ನೆರವು ಸದುಪಯೋಗಕ್ಕೆ ನೆರೆ ಸಂತ್ರಸ್ತರಿಗೆ ಸಲಹೆ
ಕೊಡಗು

ನೆರವು ಸದುಪಯೋಗಕ್ಕೆ ನೆರೆ ಸಂತ್ರಸ್ತರಿಗೆ ಸಲಹೆ

December 18, 2018

ಮಡಿಕೇರಿ:  ಪ್ರಕೃತಿ ವಿಕೋಪದ ಸಂತ್ರಸ್ತ ಕುಟುಂಬ ಗಳು ದಾನಿಗಳು ನೀಡುವ ಆರ್ಥಿಕ ನೇರವನ್ನು ಸದ್ಬಳಕೆ ಮಾಡಿಕೊಂಡು ಹೊಸ ಬದುಕು ಕಟ್ಟಿ ಕೊಳ್ಳಬೇಕೆಂದು ಮೈಸೂರಿನ ಶ್ರೀ ಕಾವೇರಿ ಕೊಡವ ಅಸೋಷಿಯೇಷನ್ ಈಸ್ಟ್ ಅಧ್ಯಕ್ಷ ಬೊವ್ವಡಿರ ಎಂ. ದೇವಯ್ಯ ಸಲಹೆ ನೀಡಿದ್ದಾರೆ.

ನಗರದ ಕೊಡವ ಸಮಾಜದ ವಾಣಿಜ್ಯ ಸಂಕೀರ್ಣದಲ್ಲಿರುವ ಕೊಡಗು ಸೇವಾ ಕೇಂದ್ರದಲ್ಲಿ ಪ್ರಕೃತಿ ವಿಕೋಪದಲ್ಲಿ ಸಂತ್ರಸ್ತರಾದ ಕುಟುಂಬಗಳಿಗೆ ಶ್ರೀ ಕಾವೇರಿ ಕೊಡವ ಅಸೋಷಿಯೇಷನ್ ಈಸ್ಟ್ ವತಿಯಿಂದ 2.5 ಲಕ್ಷ ರೂ. ಹಾಗೂ ಟಿ.ನರಸೀಪುರದ ಗ್ರಾಮ ವಿದ್ಯೋದಯ ಸಂಘ ಮತ್ತು ಶಿಕ್ಷಣ ಸಂಸ್ಥೆಗಳು ಸಂಗ್ರಹಿಸಿದ 3 ಲಕ್ಷ ರೂ.ಗಳ ಚೆಕ್‍ಗಳನ್ನು ವಿತರಿಸಲಾಯಿತು.

ಈ ವೇಳೆ ಶ್ರೀ ಕಾವೇರಿ ಕೊಡವ ಅಸೋಷಿಯೇಷನ್ ಈಸ್ಟ್ ಅಧ್ಯಕ್ಷ ಬೊವ್ವಡಿರ ಎಂ. ದೇವಯ್ಯ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಸುರಿದ ಮಳೆಯಿಂದ ಭೂ ಕುಸಿತ, ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿ ಹಲವು ಕುಟುಂಬಗಳು ಸಂತ್ರಸ್ತವಾಗಿವೆ. ಜಿಲ್ಲೆಯ ಲ್ಲಾದ ಪ್ರಕೃತಿ ವಿಕೋಪಕ್ಕೆ ಸ್ಪಂದಿಸುವ ನಿಟ್ಟಿನಲ್ಲಿ ಶ್ರೀ ಕಾವೇರಿ ಕೊಡವ ಅಸೋಷಿಯೇಷನ್ ಈಸ್ಟ್ ಒಟ್ಟು 3.36 ಲಕ್ಷ ರೂ. ಸಂಗ್ರಹಿಸಿತ್ತು. ಈ ಹಣದಲ್ಲಿ ಕೊಡಗಿನ 7 ಸಂತ್ರಸ್ತ ಕುಟುಂಬಗಳಿಗೆ ಈ ಹಿಂದೆ ಮೈಸೂರಿನಲ್ಲಿ ಪರಿಹಾರವನ್ನು ನೀಡಲಾಗಿದೆ ಎಂದು ಹೇಳಿದರು. ಉಳಿದ 2.50 ಲಕ್ಷ ರೂ.ಗಳನ್ನು ತಲಾ 10 ಸಾವಿರದಂತೆ 25 ಕುಟುಂಬಗಳಿಗೆ ನೀಡಲು ನಿರ್ಧರಿಸ ಲಾಗಿತ್ತು. ಅದರಂತೆ ಇಂದು ಚೆಕ್‍ಗಳನ್ನು ವಿತರಿಸುತ್ತಿದ್ದು, ದಾನಿಗಳು ನೀಡುವ ಪರಿಹಾರದ ನೆರವನ್ನು ದುರುಪಯೋಗವಾಗದಂತೆ ಬಳಸಿಕೊಳ್ಳಬೇಕೆಂದು ದೇವಯ್ಯ ಕಿವಿಮಾತು ಹೇಳಿದರು.

ಕೊಡಗು ಮಾಡೆಲ್ ಸ್ಕೂಲ್‍ನಲ್ಲಿ 300 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ‘ಮೈಸೂರ್ ಮಿತ್ರ’ ಮತ್ತು ‘ಸ್ಟಾರ್ ಆಫ್ ಮೈಸೂರು’ ಪತ್ರಿಕೆಯ ಪ್ರಧಾನ ಸಂಪಾದಕರಾದ ಕಲ್ಯಾಟಂಡ ಬಿ. ಗಣಪತಿ ಅವರು ಆರ್ಥಿಕ ಬೆನ್ನೆಲುಬಾಗಿದ್ದಾರೆ ಎಂದು ಸ್ಮರಿಸಿದ ಬಿ.ಎಂ. ದೇವಯ್ಯ, ಕಳೆದ 12 ವರ್ಷಗಳ ಹಿಂದೆ ಮೈಸೂರಿನಲ್ಲಿ ಸ್ಥಾಪನೆಯಾದ ಶ್ರೀ ಕಾವೇರಿ ಕೊಡವ ಅಸೋಷಿಯೇಷನ್ ಈಸ್ಟ್, ಸಮಾಜ ಸೇವೆಯನ್ನು ಮೂಲ ಗುರಿಯಾಗಿ ಮಾಡಿ ಕೊಂಡಿದೆ. ಮಾತ್ರವಲ್ಲದೇ, ಕೊಡಗು ಮಾಡೆಲ್ ಸ್ಕೂಲ್ ಮೂಲಕ ವಿದ್ಯಾ ಕ್ಷೇತ್ರದಲ್ಲೂ ತನ್ನನ್ನು ತೊಡಗಿಸಿಕೊಂಡಿದೆ ಎಂದು ಬಿ.ಎಂ. ದೇವಯ್ಯ ಹೇಳಿದರು. ಶ್ರೀ ಕಾವೇರಿ ಕೊಡವ ಅಸೋಷಿಯೇಷನ್ ಈಸ್ಟ್‍ನ ಗೌರವ ಕಾರ್ಯದರ್ಶಿ ಕಡೇಮಾಡ ಎಂ. ಬೆಳ್ಯಪ್ಪ ಕೊಡಗಿನ ಪ್ರಕೃತಿ ವಿಕೋಪವನ್ನು ನೆನೆದು ಕಂಬನಿ ಮಿಡಿದರು.

ಕಾವೇರಿ ಋಣವಿದೆ: ಟಿ. ನರಸೀಪುರದ ಗ್ರಾಮ ವಿದ್ಯೋದಯ ಶಿಕ್ಷಣ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಮಹದೇವಸ್ವಾಮಿ ಮಾತನಾಡಿ, 400 ವರ್ಷಗಳಿಂದ ಟಿ.ನರಸೀಪುರದ ಜನತೆ ಕಾವೇರಿ ನೀರು ಕುಡಿಯುತ್ತಿದ್ದಾರೆ. ಜಿಲ್ಲೆಯಲ್ಲಿ ಘಟಿಸಿದ ಪ್ರಕೃತಿ ವಿಕೋಪಕ್ಕೆ ಸಂತ್ರಸ್ತರಾದ ಕುಟುಂಬಗಳಿಗೆ ಸ್ಪಂದಿಸುವುದು ಸಂಸ್ಥೆಯ ಋಣವಾಗಿದೆ. ಈ ಹಿನ್ನೆಲೆಯಲ್ಲಿ ಗ್ರಾಮ ವಿದ್ಯೋದಯ ಸಂಸ್ಥೆಯ ವತಿಯಿಂದ 3 ಲಕ್ಷ ರೂ.ಗಳನ್ನು ತಲಾ 25 ಸಾವಿರ ದಂತೆ 12 ಕುಟುಂಬಗಳಿಗೆ ನೀಡಲಾಗುತ್ತಿದೆ ಎಂದು ತಿಳಿಸಿದರು. ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳೂ ಕೂಡ ಕೊಡಗು ಜಿಲ್ಲೆಯ ನೆರವಿಗೆ ಧಾವಿಸಿದ್ದಾರೆ ಎಂದು ಮಹದೇವಸ್ವಾಮಿ ಸ್ಮರಿಸಿದರು.
ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದ ಶ್ರೀ ತಲಕಾವೇರಿ ಭಾಗಮಂಡಲ ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿದ್ದಾಟಂಡ ತಮ್ಮಯ್ಯ, ಕೊಡಗು ಸೇವಾ ಕೇಂದ್ರ ಆರಂಭಿಸಿದ ಸಂದರ್ಭ ಹಲವು ಟೀಕೆಗಳು ವ್ಯಕ್ತವಾದವು. ಆದರೆ ಸೇವಾ ಕೇಂದ್ರ ಯಾರಿಂದಲೂ ಹಣ ಸ್ವೀಕರಿಸದೇ, ನೇರವಾಗಿ ದಾನಿಗಳ ಮೂಲಕವೇ ಸಂತ್ರಸ್ತರಿಗೆ ನೆರವು ಒದಗಿಸುತ್ತಿದೆ. ಸೇವಾ ಕೇಂದ್ರದ ಮೂಲಕ ಸಂತ್ರಸ್ತರ ಹೆಸರುಗಳ ಪಟ್ಟಿಯನ್ನು ನೆರವು ನೀಡಲು ಮುಂದಾಗುವ ಸಂಘ ಸಂಸ್ಥೆಗಳಿಗೆ ನೀಡಲಾಗುತ್ತಿದ್ದು, ಪರಿಹಾರದ ಮೊತ್ತವನ್ನು ದಾನಿಗಳೇ ನಿರ್ಧರಿಸುತ್ತಾರೆ ಎಂದು ಸ್ಪಷ್ಟಪಡಿಸಿದರು.

ಬಳಿಕ ಪ್ರಕೃತಿ ವಿಕೋಪದಲ್ಲಿ ಸಂಪೂರ್ಣವಾಗಿ ತತ್ತರಿಸಿರುವ ಮಕ್ಕಂದೂರು, ಮುಕ್ಕೋಡ್ಲು, ದೇವಸ್ತೂರು, ಕಾಲೂರು, ಹಬ್ಬೆಟ್ಟಗೇರಿ, ಹಮ್ಮಿಯಾಲ, ಸೂರ್ಲಬ್ಬಿ, ಮದೆನಾಡು, ಮೊಣ್ಣಂ ಗೇರಿ ಸೇರಿದಂತೆ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಒಟ್ಟು 35 ಸಂತ್ರಸ್ತ ಕುಟುಂಬಗಳಿಗೆ ಶ್ರೀ ಕಾವೇರಿ ಕೊಡವ ಅಸೋಷಿ ಯೇಷನ್ ಈಸ್ಟ್, ಗ್ರಾಮ ವಿದ್ಯೋದಯ ಶಿಕ್ಷಣ ಸಂಸ್ಥೆಯ ಪ್ರಮುಖರು, ಗಣ್ಯರು ಪರಿಹಾರದ ಚೆಕ್‍ಗಳನ್ನು ವಿತರಿಸಿದರು.

ಈ ಸಂದರ್ಭ ಶ್ರೀ ಕಾವೇರಿ ಕೊಡವ ಅಸೋಷಿಯೇಷನ್‍ನ ಉಪಾಧ್ಯಕ್ಷ ಪುಲಿಯಂಡ ದೇವಯ್ಯ, ಜಂಟಿ ಕಾರ್ಯದರ್ಶಿ ಪಂದ್ಯಂಡ ಪದ್ಮ ಬೋಪಯ್ಯ, ಆಂತರಿಕ ಲೆಕ್ಕ ಪರಿಶೋಧಕ ಕೊಪ್ಪೀರ ಡಿ. ಪೊನ್ನಪ್ಪ, ಸದಸ್ಯರಾದ ಕಂಜಿತಂಡ ಮನು ಅಯ್ಯಪ್ಪ, ಪಟ್ಟಮಾಡ ಅರುಣ, ಗ್ರಾಮ ವಿದ್ಯೋದಯ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ರಾಮಚಂದ್ರ, ಸಹಾಯಕ ಪ್ರಾಧ್ಯಾಪಕಿ ಕೆ.ಎಂ. ನೀಲಮ್ಮ, ಇತಿಹಾಸ ವಿಭಾಗದ ಅಧ್ಯಾಪಕಿ ರಜಿನಿ, ಕೊಡಗು ಏಕೀಕರಣ ರಂಗದ ತಮ್ಮು ಪೂವಯ್ಯ ಸೇರಿದಂತೆ ಮತ್ತಿತ್ತರರು ಉಪಸ್ಥಿತರಿದ್ದರು.

Translate »