ಮೈಸೂರು,ಜು.16(ಆರ್ಕೆ)- ಮೈಸೂರು ನಗರದಲ್ಲಿ ಆರಂಭಿಸಿದ್ದ ‘ಪೊಲೀಸ್ ಸಹಾಯ ವಾಣಿ’ಗೆ 20 ವರ್ಷಗಳು ತುಂಬಿವೆ.
ಅಪ್ರಾಪ್ತ ಬಾಲಕಿ ಆತ್ಮಹತ್ಯೆ ಪ್ರಕರಣ ವೊಂದನ್ನು ಸೂಕ್ಷ್ಮವಾಗಿ ಅವಲೋಕಿಸಿದ್ದ ಹಿಂದಿನ ನಗರ ಪೊಲೀಸ್ ಆಯುಕ್ತರಾದ ಸಿ.ಚಂದ್ರಶೇಖರ್ ಅವರು, 2000ನೇ ಇಸವಿ ಜುಲೈ ಮಾಹೆಯಲ್ಲಿ ‘ಪೊಲೀಸ್ ಸಹಾಯವಾಣಿ’ ಯನ್ನು ಮೈಸೂರಲ್ಲಿ ಆರಂಭಿಸಿದ್ದರು.
ಸೂಕ್ತ ಸಮಯದಲ್ಲಿ ಸರಿಯಾದ ಸಮಾಲೋಚನೆ, ಸಾಂತ್ವನ ನೀಡಿದ್ದರೆ ಆ ಬಾಲಕಿಯನ್ನು ಬದುಕಿಸಬಹುದಿತ್ತು ಎಂಬುದನ್ನು ಮನಗಂಡು ಮುಂದೆ ಅಂತಹ ಸಂದರ್ಭಗಳು ಬಂದಾಗ ಅಗತ್ಯ ಮಾರ್ಗ ದರ್ಶನ ನೀಡುವ ಸದುದ್ದೇಶದಿಂದ ಪ್ರತ್ಯೇಕ ಸಹಾಯವಾಣಿಯನ್ನು ತೆರೆದಿ ದ್ದನ್ನು ಇಲ್ಲಿ ಸ್ಮರಿಸಬಹುದು.
ಮೈಸೂರಿನ ಅಶೋಕ ರಸ್ತೆಯ ನೆಹರು ಸರ್ಕಲ್ನಲ್ಲಿರುವ ಲಷ್ಕರ್ ಪೊಲೀಸ್ ಠಾಣಾ ಕಟ್ಟಡದಲ್ಲಿ ಕಾರ್ಯ ನಿರ್ವಹಿಸು ತ್ತಿರುವ ಪೊಲೀಸ್ ಸಹಾಯವಾಣಿಗೆ ಮೈಸೂರು ನಗರ ಪೊಲೀಸ್ ಆಯುಕ್ತರು ಗೌರವಾಧ್ಯಕ್ಷರಾಗಿರುತ್ತಾರೆ. ಖ್ಯಾತ ಮಕ್ಕಳ ತಜ್ಞ ಹಾಗೂ ಉಷಾಕಿರಣ ಫೌಂಡೇಷನ್ ಸಂಸ್ಥಾಪಕರಾದ ಡಾ.ಮೋತಿ ಅವರು ಉಪಾಧ್ಯಕ್ಷರಾಗಿದ್ದು, ವಾಯುಪಡೆಯ ನಿವೃತ್ತ ಗ್ರೂಪ್ ಕ್ಯಾಪ್ಟನ್ ಅಜಯ್ ದುಡೇಜಾ ಕಾರ್ಯದರ್ಶಿಯಾಗಿ, ಬ್ಯಾಂಕ್ ಆಫ್ ಇಂಡಿಯಾ ನಿವೃತ್ತ ಪ್ರಾದೇಶಿಕ ವ್ಯವಸ್ಥಾಪಕ ಎಂ.ಆರ್.ದ್ವಾರಕಾನಾಥ್ ಖಜಾಂಚಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
20 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಇಂದು ಮೈಸೂರಿನ ನಜರ್ಬಾದ್ನಲ್ಲಿರುವ ನಗರ ಪೊಲೀಸ್ ಆಯುಕ್ತರ ಕಚೇರಿ ಯಲ್ಲಿ ಕೇಕ್ ಕತ್ತರಿಸುವ ಮೂಲಕ ಪೊಲೀಸ್ ಸಹಾಯವಾಣಿ ಪದಾಧಿಕಾರಿ ಗಳು ಸಂಭ್ರಮಿಸಿದರು. ಈ ಸಂದರ್ಭ ಮಾತನಾಡಿದ ಸಹಾಯವಾಣಿ ಗೌರವಾಧ್ಯಕ್ಷ ರಾದ ನಗರ ಪೊಲೀಸ್ ಆಯುಕ್ತ ಕೆ.ಟಿ. ಬಾಲಕೃಷ್ಣ, ನಿಸ್ವಾರ್ಥತೆಯಿಂದ ಸೇವೆ ಸಲ್ಲಿಸಿ, ಅಗತ್ಯವುಳ್ಳವರಿಗೆ ಉಚಿತ ಸಮಾ ಲೋಚನೆ, ಸಾಂತ್ವನ ಹೇಳುತ್ತಿರುವ ಪದಾಧಿಕಾರಿ ಗಳ ಕಾರ್ಯವೈಖರಿಯನ್ನು ಪ್ರಶಂಸಿಸಿದರು.
ವರದಕ್ಷಿಣ ಕಿರುಕುಳ, ಲೈಂಗಿಕ ಕಿರುಕುಳ, ವೈವಾಹಿಕ ತೊಂದರೆ, ಮಾನಸಿಕ ಅಸ್ವಸ್ಥತೆ, ಮಾದಕ ವಸ್ತುಗಳ ಸೇವನೆ, ಆತ್ಮಹತ್ಯೆ ಯೋಜನೆ, ಬಡತನ, ಬುದ್ಧಿಮಾಂದ್ಯತೆ ಸೇರಿದಂತೆ ಹಲವು ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಉಚಿತ ಆಪ್ತ ಸಮಾ ಲೋಚನೆ ಮೂಲಕ ಸಹಾಯವಾಣಿ ಯಲ್ಲಿ ಕಾನೂನಿನಡಿ ಪರಿಹಾರೋಪಾಯ ಒದಗಿಸಲಾಗುವುದು. ಅದಕ್ಕಾಗಿ ಒದಗಿಸಿರುವ ದೂರವಾಣಿ ಸಂಖ್ಯೆ 0821-2418400 ಅನ್ನು ಸಂಪರ್ಕಿಸಬಹುದಾಗಿದೆ.
ಇಂದಿನ ಕಾರ್ಯಕ್ರಮದಲ್ಲಿ ಪೊಲೀಸ್ ಸಹಾಯವಾಣಿಯ ಎಲ್ಲಾ ಪದಾಧಿಕಾರಿ ಗಳು, ಡಿಸಿಪಿ ಎಂ.ಮುತ್ತುರಾಜ್, ದೇವ ರಾಜ ಉಪ ವಿಭಾಗದ ಎಸಿಪಿ ಗಜೇಂದ್ರ ಪ್ರಸಾದ್ ಹಾಗೂ ಪೊಲೀಸ್ ಅಧಿಕಾರಿ ಗಳು ಭಾಗವಹಿಸಿದ್ದರು.