ಮಹಾರಾಣಿ ವಿಜ್ಞಾನ ಕಾಲೇಜು ವಿದ್ಯಾರ್ಥಿನಿಯರ ಸಮಸ್ಯೆ ಆಲಿಸಿದ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ
ಮೈಸೂರು

ಮಹಾರಾಣಿ ವಿಜ್ಞಾನ ಕಾಲೇಜು ವಿದ್ಯಾರ್ಥಿನಿಯರ ಸಮಸ್ಯೆ ಆಲಿಸಿದ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ

July 19, 2018
  • ಕಾಲೇಜಿನಲ್ಲಿ ಇ-ಟಾಯ್ಲೆಟ್, ಆವರಣದಲ್ಲಿ ಬೆಂಚ್ ಅಳವಡಿಸಲು ಸೂಚನೆ

ಮೈಸೂರು: ನಮ್ಮ ಕಾಲೇಜಿನಲ್ಲಿ ಶೌಚಾಲಯ ಸರಿಯಿಲ್ಲ.. ಕುಡಿಯುವ ನೀರಿಲ್ಲ.. ಕೊಠಡಿ ಕೊರತೆ, ಸ್ಮಾರ್ಟ್ ಕ್ಲಾಸ್ ಸರಿಯಾಗಿ ನಡೆಯುತ್ತಿಲ್ಲ… ಬಸ್ ಪಾಸ್ ಇಲ್ಲ… ವಿಶ್ರಾಂತಿ ಕೊಠಡಿಯೂ ಇಲ್ಲ.. ಒಟ್ಟಾರೆ ಹೆಣ್ಣು ಮಕ್ಕಳು ತುಂಬಾ ತೊಂದರೆ ಅನುಭವಿಸುತ್ತಿದ್ದೇವೆ….

ಮೈಸೂರಿನ ಪ್ರತಿಷ್ಠಿತ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನಲ್ಲಿ ಕೇಳಿ ಬಂದ ವ್ಯಾಪಕ ದೂರುಗಳ ಹಿನ್ನೆಲೆ ಯಲ್ಲಿ ಕಾಲೇಜಿಗೆ ಇಂದು ಭೇಟಿ ಕೊಟ್ಟು, ಪರಿಶೀಲನೆ ನಡೆಸಿದ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡರಿಗೆ ವಿದ್ಯಾರ್ಥಿನಿಯರು ದೂರಿನ ಮಳೆಗರೆದರು.

ಸಚಿವರು ಕಾಲೇಜಿನ ಆವರಣ, ಕಟ್ಟಡ, ಒಳಗೆ ಕೊಠಡಿ ಗಳು, ನಂತರ ಶೌಚಾಲಯಗಳನ್ನು ಪರಿಶೀಲಿಸಿದರು. ಕಾಲೇಜಿನ ಸಭಾಂಗಣದಲ್ಲಿ ವಿದ್ಯಾರ್ಥಿನಿಯರು, ಉಪ ನ್ಯಾಸಕರು ಮತ್ತು ಅಧಿಕಾರಿಗಳ ಸಭೆ ನಡೆಸಿ, ವಿದ್ಯಾರ್ಥಿ ನಿಯರು ನೀಡಿರುವ ದೂರಿನ ಬಗ್ಗೆ ಚರ್ಚಿಸಿದರು. ನೇರವಾಗಿ ವಿದ್ಯಾರ್ಥಿನಿಯರಿಂದಲೇ ದೂರುಗಳನ್ನು ಆಲಿಸಿದರು.

ಈ ವೇಳೆ ವಿದ್ಯಾರ್ಥಿನಿಯರು ಕಾಲೇಜಿನಲ್ಲಿರುವ ಸಮಸ್ಯೆ ಗಳನ್ನು ಒಂದೊಂದಾಗಿ ಸಚಿವರ ಮುಂದಿಟ್ಟರು. ಕಾಲೇಜಿ ನಲ್ಲಿ ಸಮರ್ಪಕ ನೀರಿನ ವ್ಯವಸ್ಥೆ ಇಲ್ಲ. ಶೌಚಾಲಯದ ಸ್ಥಿತಿಯಂತೂ ಹೇಳತೀರದು. ಸ್ಮಾರ್ಟ್ ಕ್ಲಾಸ್‍ಗಳು ಸರಿ ಯಾಗಿ ನಡೆಯುತ್ತಿಲ್ಲ. ಬಸ್‍ಪಾಸ್ ನಿರೀಕ್ಷೆಯಲ್ಲಿರುವ ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿನಿಯರು ಪ್ರತಿದಿನ ರೂ.100ಕ್ಕೂ ಹೆಚ್ಚು ಖರ್ಚು ಮಾಡಿ ಕಾಲೇಜಿಗೆ ಬರು ವಂತಾಗಿದೆ. ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಉಚಿತ ಬಸ್ ಪಾಸ್ ಕಲ್ಪಿಸಬೇಕು ಹೀಗೆ ದೂರಿನ ಮೇಲೆ ದೂರು ಸಲ್ಲಿಸಿದರು.

ಈ ಬಗ್ಗೆ ಕಾಲೇಜಿನ ಪ್ರಾಂಶುಪಾಲರು ಮತ್ತು ಉಪನ್ಯಾಸಕರನ್ನು ಪ್ರಶ್ನಿಸಿದ ಸಚಿವರು, ಸಮಸ್ಯೆಗೆ ಕಾರಣ ತಿಳಿದುಕೊಂಡರು. ಈ ಸಂದರ್ಭದಲ್ಲಿ ಉಪನ್ಯಾಸಕರಾದ ಧರ್ಮೇಂದ್ರ, ಎಂ.ಬಿ.ಮಂಜುನಾಥ್, ರವಿ, ಪಿ.ಮಂಜು ನಾಥ್, ಶ್ರೀನಿವಾಸ್ ಇನ್ನಿತರರು ಮಾತನಾಡಿ, ಕಾಲೇಜಿ ನಲ್ಲಿ ಅಗತ್ಯಕ್ಕಿಂತ ಹೆಚ್ಚು ವಿದ್ಯಾರ್ಥಿನಿಯರಿಗೆ ಪ್ರವೇಶ ಕಲ್ಪಿಸಲಾಗಿದ್ದು, ಇದೀಗ ಕೊಠಡಿ ಸಮಸ್ಯೆ ಉದ್ಭವಿಸಿದೆ. ಪ್ರಯೋಗಶಾಲೆಗಳಿಗೂ ಕೊಠಡಿ ಕೊರತೆ ಇದೆ. ಇರುವು ದರಲ್ಲಿಯೇ ಸರಿದೂಗಿಸಿಕೊಂಡು ಹೋಗುತ್ತಿರುವುದರಿಂದ ಸಮಸ್ಯೆ ಬಿಗಡಾಯಿಸಿದೆ. ಕೊಠಡಿಗಳನ್ನು ಮಂಜೂರು ಮಾಡಿ ಕೊಡಬೇಕು. ಇಲ್ಲವೇ ಕಾಲೇಜಿಗೆ ಹೊಸ ಕಟ್ಟಡದ ಅವಕಾಶ ಕಲ್ಪಿಸಿಕೊಡುವಂತೆ ಮನವಿ ಮಾಡಿದರು. ಇದೆಲ್ಲವನ್ನೂ ಆಲಿಸಿದ ಸಚಿವ ಜಿ.ಟಿ.ದೇವೇಗೌಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಮಹಾರಾಣಿ ಕಾಲೇಜಿನಲ್ಲಿ ಕೊಠಡಿ, ಪ್ರಯೋಗಾಲಯ, ಶೌಚಾಲಯ, ಕುಡಿಯುವ ನೀರಿನ ಸಮಸ್ಯೆಗಳು ಹೆಚ್ಚಾಗಿದ್ದು, ಸದ್ಯ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಇಷ್ಟೆಲ್ಲಾ ಸಮಸ್ಯೆಗಳಿಗೆ ಕಾರಣವಾಗಿದೆ. ಹೀಗಾಗಿ ಕೂಡಲೇ ಇ-ಟಾಯ್ಲೆಟ್ ವ್ಯವಸ್ಥೆ, ಆವರಣದಲ್ಲಿ ಬೆಂಚ್ ಗಳನ್ನು ಹಾಕಿಸುವಂತೆ ಪಾಲಿಕೆ ಹಾಗೂ ಮುಡಾ ಅಧಿಕಾರಿಗಳಿಗೆ ತಿಳಿಸಲಾಗಿದೆ.

ಅತಿಥಿ ಉಪನ್ಯಾಸಕರ ಕೊರತೆ ನೀಗಿಸುವ ನಿಟ್ಟಿನಲ್ಲಿ ಈಗಾಗಲೇ ಇಲಾಖೆಯಿಂದ ಆದೇಶ ಹೊರಡಿಸಿದ್ದು, ಅವರುಗಳು ಸಹ ತುರ್ತಾಗಿ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ. ಆದರೆ ಮಹಾರಾಣಿ ಕಾಲೇಜುಗಳ ಕಟ್ಟಡಗಳು ಹೆರಿಟೇಜ್ ಕಟ್ಟಡವಾಗಿರುವ ಕಾರಣದಿಂದ ಜಿಲ್ಲಾಧಿಕಾರಿಗಳು ಮತ್ತು ಇಲಾಖೆ ಅಧಿಕಾರಿಗಳೊಂದಿಗೆ ಮುಂದಿನ ವಾರದಲ್ಲಿ ಸಭೆ ನಡೆಸಿ, ಕೊಠಡಿಗಳು, ಲ್ಯಾಬ್‍ಗಳು, ಶೌಚಾಲಯವನ್ನು ಕಲ್ಪಿಸಲು ಕ್ರಮವಹಿ ಸುತ್ತೇನೆ. ಕೇವಲ ಮೈಸೂರು ಮಾತ್ರವಲ್ಲದೆ ರಾಜ್ಯದ ಎಲ್ಲಾ ಕಡೆ ಕಾಲೇಜುಗಳ ಮೂಲ ಸೌಲಭ್ಯ ಸಮಸ್ಯೆ ಪರಿಹರಿಸುವ ಬಗ್ಗೆ ಕ್ರಮಕೈಗೊಳ್ಳುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಶಾಸಕ ಎಲ್. ನಾಗೇಂದ್ರ, ಜಿಪಂ ಸದಸ್ಯ ಬೀರಿಹುಂಡಿ ಬಸವಣ್ಣ, ಪಾಲಿಕೆ ಆಯುಕ್ತ ಕೆ.ಎಚ್.ಜಗದೀಶ್, ಮುಡಾ ಎಸ್‍ಇ ಸುರೇಶ್ ಬಾಬು ಸೇರಿದಂತೆ ಇನ್ನಿತರರು ಹಾಜರಿದ್ದರು.

Translate »