ಮೈಸೂರು: ದೇವಸ್ಥಾನದ ಬಾಗಿಲು ಮುರಿದು ಹುಂಡಿಯಲ್ಲಿದ್ದ ಹಣ ದೋಚಿರುವ ಘಟನೆ ಮೈಸೂರಿನ ಟಿ.ಕೆ.ಬಡಾವಣೆ 4ನೇ ಹಂತದಲ್ಲಿ ನಡೆದಿದೆ. ಬಡಾವಣೆಯ ಶ್ರೀ ಮಹಾಗಣ ಸುಬ್ರಹ್ಮಣ್ಯಸ್ವಾಮಿ ದುರ್ಗಾ ದೇವಿ ದೇವಸ್ಥಾನದ ಬಾಗಿಲನ್ನು ಕಬ್ಬಿಣದ ರಾಡಿನಿಂದ ಮೀಟಿ ಒಳನುಗ್ಗಿರುವ ಕಳ್ಳರು, ಅಲ್ಲಿದ್ದ ಸ್ಟೀಲ್ ಹುಂಡಿ ಬೀಗ ಒಡೆದು ಹಣದೊಂದಿಗೆ ಪರಾರಿಯಾಗಿದ್ದಾರೆ. ಇಂದು ಬೆಳಿಗ್ಗೆ ಪೂಜೆ ಮಾಡಲೆಂದು ಬಂದಾಗ ಅರ್ಚಕರಿಗೆ ಹುಂಡಿ ಹಣ ಕಳವಾಗಿರುವುದು ತಿಳಿಯಿತು. ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ಸರಸ್ವತಿಪುರಂ ಠಾಣೆ ಪೊಲೀಸರು, ಮಹಜರು ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಹಿಂದೆಯೂ ಈ ದೇವಸ್ಥಾನದಲ್ಲಿ ಎರಡು ಬಾರಿ ಕಳ್ಳತನ ನಡೆದಿತ್ತು ಎಂದು ಹೇಳಲಾಗಿದೆ.




