ಮೇಳನದಲ್ಲಿ ತಮ್ಮ ಮಾತುಗಳಿಂದ ಇಡೀ ವಿಶ್ವವೇ ಭಾರತದತ್ತ ನೋಡುವಂತೆ ಮಾಡಿದ ಕೀರ್ತಿ ವಿವೇಕಾನಂದರದ್ದು ಎಂದು ತಿಳಿಸಿದರು.

ಮುಖ್ಯ ಭಾಷಣ ಮಾಡಿದ ಮೈಸೂರಿನ ಶ್ರೀ ರಾಮಕೃಷ್ಣಾಶ್ರಮದ ಸ್ವಾಮಿ ಸರ್ವಜಯಾನಂದಜಿ ಮಹಾರಾಜ್, ಸ್ವಾಮಿ ವಿವೇಕಾನಂದರು ಭಾರತೀಯ ಸಂಸ್ಕøತಿಯ ಪ್ರತೀಕವಾಗಿದ್ದರು. ಹೆಚ್ಚಿನ ಸ್ವಾತಂತ್ರ್ಯ ಹೋರಾಟಗಾರರಿಗೆ ಸ್ಫೂರ್ತಿಯ ಚಿಲುಮೆ ಯಾಗಿದ್ದ ವಿವೇಕಾನಂದರು ದೇಶಾದ್ಯಂತ ಪ್ರವಾಸ ಮಾಡಿ ಭಾರತದ ಸ್ಥಿತಿ-ಗತಿಗಳನ್ನು ಅರಿತರು. ಬಡವರ, ದೀನ ದಲಿತರ ಹಾಗೂ ದೇಶದ ಹೀನಸ್ಥಿತಿಗೆ ಧರ್ಮ, ಆಧ್ಯಾತ್ಮವನ್ನು ನಿರ್ಲಕ್ಷಿಸಿ ರುವುದೇ ಕಾರಣವೆಂದು ಪ್ರತಿಪಾದಿಸಿದರು. ಭಾರತದ ಸಂಸ್ಕøತಿ, ಪರಂಪರೆಯನ್ನು ಜಗತ್ತಿಗೆ ಪರಿಚಯಿಸಿದರು. ಪ್ರತಿಯೊಬ್ಬರು ಅವರ ಚಿಂತನೆÀಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಸರ್ವಜಯಾನಂದಜಿ ಮಹಾರಾಜ್ ತಿಳಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್. ಆನಂದ್ ಮಾತನಾಡಿ, ದೇಶದ ಪ್ರಗತಿಗೆ ಯುವಶಕ್ತಿಯ ಅಗತ್ಯವನ್ನು ಅರಿತಿದ್ದ ವಿವೇಕಾನಂದರು ಯುವಕರನ್ನು ಒಗ್ಗೂಡಿಸಿ ತಮ್ಮ ಮೌಲ್ಯಯುತ ಚಿಂತನೆಗಳು, ತರ್ಕಬದ್ಧ ವಿಚಾರಗಳನ್ನು ತುಂಬಿ ರಾಷ್ಟ್ರ ನಿರ್ಮಾಣದತ್ತ ಸಾಗುವಂತೆ ಮಾಡಿದರು. ಇಂದಿನ ಯುವಕರು ಫೇಸ್‍ಬುಕ್, ವ್ಯಾಟ್ಸಪ್, ಟ್ಟಿಟ್ಟರ್‍ನಲ್ಲಿ ಮುಳುಗದೆ ವಿವೇಕಾನಂದರ ಅದರ್ಶಗಳನ್ನು ಪಾಲಿಸಬೇಕು ಎಂದರು.

ಇದೇ ಸಂದರ್ಭದಲ್ಲಿ ಕಾಲೇಜು ಶಿಕ್ಷಣ ಇಲಾಖೆ ವತಿಯಿಂದ ಉಚಿತ ಲ್ಯಾಪ್‍ಟಾಪ್ ಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. ವಿವೇಕಾನಂದರ ಜಯಂತಿ ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಿದ್ದ ರಸಪ್ರಶ್ನೆ, ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ, ನೆನಪಿನ ಕಾಣಿಕೆ ನೀಡಲಾಯಿತು.

ತಾಲೂಕು ಪಂಚಾಯಿತಿ ಅಧ್ಯಕ್ಷ ಎಚ್.ಎನ್. ಶೋಭಾ, ತಹಶೀಲ್ದಾರ್ ಮಹೇಶ್, ಪದವಿ ಪೂರ್ವ ಸಿಕ್ಷಣ ಇಲಾಖೆಯ ಉಪನಿರ್ದೇಶಕ ಡಿ.ಎಸ್. ಕೃಷ್ಣಮೂರ್ತಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಎಚ್.ಎಸ್. ಪ್ರೇಮಲತಾ, ಎಲ್ಲಾ ಕಾಲೇಜುಗಳ ಪ್ರಾಂಶು ಪಾಲರು, ಇತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಇದಕ್ಕೂ ಮೊದಲು ನಗರದ ಚಾಮರಾಜೇಶ್ವರ ದೇವಸ್ಥಾನದಿಂದ ಜಿಲ್ಲಾಡಳಿತ ಭವನದವರೆಗೆ ಹಮ್ಮಿ ಕೊಂಡಿದ್ದ ಜಾಥಾ ಕಾರ್ಯಕ್ರಮದಲ್ಲಿ ವಿವಿಧ ಶಾಲಾ- ಕಾಲೇಜುಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Translate »