ಆನೆ ಹಾವಳಿ ತಡೆಗೆ ಕೆರೆ ನಿರ್ಮಿಸಿದ ರೈತ
ಕೊಡಗು

ಆನೆ ಹಾವಳಿ ತಡೆಗೆ ಕೆರೆ ನಿರ್ಮಿಸಿದ ರೈತ

January 3, 2019

ಸೋಮವಾರಪೇಟೆ: ಕೊಡ ಗಿನಾದ್ಯಂತ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ಇದರಿಂದ ಪ್ರತಿನಿತ್ಯ ಬೆಳೆ ನಷ್ಟ, ಕೆಲವೆಡೆ ಪ್ರಾಣ ಹಾನಿಗಳು ಸಂಭವಿಸಿ ರೈತರ ನಿದ್ದೆಗೆಡಿಸಿರುವುದಲ್ಲದೆ, ಭಯದಲ್ಲೇ ತಮ್ಮ ತೋಟ-ಗದ್ದೆಗಳಿಗೆ ತೆರಳುವಂತಾಗಿದೆ.
ಕಾಡಾನೆಗಳ ಹಾವಳಿ ತಡೆಗೆ ಅರಣ್ಯ ಇಲಾಖೆಯೊಂದಿಗೆ ಜಿದ್ದಾಜಿದ್ದಿ ನಡೆಸುವಂತಾಗಿರುವ ಸಂದರ್ಭದಲ್ಲೇ ರೈತರೊ ಬ್ಬರು ವಿನೂತನವಾಗಿ ಕಾಡಾನೆ ಹಾವಳಿಗೆ ಪರಿಹಾರ ಕಂಡುಕೊಂಡಿದ್ದಾರೆ.

ಅರಣ್ಯದಂಚಿನ ತಮ್ಮ ಜಮೀನಿನ ಅರ್ಧ ಎಕರೆ ಜಾಗದಲ್ಲಿ ಕೆರೆ ನಿರ್ಮಿಸುವ ಮೂಲಕ ಕಾಡಾನೆಗಳ ಹಾವಳಿಗೆ ಕಡಿವಾಣ ಹಾಕಿ ದ್ದಾರೆ. ಅಲ್ಲದೆ ಸುತ್ತಮುತ್ತಲ ಕೊಳವೆ ಬಾವಿಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚ ಳಕ್ಕೂ ಕಾರಣವಾಗಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

ಸೋಮವಾರಪೇಟೆ ತಾಲೂಕು ತೊರೆ ನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಡವನಾಡು ಮೀಸಲು ಅರಣ್ಯದಂಚಿನ ಅರಸಿನಗುಪ್ಪೆ ಗ್ರಾಮದ ಪ್ರಗತಿಪರ ರೈತ ಬೇಬಿ ತಮ್ಮ ಸುಮಾರು ಅರ್ಧ ಎಕರೆ ಜಮೀನಿನಲ್ಲಿ ಕೆರೆ ನಿರ್ಮಿಸಿದ್ದು, ಇದರಿಂದ ನಿರಂತರವಾಗಿ ಜಮೀನಿಗೆ ದಾಳಿ ಇಡುತ್ತಿದ್ದ ಕಾಡಾನೆಗಳ ದಾಳಿಗೆ ಬ್ರೇಕ್ ಬಿದ್ದಿದೆ. ಅಲ್ಲದೆ ಕೆರೆ ನಿರ್ಮಾ ಣದಿಂದ ಸುತ್ತಮುತ್ತಲ ರೈತರ ಬತ್ತಿದ ಕೊಳವೆ ಬಾವಿಗಳಲ್ಲಿ ಮತ್ತೆ ಜೀವಸೆಲೆ ಕಾಣಿಸಿಕೊಂಡಿದ್ದು, ಪರೋಪಕಾರಿ ಎನಿಸಿಕೊಂಡಿದ್ದಾರೆ.

ಶ್ರಮಜೀವಿಯಾದ ಬೇಬಿ ಶುಂಠಿ ಕೃಷಿ ಯಲ್ಲಿ ಯಶಸ್ಸು ಕಂಡವರು. ಬಂಡೆಗಳೇ ತುಂಬಿದ್ದ ಭೂಮಿಯನ್ನು ಹಸನು ಮಾಡಿ ಕೃಷಿಯೋಗ್ಯವನ್ನಾಗಿಸಿದ್ದಾರೆ. ಪತ್ನಿ ಮೀನಾ ಸಹಕಾರದಿಂದ ಈ ವ್ಯಾಪ್ತಿಯಲ್ಲಿ ಪ್ರಗತಿ ಪರ ಕೃಷಿಕರೆಂದು ಗುರುತಿಸಿಕೊಂಡಿ ದ್ದಾರೆ. ತಮ್ಮ 10 ಎಕರೆ ಜಮೀನಿಗೆ ನೀರಿ ಗಾಗಿ ಕೊರೆಸಿದ ಕೊಳವೆ ಬಾವಿಗಳು ವಿಫಲವಾಗಿ ಸ್ವಲ್ಪ ಎತ್ತರ ಪ್ರದೇಶದ ಒಂದು ಕೊಳವೆಬಾವಿ ಮಾತ್ರ ಆಶಾಕಿರಣವಾಗಿ ಕಂಡುಬಂತು. ಅಲ್ಲಿಯೇ ಕೆರೆಯನ್ನೂ ತೋಡಿಸಿ, ನೀರನ್ನು ಸಂಗ್ರಹಿಸಿಡಲು ನಿರ್ಧರಿಸಿದರು. ಆ ಮೂಲಕ ಈಗ ಹಲವು ಪ್ರಯೋಜನಗಳನ್ನು ಪಡೆದುಕೊಳ್ಳುತ್ತಿದ್ದಾರೆ.

ಹಾವಳಿಗೆ ಕಡಿವಾಣ: ಯಡವನಾಡು ರಕ್ಷಿತಾರಣ್ಯ ವ್ಯಾಪ್ತಿಗೆ ಹೊಂದಿಕೊಂಡಿ ರುವ ಸೋಮವಾರಪೇಟೆ ತಾಲೂಕಿನ ಗ್ರಾಮ ಗಳಲ್ಲಿ ಕಾಡಾನೆಗಳ ಹಾವಳಿ ಹೆಚ್ಚು. ಭತ್ತ, ಜೋಳ ಫಸಲು ಬಂದಾಗ ಹಗಲು ವೇಳೆ ಯಲ್ಲೂ ಆನೆಗಳು ಊರೊಳಗೆ ನುಗ್ಗಿ ಗ್ರಾಮಸ್ಥರಲ್ಲಿ ಭೀತಿ ಮೂಡಿಸುತ್ತಿದ್ದವು. ಕಾಡಿನಲ್ಲಿ ಆಹಾರ ಮತ್ತು ನೀರಿಗೆ ಕೊರತೆ ಯಾದಾಗ ಮಾತ್ರ ಆನೆಗಳು ದಾಳಿ ಮಾಡು ತ್ತವೆ ಎಂದು ಅರಿತ ಬೇಬಿ, ಕೆರೆಯ ಮೂರು ಭಾಗಗಳಿಗೆ ಲಕ್ಷಾಂತರ ಹಣ ವೆಚ್ಚ ಮಾಡಿ ಸಿಮೆಂಟ್ ಕಟ್ಟೆ ಕಟ್ಟಿಸಿದರೂ ಕಾಡಿನ ಭಾಗವನ್ನು ಹಾಗೆಯೇ ಬಿಟ್ಟರು. ಕೆರೆಯಂಚಿನಲ್ಲಿ ಆನೆಗಳಿಗೆ ಪ್ರಿಯವಾದ ಬಿದಿರು ಮತ್ತಿತರ ಗಿಡಗಳನ್ನು ಬೆಳೆಸಿದರು. ಆನೆಗಳು ಈಗ ಬೇಬಿ ಅವರ ತೋಟಕ್ಕೆ ಬಂದರೂ ಒಂದಿಷ್ಟು ಬಿದಿರು ತಿಂದು, ಕೆರೆ ನೀರು ಕುಡಿದು ಕಾಡಿಗೆ ಮರಳುತ್ತವೆ. ಕಾಡಾನೆಗಳು ಬಂದು ಮರಳಿದಾಗ ಮೊದ ಲಿನಷ್ಟು ದೊಡ್ಡ ಪ್ರಮಾಣದಲ್ಲಿ ತೋಟಕ್ಕೆ ಹಾನಿಯಾಗುತ್ತಿಲ್ಲ.

ಬತ್ತಿದ ಬಾವಿಗಳಲ್ಲಿ ನೀರು: ಕೆರೆಯಲ್ಲಿ ನೀರು ತುಂಬುತ್ತಿದ್ದಂತೆಯೇ ಅಂತರ್ಜಲ ಮಟ್ಟವೂ ಹೆಚ್ಚಾಗಿ ವಿಫಲವಾಗಿದ್ದ ಬಾವಿಗಳಲ್ಲೂ ನೀರಿನ ಸೆಲೆ ಕಾಣಿಸಿ ಕೊಂಡಿದೆ. ಕೆರೆ ಪಕ್ಕದ ಕೊಳವೆ ಬಾವಿ ಯಲ್ಲೂ ಜಲದ ಒರತೆ ತುಂಬಿ ತುಳುಕು ತ್ತಿದೆ. ಹಾಗಾಗಿ ಕೆರೆ ನೀರಿನ ಮಟ್ಟ ಕಡಿಮೆ ಯಾಗದಂತೆ ಕೊಳವೆ ಬಾವಿಯಿಂದ ಮತ್ತೆ ನೀರನ್ನು ತುಂಬಿಸಲಾಗುತ್ತಿದೆ. ತೋಟದಲ್ಲಿ ಕಾಫಿ, ಕರಿಮೆಣಸು, ಏಲಕ್ಕಿ ಬೆಳೆಸಲಾಗುತ್ತಿದೆ.

ಅಂತರ್ಜಲ ವೃದ್ಧಿ: ಎತ್ತರ ಪ್ರದೇಶ ದಲ್ಲಿರುವ ಕೆರೆ ಭರ್ತಿಯಾಗುತ್ತಿದ್ದಂತೆ ಅಂತರ್ಜಲ ವೃದ್ಧಿಯಾಗಿ ತಳ ಸೇರಿದ ಊರಿನ ಬಹುತೇಕ ಕೊಳವೆ ಬಾವಿಗ ಳಲ್ಲೂ ನೀರು ಕಾಣಿಸಿಕೊಂಡಿದೆ. ಕೃಷಿಗೆ ನೀರಿಲ್ಲ ಎಂದು ಕೈ ಕೈ ಹಿಸುಕಿಕೊಳ್ಳು ತ್ತಿದ್ದವರು ಈಗ ತಮ್ಮ ಕೊಳವೆ ಬಾವಿಯೂ ಭರ್ತಿಯಾಗಿದ್ದರಿಂದ, ಕೃಷಿ ಯಲ್ಲಿ ತೊಡಗಿಸಿಕೊಂಡಿದ್ದಾರೆ. ಕೆರೆ ಯಿಂದ ಹರಿಯುವ ಹೆಚ್ಚುವರಿ ನೀರೂ ಕೆಳ ಪಾತ್ರದಲ್ಲಿ ಬಳಕೆಯಾಗುತ್ತಿದೆ.
ಮೀನು ಸಾಕಣೆ: ಬೇಬಿ ಅವರ ಪತ್ನಿ ಮೀನಾ ಅವರು ಕೆರೆಯಲ್ಲಿ ಮೀನು ಸಾಕಣೆ ಆರಂಭಿಸಿದ್ದು, ಇದರಲ್ಲೂ ಯಶ ಸ್ವಿಯಾಗಿದ್ದಾರೆ. ಕೇರಳದಿಂದ ಮೀನು ಮರಿಗಳನ್ನು ತಂದು ಮೀನುಗಾರಿಕೆ ಮಾಡುತ್ತಿದ್ದಾರೆ. ಇಲ್ಲಿಯ ಮೀನಿಗೆ ಸುತ್ತಲಿನ ಪ್ರದೇಶದಲ್ಲಿ ಭಾರಿ ಬೇಡಿಕೆ ಇದೆ. ಮೀನು ಮಾರಾಟದಿಂದ ವರ್ಷಕ್ಕೆ ಎರಡರಿಂದ ಮೂರು ಲಕ್ಷ ಆದಾಯ ವನ್ನೂ ಗಳಿಸುತ್ತಿದ್ದಾರೆ.

ವನ್ಯಜೀವಿಗಳ ದರ್ಶನ: ಕಾಡಂಚಿನಲ್ಲಿ ಕೆರೆ ಇರುವುದರಿಂದ ಜಿಂಕೆ, ನವಿಲು, ಮೊಲ, ಕಾಡುಹಂದಿ ಸೇರಿ ಬಗೆ ಬಗೆಯ ಪ್ರಾಣಿ-ಪಕ್ಷಿಗಳು ನಿತ್ಯವೂ ಬಂದು ನೀರು ಕುಡಿದು ಮರಳುತ್ತವೆ. ತೋಟದ ಸುತ್ತಲೂ ಸೋಲಾರ್ ಬೇಲಿ ಅಳವಡಿಸಿದ್ದರೂ ಪ್ರಾಣಿಗಳು ಬಂದು ನೀರು ಕುಡಿದು ತೆರಳುವ ಮಾರ್ಗದಲ್ಲಿ ತಂತಿ ಬೇಲಿ ಹಾಕಿಸದೆ ಖಾಲಿ ಬಿಟ್ಟಿದ್ದಾರೆ.

ಮತ್ತೊಂದು ಕೆರೆಗೆ ಸಿದ್ಧತೆ : ಕೇವಲ ತಡೆಗೋಡೆ ನಿರ್ಮಾಣಕ್ಕೆ 25 ಲಕ್ಷ ವೆಚ್ಚ ಮಾಡಿ ಈಗಾಗಲೇ ಒಂದು ಕೆರೆ ನಿರ್ಮಿ ಸಿಕೊಂಡಿರುವ ಬೇಬಿ, ಮಳೆ ನೀರು ಕೊಯ್ಲು ಮಾಡುವುದಕ್ಕೋಸ್ಕರ ಮತ್ತೊಂದು ಕೆರೆ ತೋಡಲು ಸಿದ್ಧತೆ ನಡೆಸಿದ್ದಾರೆ. ಇದಕ್ಕೆ ಅಂದಾಜು 10 ಲಕ್ಷ ವೆಚ್ಚವಾ ಗುವ ನಿರೀಕ್ಷೆ ಇದ್ದು, ಬೆಟ್ಟದಿಂದ ವ್ಯರ್ಥ ವಾಗಿ ಹರಿದುಹೋಗುವ ಮಳೆ ನೀರನ್ನು ಸಂಗ್ರಹಿಸುವ ಮೂಲಕ ಅಂತರ್ಜಲ ವೃದ್ಧಿಸುವ ಯೋಜನೆ ಹೊಂದಿದ್ದಾರೆ.

Translate »