ಬೆಂಗಳೂರು, ಅ.23- ಸುಪ್ರೀಂಕೋರ್ಟ್ನಲ್ಲಿ ಅನರ್ಹ ಶಾಸಕರ ಪ್ರಕರಣ ಇವತ್ತೂ ಇತ್ಯರ್ಥವಾಗಲಿಲ್ಲ. ಮೈತ್ರಿ ಸರ್ಕಾರ ಅಧಿಕಾರದಲ್ಲಿದ್ದಾಗ ಕಾಂಗ್ರೆಸ್ -ಜೆಡಿಎಸ್ ಪಕ್ಷದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಸರ್ಕಾರ ಪತನ ವಾಗಲು ಕಾರಣರಾಗಿದ್ದ 17 ಅನರ್ಹ ಶಾಸಕರ ಪ್ರಕರಣದ ಅರ್ಜಿ ವಿಚಾರಣೆಯನ್ನು ಸುಪ್ರೀಂಕೋರ್ಟ್ ನಾಳೆ (ಗುರುವಾರ)ಕ್ಕೆ ಮುಂದೂಡಿದೆ. ನಿನ್ನೆ ಸುಪ್ರೀಂಕೋರ್ಟ್ನಲ್ಲಿ ವಿಚಾರಣೆ ಆರಂಭವಾದಾಗ ಕಾಂಗ್ರೆಸ್ ಪರ ವಕೀಲ ಕಪಿಲ್ ಚುನಾವಣೆ ನೀತಿ ಸಂಹಿತೆಯ ಕುರಿತು ಹೈಕೋರ್ಟ್ನಲ್ಲಿ ವಿಚಾರಣೆ ಬಾಕಿಯಿದೆ. ಹೀಗಾಗಿ, ವಿಚಾರಣೆ ಮುಂದೂಡಬೇಕೆಂದು ಮನವಿ ಮಾಡಿದರು. ಈ ಹಿನ್ನೆಲೆಯಲ್ಲಿ ಸಿಬಲ್ ಮನವಿ ಪುರಸ್ಕರಿಸಿದ ನ್ಯಾಯಮೂರ್ತಿ ಎನ್.ವಿ ರಮಣ ನೇತೃತ್ವದ ನ್ಯಾಯಪೀಠ ಅರ್ಜಿ ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿದ್ದರು.
ಇದೀಗ ಸುಪ್ರೀಂಕೋರ್ಟ್ನಲ್ಲಿ ಅನರ್ಹ ಶಾಸಕರ ಅರ್ಜಿ ವಿಚಾರಣೆ ಆರಂಭ ವಾಗಿದೆ. ಮೊದಲಿಗೆ ಆರ್.ಶಂಕರ್ ಪರ ವಕೀಲರಿಂದ ಮನವಿ ಸಲ್ಲಿಸಲಾಯಿತು. ಅನರ್ಹ ಶಾಸಕರ ಪರ ವಕೀಲ ಮುಕುಲ್ ರೋಹ್ಟಗಿ ಇನ್ನೂ ನ್ಯಾಯಾಲಯಕ್ಕೆ ಬಂದಿರದ ಕಾರಣ ರೋಹ್ಟಗಿ ಎಲ್ಲಿ? ಎಂದು ಜಡ್ಜ್ ಪ್ರಶ್ನೆ ಮಾಡಿದರು. ‘ಬೇಗ ಬೇಗ ವಾದ ಮುಗಿಸಿ. ಮುಕುಲ್ ರೋಹ್ಟಗಿ, ಕಪಿಲ್ ಸಿಬಲ್ ಕೂಡ ಬಂದಿಲ್ಲ. ಅನರ್ಹ ಶಾಸಕರ ವಾದ ಇಂದೇ ಮುಗಿಸಿ’ ಎಂದು ಹೇಳಿದ ನ್ಯಾಯಮೂರ್ತಿಗಳು ಮಧ್ಯಾಹ್ನ 2ಕ್ಕೆ ವಿಚಾರಣೆ ಮುಂದೂಡಿದರು. ವಿಚಾರಣೆ ವೇಳೆ ಕಪಿಲ್ ಸಿಬಲ್ ಇರಲಿ ಎಂದು ಜೆಡಿಎಸ್ ಪರ ವಕೀಲ ರಾಜೀವ್ ಧವನ್ ಮನವಿ ಮಾಡಿದರು. ನಮ್ಮ ವಾದಕ್ಕೂ ಅವಕಾಶ ಕೊಡಿ ಎಂದು ಧವನ್ ಕೇಳಿದಾಗ ‘ನಿಮ್ಮ ಪರ ಸಿಬಲ್ ವಾದಿಸುತ್ತಿದ್ದಾರಲ್ಲ’ ಎಂದು ನ್ಯಾಯಮೂರ್ತಿ ಗಳು ಮರು ಪ್ರಶ್ನೆ ಹಾಕಿದರು. ನಾವು ಇನ್ನೂ ಹೆಚ್ಚಿನ ಮಾಹಿತಿ ನೀಡಬೇಕಿದೆ. ನಮ್ಮ ವಾದವನ್ನೂ ಕೇಳಿ ಎಂದ ಆರ್.ಶಂಕರ್ ಪರ ವಕೀಲ ಸುಂದರ್ ಮನವಿ ಮಾಡಿದರು. ಅನರ್ಹ ಶಾಸಕರ ಪರವಾಗಿ ಎಲ್ಲ ವಕೀಲರೂ ಒಟ್ಟಾಗಿ ವಾದಿಸಿ ಎಂದು ನ್ಯಾಯಮೂರ್ತಿಗಳು ತಿಳಿಸಿದರು.