ಭೇರ್ಯದಲ್ಲಿ ಮಾಂಸಹಾರಿ ಹೋಟೆಲ್ ಮಾಲೀಕನ ಹತ್ಯೆ
ಮೈಸೂರು

ಭೇರ್ಯದಲ್ಲಿ ಮಾಂಸಹಾರಿ ಹೋಟೆಲ್ ಮಾಲೀಕನ ಹತ್ಯೆ

January 11, 2020

ಭೇರ್ಯ, ಜ.10(ಮಹೇಶ್)-ಹಂದಿ ಮಾಂಸದ ಹೋಟೆಲ್ ಮಾಲೀಕನನ್ನು ಹತ್ಯೆ ಮಾಡಿರುವ ಘಟನೆ ಕಳೆದ ರಾತ್ರಿ ಭೇರ್ಯ ಗ್ರಾಮದಲ್ಲಿ ನಡೆದಿದೆ.

ಇಲ್ಲಿಗೆ ಸಮೀಪದ ಕಂಚಿನಕೆರೆ ಗ್ರಾಮದ ಶಿವಕುಮಾರ್(48) ಹತ್ಯೆಗೀಡಾದವರಾಗಿದ್ದು, ಇವರು ಹಲವಾರು ತಿಂಗಳುಗಳಿಂದ ಭೇರ್ಯ ಗ್ರಾಮದಲ್ಲಿ ಹಂದಿ ಮಾಂಸದ ಹೋಟೆಲ್ ನಡೆಸುತ್ತಿದ್ದಾರೆ. ಕಳೆದ ರಾತ್ರಿ ಇವರು ಮನೆಗೆ ಹೋಗಿರಲಿಲ್ಲ. ಇದರಿಂದ ಆತಂಕಗೊಂಡಿದ್ದ ಕುಟುಂಬಸ್ಥರು ತಮ್ಮ ಸಂಬಂಧಿಕರಿಗೆ ಸುದ್ದಿ ಮುಟ್ಟಿಸಿದ್ದರು. ಸಂಬಂಧಿಕರು ಹೋಟೆಲ್ ಬಳಿ ಬಂದು ಬೀಗ ಹಾಕದೇ ಮುಚ್ಚಿದ್ದ ಬಾಗಿಲು ತೆರೆದು ನೋಡಿದಾಗ ಶಿವಕುಮಾರ್ ಹತ್ಯೆಗೀಡಾಗಿರುವುದು ಕಂಡು ಬಂದಿದೆ.

ಶಿವಕುಮಾರ್ ಅವರ ತಲೆಗೆ ಯಾವುದೋ ಆಯುಧದಿಂದ ಹೊಡೆದು ಹತ್ಯೆ ಮಾಡಲಾಗಿದ್ದು, ಅವರ ಬಾಯಿ ಮತ್ತು ಕಿವಿಯಿಂದ ರಕ್ತ ಬಂದಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಯಾವ ಕಾರಣಕ್ಕಾಗಿ, ಯಾರು ಇವರನ್ನು ಹತ್ಯೆ ಮಾಡಿದ್ದಾರೆ ಎಂಬುದು ತನಿಖೆಯ ನಂತರ ತಿಳಿಯಬೇಕಾಗಿದೆ. ಈ ಸಂಬಂಧ ಮೂವರು ಶಂಕಿತ ವ್ಯಕ್ತಿಗಳನ್ನು ವಶಕ್ಕೆ ತೆಗೆದುಕೊಂಡಿರುವ ಸಾಲಿಗ್ರಾಮ ಠಾಣೆ ಪೊಲೀಸರು, ವಿಚಾರಣೆ ನಡೆಸುತ್ತಿದ್ದಾರೆ.

ಘಟನಾ ಸ್ಥಳಕ್ಕೆ ಜಿಲ್ಲಾ ಎಸ್ಪಿ ರಿಷ್ಯಂತ್, ಡಿವೈಎಸ್‍ಪಿ ಎ.ಆರ್.ಸುನೀಲ್, ಮೈಸೂರು ಗ್ರಾಮಾಂತರ ಸರ್ಕಲ್ ಇನ್ಸ್‍ಪೆಕ್ಟರ್ ಜೀವನ್, ಸಾಲಿಗ್ರಾಮ ಠಾಣೆ ಸಬ್ ಇನ್ಸ್‍ಪೆಕ್ಟರ್ ಮಾದಪ್ಪ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಹತ್ಯೆ ವಿಷಯ ತಿಳಿಯುತ್ತಿದ್ದಂತೆಯೇ ಶಾಸಕ ಸಾ.ರಾ.ಮಹೇಶ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಹತ್ಯೆಗೀಡಾದ ಶಿವಕುಮಾರ್ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಶೀಘ್ರದಲ್ಲೇ ಹಂತಕರನ್ನು ಬಂಧಿಸಿ ಕ್ರಮ ಕೈಗೊಳ್ಳಿ ಎಂದು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು.

Translate »