ಕೃಷಿಯಲ್ಲಿರುವ ಕೊಡವ ಸಂಸ್ಕೃತಿ ಉಳಿವಿಗೆ ಸಲಹೆ
ಕೊಡಗು

ಕೃಷಿಯಲ್ಲಿರುವ ಕೊಡವ ಸಂಸ್ಕೃತಿ ಉಳಿವಿಗೆ ಸಲಹೆ

August 7, 2018

ಗೋಣಿಕೊಪ್ಪ: ಈ ನೆಲದ ಕೃಷಿಯಲ್ಲಿ ಕೊಡವ ಸಂಸ್ಕೃತಿ ಅಡಗಿದೆ. ಆಚರಣೆಯಿಂದ ಮಾತ್ರ ಸಂಸ್ಕೃತಿ ಉಳಿಯಲು ಸಾಧ್ಯ. ನಮ್ಮ ಪೂರ್ವಜರು ಕಷ್ಟ ಪಟ್ಟು ಮಾಡಿಟ್ಟಿರುವ ಈ ಭೂಮಿಯನ್ನು ಪರಂಪರೆಯಂತೆ ಕೃಷಿ ಮಾಡಿಕೊಂಡು ಹೋಗುವ ಜವಾಬ್ದಾರಿ ನಮ್ಮ ಯುವ ಪೀಳಿಗೆಗಿದೆ. ಗದ್ದೆಯನ್ನು ಪಾಳು ಬಿಡಬಾರದು. ಕೊಡವ ಸಂಸ್ಕೃತಿ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಅಕಾಡೆಮಿಯು ಕೃಷಿಗೆ ಉತ್ತೇಜನ ನೀಡುವಂತಹ ಬೇಲ್ ನಮ್ಮೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಪೆಮ್ಮಂಡ ಪೊನ್ನಪ್ಪ ತಿಳಿಸಿದರು.

ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಆಶ್ರಯದಲ್ಲಿ ಕಾನೂರು ಕೊಡವ ಸಮಾಜ, ಕೋತೂರು ಅಮ್ಮ ಕೊಡವ ಸಮಾಜ, ಕಾನೂರು-ಕೋತೂರು ಮಹಿಳಾ ಸಮಾಜದ ಸಹಕಾರದಲ್ಲಿ ಕೋತೂರು ಗ್ರಾಮದ ಮನ್ನಕ್ಕಮನೆ ವಾಸು ನಾಣಮಯ್ಯ, ಮನ್ನಕ್ಕಮನೆ ಕಿರಣ್ ಅವರ ಗದ್ದೆಯಲ್ಲಿ ನಡೆದ ಬೇಲ್ ನಮ್ಮೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ದ.ಕೊಡಗಿನ ಗ್ರಾಮೀಣ ಪ್ರದೇಶವಾದ ಕಾನೂರಿನಲ್ಲಿ ಆಯೋಜನೆಗೊಂಡಿದ್ದ ಬೇಲ್ ನಮ್ಮೆ ಕಾರ್ಯಕ್ರಮದಲ್ಲಿ ಸ್ಪರ್ಧಾಳುಗಳನ್ನು ಚಪ್ಪಾಳೆ, ಸಿಳ್ಳೆ ಹಾಕಿ ಪ್ರೋತ್ಸಾಹಿಸಿದರು. ಮಳೆಯಲ್ಲಿ ನೆನೆದು, ಕೆಸರಿನಲ್ಲಿ ಬಿದ್ದೆದ್ದು ನೂರಾರು ವಿದ್ಯಾರ್ಥಿಗಳು, ಸಾರ್ವಜನಿಕರು ಕೆಸರು ಗದ್ದೆಯ ಕ್ರೀಡಾಕೂಟದ ಸವಿಯನ್ನು ಸವಿದರು. ಸಂಪೂರ್ಣ ಕೆಸರುಮಯ ವಾದರೂ ತಣಿಯದ ಉತ್ಸಾಹದಿಂದ ಭಾಗವಹಿಸಿ ಗಮನ ಸೆಳೆದರು.

ಪೈಪೋಟಿ ಸಂದರ್ಭ ಕೆಸರು ಗದ್ದೆಯಲ್ಲಿಯೇ ಬಿದ್ದು, ಎದ್ದು ತಮ್ಮ ಕ್ರೀಡಾ ಸ್ಫೂರ್ತಿಯನ್ನು ಮೆರೆದರು. ಹಗ್ಗಜಗ್ಗಾಟ, ನಾಟಿ ಓಟ, ಪೈರು ಕೀಳುವುದು, ನಾಟಿ ನೆಡುವುದು, ದಾರೆ ನಾಟಿ ಮಾಡು ವುದು, ಪೈರು ಹಿಡಿಯನ್ನು ಎಸೆಯುವುದು, ಅಡಿಕೆ ಹಾಳೆ ಎಳೆಯುವ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದ ಸ್ಪರ್ಧಿಗಳು ಸಂತಸಪಟ್ಟರು.

ಇದಕ್ಕೂ ಮುನ್ನ, ಮುಖ್ಯ ರಸ್ತೆಯಲ್ಲಿ ಒಡ್ಡೋಲಗದೊಂದಿಗೆ ಅತಿಥಿಗಳನ್ನು ಮೆರವಣಿಗೆಯಲ್ಲಿ ಕರೆತರಲಾಯಿತು. ಈ ಸಂದರ್ಭ ಒಡ್ಡೋಲಗಕ್ಕೆ ಹಲವರು ಕುಣಿದು ಕುಪ್ಪಳಿಸಿದರು. ನಾಟಿ ಸ್ಪರ್ಧೆಯ ಸಂದರ್ಭ ಸಾಂಪ್ರದಾಯಿಕ ಓಯ್ಯಪಾಟ್ ಹಾಡಿ ನಾಟಿ ಸ್ಪರ್ಧಾಳುಗಳನ್ನು ಹುರಿದುಂಬಿಸಲಾಯಿತು.

ಮುಖ್ಯ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಕಾನೂರು ಕೊಡವ ಸಮಾಜದ ಅಧ್ಯಕ್ಷ ಮಚ್ಚಮಾಡ ಕಂದಾ ಭೀಮಯ್ಯ ಕೊಡಗಿನಲ್ಲಿ ಹಿರಿಯರಿಗೆ ಭತ್ತದ ಸಾಂಪ್ರದಾಯಿಕ ಕೃಷಿಯ ಅನುಭವವಿದೆ. ಆದರೆ, ಯುವ ಪೀಳಿಗೆಗೆ ಅದರ ಅರಿವು ಇಲ್ಲ. ನಾವು ಸಂತೋಷದಿಂದ ಭತ್ತದ ನಾಟಿ ಮಾಡಿದ ನಂತರ ವನ್ಯ ಪ್ರಾಣಿಗಳ ಪಾಲಾಗುತ್ತಿದೆ. ಎಲ್ಲರೂ ಗದ್ದೆಗಳನ್ನು ಕೃಷಿಗೆ ಪರಿವರ್ತಿಸಿದಾಗ ಇಂತಹ ಕಾರ್ಯಕ್ರಮಗಳು ಅರ್ಥಪೂರ್ಣವಾಗುತ್ತದೆ ಎಂದರು.

ಕಾನೂರು ಗ್ರಾ.ಪಂ ಅಧ್ಯಕ್ಷೆ ಹೆಮ್ಮಚ್ಚಿಮನೆ ಲತಾ ಗಣೇಶ್ ಮಾತನಾಡಿ, ಕೊಡಗಿನ ಭತ್ತದ ಕೃಷಿ ಯ ಗತವೈಭವ ಮರುಕಳಿಸಲು ಯುವ ಪೀಳಿಗೆ ಮುಂದಾಗಬೇಕು. ಹಿಂದಿನ ಕಾಲದಲ್ಲಿ ಭತ್ತದ ಗದ್ದೆಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದರು. ಮದುವೆಗೆ ಹೆಣ್ಣು ನೀಡಲು ಹುಡುಗನ ಕಡೆಯವರ ಭತ್ತದ ಗದ್ದೆಗಳನ್ನು ಪರಿಗಣಿಸಲಾಗುತ್ತಿತ್ತು. ಹೆಚ್ಚು ಭತ್ತದ ಗದ್ದೆ ಇದ್ದವರಿಗೆ ಹೆಣ್ಣು ಕೊಡಲು ಪ್ರಾಶಸ್ತ್ಯ ನೀಡಲಾಗುತ್ತಿತ್ತು. ಹಿಂದಿನ ಕಾಲದಲ್ಲಿ ಭತ್ತದ ಕೃಷಿಯಲ್ಲಿ ಕುಟುಂಬದ ಎಲ್ಲಾ ಸದಸ್ಯರು ತಲ್ಲೀನರಾ ಗುತ್ತಿದ್ದರು. ಆದರೆ, ಇಂದಿನ ಲಾಭ ನಷ್ಟದ ಲೆಕ್ಕಾಚಾರ ಹಾಗೂ ಯಂತ್ರೋಪಕರಣಗಳ ಬಳಕೆಯಿಂದ ಸಾಂಪ್ರದಾಯಿಕ ಕೃಷಿ ಪದ್ಧತಿ ಮರೆಯಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಸನ್ಮಾನ: ನಾಡಿನ ವ್ಯಾಪ್ತಿಯಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಹಾಗೂ ಸೇವೆ ಸಲ್ಲಿಸಿರುವ ಹಿರಿಯರನ್ನು ಈ ಸಂದರ್ಭ ಸನ್ಮಾನಿಸಲಾಯಿತು. ಸುಳ್ಳಿಮಾಡ ಜಿ.ತಿಮ್ಮಯ್ಯ, ಕೋತೂರು ಊರು ಪಟೇಲರಾಗಿದ್ದ ಮನ್ನಕ್ಕಮನೆ ನಾಣಮಯ್ಯ ಅವರ ಪರವಾಗಿ ಅವರ ಪುತ್ರ ಈಶ್ವರ, ಕಾನೂರಿನ ಸಮಾಜ ಸೇವಕಿ ಚೆಪ್ಪುಡೀರ ಪಾರ್ವತಿ ಪೊನ್ನಪ್ಪ, ಕೋತೂರಿನ ನಿವೃತ್ತ ಉಪಾಧ್ಯಾಯರಾದ ಹೆಮ್ಮಚ್ಚಿಮನೆ ಜಿ.ವಿಠಲ ಅವರನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಕೋತೂರು ಅಮ್ಮ ಕೊಡವ ಸಮಾಜದ ಅಧ್ಯಕ್ಷ ಮನ್ನಕ್ಕಮನೆ ರಾಜು ಅಯ್ಯಪ್ಪಮಯ್ಯ, ಕಾನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಅಳಮೇಂಗಡ ವಿವೇಕ್, ಕೋತೂರು-ಕಾನೂರು ಮಹಿಳಾ ಸಮಾಜದ ಅಧ್ಯಕ್ಷೆ ಚೊಟ್ಟೆಕ್‍ಮಾಡ ಮಾಯಮ್ಮ ಬೋಪಯ್ಯ, ಕೆಂಬಟ್ಟಿ ಜನಾಂಗದ ಮುಖಂಡ ಜೋಕುಟ್ಟಡ ನೀಲಾ, ಗ್ರಾ.ಪಂ ಮಾಜಿ ಸದಸ್ಯ ಹೆಚ್.ಪಿ ನಂಜುಂಡ ಉಪಸ್ಥಿತರಿದ್ದರು.

Translate »