ಕಾಂಗ್ರೆಸ್ ಶಾಸಕಾಂಗ ಸಭೆಗೆ 16 ಶಾಸಕರು ಗೈರು
ಮೈಸೂರು

ಕಾಂಗ್ರೆಸ್ ಶಾಸಕಾಂಗ ಸಭೆಗೆ 16 ಶಾಸಕರು ಗೈರು

July 10, 2019

ಬೆಂಗಳೂರು, ಜು.9- ವಿಧಾನಸಭಾ ಸದಸ್ಯತ್ವಕ್ಕೆ 12 ಮಂದಿ ರಾಜೀನಾಮೆ ನೀಡಿರುವ ಸದಸ್ಯರೂ ಸೇರಿದಂತೆ ಇಂದು ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ 16 ಶಾಸಕರು ಗೈರು ಹಾಜರಾಗಿದ್ದರು.

ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನಗಳು ತೀವ್ರಗೊಂಡ ಬೆನ್ನಲ್ಲೇ ತಮ್ಮ ಶಾಸಕರನ್ನು ರಕ್ಷಿಸಿಕೊಳ್ಳಲು ಕಾಂಗ್ರೆಸ್ ಇಂದು ತುರ್ತು ಶಾಸಕಾಂಗ ಸಭೆಯನ್ನು ಕರೆದಿತ್ತು. ಅದರಲ್ಲಿ ಶೃಂಗೇರಿಯ ರಾಜೇಗೌಡ ಅವರು ತಾವು ನ್ಯಾಚೂರೋಪತಿ ಚಿಕಿತ್ಸೆ ಪಡೆಯುತ್ತಿದ್ದು ಸಭೆಯಲ್ಲಿ ಪಾಲ್ಗೊಳ್ಳಲು ಆಗುತ್ತಿಲ್ಲ ಎಂದು ಅನುಮತಿ ಪಡೆದರೆ, ಗುಲ್ಬರ್ಗಾ ಉತ್ತರ ಕ್ಷೇತ್ರದ ಕಲ್ಹಜಾ ಫಾತೀಮಾ ಅವರು ತಮ್ಮ ಸಂಬಂಧಿಕರ ಮದುವೆಯಲ್ಲಿ ಭಾಗವಹಿಸಬೇಕಿರುವುದರಿಂದ ತಮಗೆ ಸಭೆಯಲ್ಲಿ ಭಾಗವಹಿಸಲು ಆಗುತ್ತಿಲ್ಲ ಎಂದು ತಿಳಿಸಿದ್ದಾರೆ.

ಇನ್ನು ಚಿಕ್ಕಬಳ್ಳಾಪುರದ ಡಾ.ಸುಧಾಕರ್, ಸಂಡೂರಿನ ಶಾಸಕ ಹಾಗೂ ಸಚಿವರಾದ ಇ.ತುಕರಾಂ, ಹೊಸಕೋಟೆ ಕ್ಷೇತ್ರದ ಸಚಿವ ಎಂ.ಟಿ.ಬಿ.ನಾಗರಾಜ್ ಅವರು ಅನಾರೋಗ್ಯದ ಕಾರಣಕ್ಕಾಗಿ ಭಾಗವಹಿಸಲಾಗುತ್ತಿಲ್ಲ ಎಂದು ಮಾಹಿತಿ ನೀಡಿದ್ದಾರೆ. ಹರಿಹರದ ಶಾಸಕ ರಾಮಪ್ಪ ಅನುಮತಿ ಪಡೆದು ಸಭೆಯಿಂದ ದೂರ ಉಳಿದಿದ್ದಾರೆ. ಬಳ್ಳಾರಿ ಗ್ರಾಮೀಣ ಕ್ಷೇತ್ರದ ಶಾಸಕ ನಾಗೇಂದ್ರ ಅವರು ವಿಳಂಬವಾಗಿ ಸಭೆಗೆ ಬಂದರೆ, ಖಾನಾಪುರ ಕ್ಷೇತ್ರದ ಅಂಜಲಿ ನಿಂಬಾಳ್ಕರ್ ಅವರು ಶಾಸಕಾಂಗ ಸಭೆಯಿಂದ ದೂರ ಉಳಿದಿದ್ದರು.

Translate »