ಕೆ.ಆರ್.ಪೇಟೆ,ಡಿ.9(ಶ್ರೀನಿವಾಸ್/ನಾಗಯ್ಯ)-ಹಣ ಹಾಗೂ ಅಧಿಕಾರ ದುರ್ಬಳಕೆಯಿಂದ ಬಿಜೆಪಿ ನಡೆಸಿದ ಇಂತಹ ಕೆಟ್ಟ ಚುನಾ ವಣೆಯನ್ನು ನಾನು ಎಂದೂ ನೋಡಿರಲಿಲ್ಲ. ಹಣ ಹಾಗೂ ಅಧಿ ಕಾರ ಬಲದಿಂದ ಚುನಾವಣೆ ಗೆಲ್ಲಬಹುದು ಎಂಬುದನ್ನು ಅವರು ತೋರಿಸಿಕೊಟ್ಟಿದ್ದಾರೆ ಎಂದು ಕಾಂಗ್ರೆಸ್ ಪರಾಜಿತ ಅಭ್ಯರ್ಥಿ, ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಹೇಳಿದರು.
ಪಟ್ಟಣದ ಅವರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತ ನಾಡಿದ ಅವರು, ಮತದಾರರ ತೀರ್ಪನ್ನು ಗೌರವಿಸುತ್ತೇನೆ. ಶಾಂತಿಯುತವಾಗಿ ಚುನಾವಣೆ ನಡೆದಿದೆ. ನನ್ನ ಮತದಾರರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಧೃತಿಗೆಡಬಾರದು. ಪಕ್ಷ ನಿಮ್ಮ ಜತೆಗೆ ಇರುತ್ತದೆ. ಯಡಿಯೂರಪ್ಪನವರು ಇದೇ ತಾಲೂಕಿನವರಾಗಿರುವುದರಿಂದ ಅಭಿವೃದ್ಧಿ ಮಾಡುತ್ತಾರೆ ಎಂಬ ಆಸೆಯಿಂದ ಜನರು ಬಿಜೆಪಿಗೆ ಮತ ನೀಡಿರಬಹುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಯಡಿಯೂರಪ್ಪ ಅವರ ತವರು ಕ್ಷೇತ್ರವಾದ್ದರಿಂದ ಬಿಜೆಪಿ ಗೆದ್ದಿದೆ. ಇಲ್ಲದಿದ್ದರೇ ಗೆಲ್ಲುತ್ತಿರಲಿಲ್ಲ ಎಂದರು.