ಎ.ಕೆ.ಸುಬ್ಬಯ್ಯ ಇನ್ನಿಲ್ಲ
ಮೈಸೂರು

ಎ.ಕೆ.ಸುಬ್ಬಯ್ಯ ಇನ್ನಿಲ್ಲ

August 28, 2019

ಬೆಂಗಳೂರು, ಆ.27- ನಾಡಿನ ಹಿರಿಯ ರಾಜಕಾರಣಿ, ಪ್ರಗತಿಪರ ಹೋರಾಟಗಾರ, ಮಾಜಿ ಶಾಸಕ ಅಜ್ಜಿಕುಟೀರ ಕಾರ್ಯಪ್ಪ ಸುಬ್ಬಯ್ಯ (ಎ.ಕೆ. ಸುಬ್ಬಯ್ಯ) ಮಂಗಳವಾರ ಮಧ್ಯಾಹ್ನ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 85 ವರ್ಷ ವಯಸ್ಸಾಗಿತ್ತು.

ಕಳೆದ ಒಂದು ವರ್ಷದಿಂದ ಮೂತ್ರಪಿಂಡದ ಸಮಸ್ಯೆಯಿಂದ ಬಳಲು ತ್ತಿದ್ದ ಸುಬ್ಬಯ್ಯ ಅವರನ್ನು ಇತ್ತೀಚೆಗೆ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೆಲವು ದಿನಗಳ ಹಿಂದೆ ಅವರ ಆರೋಗ್ಯ ದಲ್ಲಿ ಚೇತರಿಕೆ ಕಂಡುಬಂದಿತ್ತಾದರೂ ಸೋಮವಾರ ಸಂಜೆ ಅವರು ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದರು ಎನ್ನಲಾಗಿದೆ. ಮೃತರ ಅಂತ್ಯ ಕ್ರಿಯೆ ಆ.28 ರಂದು ಹುದಿಕೇರಿ ಸಮೀಪದ ಬೆಳ್ಳೂರಿನ ಅವರ ನೆಚ್ಚಿನ ಕಲ್ಲುಗುಂಡಿ ತೋಟದಲ್ಲಿ ಸಂಜೆ 4.30 ಗಂಟೆಗೆ ನಡೆಯಲಿದೆ. ಇದಕ್ಕೂ ಮೊದಲು ಅವರ ಬೆಳ್ಳೂರಿನ ನಿವಾಸದಲ್ಲಿ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ. ಶೋಷಿತರ ಪರ ಧ್ವನಿಯಾಗಿದ್ದ ಅವರು ಪ್ರಖರ ವಿಚಾರವಾದಿಯಾಗಿದ್ದರು. ರಾಜಕೀಯ ದಲ್ಲಿ ಯಾವುದೇ ಪಕ್ಷದಲ್ಲಿದ್ದರೂ ಖಾಯಂ ವಿರೋಧ ಪಕ್ಷದ ನಾಯಕನಂತೆ ಅಧಿಕಾರದಲ್ಲಿರುವ ಸರ್ಕಾರಗಳ ಮೇಲೆ ಚಾಟಿ ಬೀಸುತ್ತಿದ್ದರು.

ಹಿನ್ನೆಲೆ: 1934 ಆ.9 ರಂದು ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಹುದಿಗೇರಿ ಗ್ರಾಮದ ಕೊಣ ಗೇರಿ ಅಜ್ಜಿಕುಟೀರ ಕಾರ್ಯಪ್ಪ ಹಾಗೂ ಚಿನ್ನಮ್ಮ ದಂಪತಿಯ ಏಕೈಕ ಪುತ್ರನಾಗಿ ಎ.ಕೆ.ಸುಬ್ಬಯ್ಯ ಜನಿಸಿದರು. ಬಾಲ್ಯದಲ್ಲಿಯೇ ತಂದೆ ಕಳೆದುಕೊಂಡಿದ್ದರಿಂದ ಸೋದರ ಮಾವನ ಆಸರೆಯಲ್ಲಿ ಬೆಳೆದ ಇವರು ಬಾಲ್ಯ ದಿಂದಲೇ ಶೋಷಣೆ, ಅನ್ಯಾಯದ ಪರ ಧ್ವನಿಯೆತ್ತುತ್ತಿದ್ದರು. ಹರಿಹರ ಸಮೀಪದ  ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆಯುತ್ತಿದ್ದ ಸಂದರ್ಭದಲ್ಲಿಯೇ ಇವರಲ್ಲಿ ಹೋರಾ ಟದ ಕಿಚ್ಚು ಮೊಳಕೆ ಒಡೆಯಿತು. ಶ್ರೀಮಂಗಲ ಕಂದಾಯ ಕಚೇರಿಯಲ್ಲಿ ರೈತರಿಗೆ ಕಿರುಕುಳ ವಿಷಯ ವನ್ನು ಪ್ರಶ್ನಿಸಿದ್ದರ ಪರಿಣಾಮ ಹಲವರ ಕೆಂಗಣ್ಣಿಗೆ ಗುರಿಯಾಗಬೇಕಾಯಿತು. ಸೋಮವಾರಪೇಟೆ ತಾಲೂ ಕಿನ ಗೆಜ್ಜೆಹನಗೋಡಿ ಶಾಲೆಯಲ್ಲಿ ಶಿಕ್ಷಕರಾಗಿ ವೃತ್ತಿ ಆರಂಭಿಸಿ, ನಂತರ ಆರೋಗ್ಯ ಇಲಾಖೆ ಯಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ ಕೆಲಸ ಮಾಡಿದರು.

1963 ರಲ್ಲಿ ಮೈಸೂರಿನ ಶಾರದಾ ವಿಲಾಸ ಕಾಣೂನು ಕಾಲೇಜಿನಲ್ಲಿ ಕಾನೂನು ಪದವಿ ಪಡೆದು ವಿರಾಜ ಪೇಟೆಯಲ್ಲಿ ವಕೀಲಿ ವೃತ್ತಿ ಆರಂಭಿಸುವುದರ ಜೊತೆಗೆ ರಾಜಕೀಯದಲ್ಲಿಯೂ ತೊಡಗಿಸಿಕೊಂಡರು. 1959 ರಲ್ಲಿ ‘ಪ್ರಜಾ ಸೋಷಿಯಲಿಸ್ಟ್ ಪಾರ್ಟಿ’ ಅಭ್ಯರ್ಥಿಯ ಪರ ವಿರಾಜಪೇಟೆಯಲ್ಲಿ ಪ್ರಚಾರ ನಡೆಸಿದರು. 1966ರಲ್ಲಿ ಜನಸಂಘದಿಂದ ಮೇಲ್ಮನೆ ಸದಸ್ಯರಾಗಿ ಆಯ್ಕೆಯಾಗಿ ಒಟ್ಟು ನಾಲ್ಕು ಬಾರಿ ವಿಧಾನ ಪರಿ ಷತ್ತಿಗೆ ಆಯ್ಕೆಯಾಗಿದ್ದರು. ಅತ್ಯುತ್ತಮ ಕಾನೂನು ಪಂಡಿತರಾಗಿದ್ದ ಎ.ಕೆ.ಸುಬ್ಬಯ್ಯ, ಕೊಡಗು ಜಿಲ್ಲೆಯ ಜಮ್ಮಾಬಾಣೆ ಸಮಸ್ಯೆ, ಮಾಧವ ಗಾಡ್ಗೀಲ್ ವರದಿ ಅನುಷ್ಠಾನ, ಯುನೆಸ್ಕೋ ಪ್ರಾಜೆಕ್ಟ್ ಸೇರಿದಂತೆ ಜಿಲ್ಲೆಗೆ ಮಾರಕವಾಗಿ ಪರಿಣಮಿಸುವ ಸಾಧ್ಯತೆಯಿದ್ದ ಎಲ್ಲಾ ಯೋಜನೆಗಳ ವಿರುದ್ಧ ಧ್ವನಿ ಎತ್ತುವ ಮೂಲಕ ಸಾರ್ವಜನಿಕ ಹಾಗೂ ಕಾನೂನು ಹೋರಾಟವನ್ನೂ ನಡೆಸಿದ್ದರು. ನೇರ ನಿಷ್ಠುರವಾದಿ, ಚಳವಳಿಗಾರ, ಶೋಷಿತರಿಗೆ ಧ್ವನಿಯಾಗಿದ್ದ ಸುಬ್ಬಯ್ಯ ಹೋರಾಟದ ಹಾದಿಯಲ್ಲಿ ಬದುಕು ಸವೆಸಿದವರು. ಜನಸಂಘದ ಮೂಲಕ ಬೆಳೆದು ಬಿಜೆಪಿ ಪಕ್ಷದಲ್ಲಿ ಸೇವೆ ಸಲ್ಲಿಸಿದ ಸುಬ್ಬಯ್ಯ ಅವರಿಗೆ ಅಟಲ್ ಬಿಹಾರಿ ವಾಜಪೇಯಿ ಅವರೊಂದಿಗೆ ಒಡನಾಟವಿತ್ತು. ವಿರಾಜಪೇಟೆಯ ಸುಬ್ಬಯ್ಯ ನಿವಾಸಕ್ಕೂ ವಾಜಪೇಯಿ ಭೇಟಿ ನೀಡಿದ್ದರು. 1982ರಲ್ಲಿ ಬಿಜೆಪಿ ಮೊದಲ ರಾಜ್ಯಾಧ್ಯಕ್ಷರೂ ಆಗಿದ್ದ ಸಂದರ್ಭದಲ್ಲಿ ನಡೆದ ವಿಧಾನಸಭೆ ಚುನಾವಣೆ ಯಲ್ಲಿ ಬಿ.ಎಸ್.ಯಡಿಯೂರಪ್ಪ,

ವಿ.ಎಸ್. ಆಚಾರ್ಯ ಸೇರಿದಂತೆ 18 ಮಂದಿ ಬಿಜೆಪಿ ಸದಸ್ಯರು ಮೊದಲ  ಬಾರಿಗೆ ವಿಧಾನಸಭೆ ಪ್ರವೇಶಿಸಿದರು. ಈ ಅವಧಿಯಲ್ಲಿ ಅಂದಿನ ಮುಖ್ಯಮಂತ್ರಿ ಆರ್. ಗುಂಡೂರಾವ್ ಸರ್ಕಾರದ ಭ್ರಷ್ಟಚಾರ ಬಯಲಿಗೆಳೆದಿದ್ದಲ್ಲದೆ, ಆ ಸರ್ಕಾರದಲ್ಲಿ ಸಚಿವರಾಗಿದ್ದ ಸಿಎಂ. ಇಬ್ರಾಹಿಂ ಅವರ ‘ರೋಲೆಕ್ಸ್ ಹಗರಣ’ವನ್ನು ಬಯಲು ಮಾಡಿದ್ದರು. ಬಳಿಕ ಕಾರಣಾಂತ ರಗಳಿಂದ ಬಿಜೆಪಿಯಿಂದ ಇವರನ್ನು ಉಚ್ಛಾಟಿಸಲಾಯಿತು. ಆನಂತರ ಬಿಜೆಪಿ ಮತ್ತು ಆರ್‍ಎಸ್‍ಎಸ್ ವಿರುದ್ಧ ತಮ್ಮ ಮೊನಚಾದ ಮಾತುಗಳ ಮೂಲಕ ಟೀಕಿಸುವುದರಲ್ಲೇ ಹೆಚ್ಚು ಖ್ಯಾತಿ ಪಡೆದಿದ್ದರು. 1984ರ ಚುನಾವಣೆ ಬಳಿಕ ‘ಕನ್ನಡ ನಾಡು’ ಪ್ರಾದೇಶಿಕ ಪಕ್ಷ ಕಟ್ಟಿದರಾದರೂ ಆರ್ಥಿಕ ಸಂಕಷ್ಟಗಳಿಂದ ಪಕ್ಷ ಬೆಳೆಸಲಾಗದೇ ಕಾಂಗ್ರೆಸ್ ಸೇರುವಂತಾಯಿತು. ಬಿಎಸ್‍ಪಿಯಲ್ಲಿಯೂ ಕೆಲವು ವರ್ಷ ಗುರುತಿಸಿಕೊಂಡ ಇವರಿಗೆ ಹೋರಾಟಕ್ಕೆ ಮತ್ತೊಂದು ಆಯಾಮ ಸಿಕ್ಕಂತಾಯಿತು ಎಂಬ ಮಾತುಗಳಿವೆ. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ 19 ತಿಂಗಳ ಸೆರೆಮನೆ ವಾಸವನ್ನು ಸುಬ್ಬಯ್ಯ ಅನುಭವಿಸಿದ್ದರು.

ಅಜ್ಜಿಕುಟ್ಟೀರ ಕಾರ್ಯಪ್ಪ ಕೆ.ಸುಬ್ಬಯ್ಯ ಅವರ ಪಾರ್ಥಿವ ಶರೀರವನ್ನು ಬೆಂಗಳೂರಿನ ಆರ್.ಟಿ.ನಗರದಲ್ಲಿರುವ ಅವರ ನಿವಾಸದಲ್ಲಿ ಸಾರ್ವಜನಿಕ ದರ್ಶನಕ್ಕಿಟ್ಟು, ನಂತರ ರಸ್ತೆ ಮಾರ್ಗವಾಗಿ ಇಂದು ರಾತ್ರಿ ಕೊಡಗಿಗೆ ತರಲಾಗಿದೆ. ಎ.ಕೆ.ಸುಬ್ಬಯ್ಯ ಅವರು ರಾಜ್ಯ ಸರ್ಕಾರದ ಮಾಜಿ ಸಹಾಯಕ ಅಡ್ವೋಕೆಟ್ ಜನರಲ್ ಆಗಿದ್ದ ಎ.ಎಸ್. ಪೊನ್ನಣ್ಣ ಸೇರಿದಂತೆ ಐವರು ಪುತ್ರರು ಹಾಗೂ ನಾಡಿನಾದ್ಯಂತ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಅಗಲಿದ್ದಾರೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಟಿಪ್ಪು ಜಯಂತಿ ಆಚರಣೆಯನ್ನು ಬೆಂಬಲಿಸಿದ್ದರ ಪರಿಣಾಮ ಕೆಲವು ಸಂಘಟನೆಗಳ ವಿರೋಧಕ್ಕೂ ಇವರು ಗುರಿಯಾಗಬೇಕಾಯಿತು. ಸುಬ್ಬಯ್ಯ ಅವರ ನಿಧನಕ್ಕೆ ಹಲವರು ಕಂಬನಿ ಮಿಡಿದಿದ್ದಾರೆ. ನೇರ,  ದಿಟ್ಟ ಮಾತುಗಳಿಂದ ಸಮಕಾಲೀನ ವಿದ್ಯಮಾನಗಳಿಗೆ ನಿರ್ಭೀತಿಯಿಂದ ಪ್ರತಿಕ್ರಿಯಿಸುತ್ತಾ  ಆತ್ಮಸಾಕ್ಷಿಯಂತೆ ಸುಬ್ಬಯ್ಯ ಇದ್ದರು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ ವ್ಯಕ್ತಪಡಿಸಿದ್ದಾರೆ.  ಹಿರಿಯ ಹೋರಾಟಗಾರ  ಸುಬ್ಬಯ್ಯ ಅವರ ಸಾವಿನಿಂದಾಗಿ ತಾವು ವೈಯಕ್ತಿಕವಾಗಿ ಒಬ್ಬ ಸ್ನೇಹಿತನನ್ನು  ಕಳೆದುಕೊಂಡಿದ್ದೇನೆ. ಕನ್ನಡ ನಾಡು ಒಳ್ಳೆಯ ಮಾರ್ದದರ್ಶಕನನ್ನು ಕಳೆದುಕೊಂಡು ಬಡವಾಗಿದೆ  ಎಂದು ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ.

ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಜನಸಂಘದಿಂದ ಬಂದು ಬಿಜೆಪಿ ರಾಜ್ಯಾಧ್ಯಕ್ಷರಾಗಿ ನಂತರ ಹಲವಾರು ಸಮಾಜಮುಖಿ ಹೋರಾಟಗಳಲ್ಲಿ ಭಾಗಿಯಾಗಿರುವ ಎ.ಕೆ.ಸುಬ್ಬಯ್ಯ ಅವರ ಅಗಲಿಕೆ ಸುದ್ದಿ ತಮಗೆ  ತೀವ್ರ ದುಃಖ ತಂದಿದೆ. ಆತ್ಮೀಯ ಸ್ನೇಹಿತರಾಗಿದ್ದ ಅವರು ತುರ್ತು ಪರಿಸ್ಥಿತಿ  ಸಂದರ್ಭದಲ್ಲಿ ತಮ್ಮೊಂದಿಗೆ ಸೆರೆಮನೆ ವಾಸ ಅನುಭವಿಸಿ ದ್ದರು. ಮೃತರ ಆತ್ಮಕ್ಕೆ ಶಾಂತಿ  ಸಿಗಲಿ ಎಂದು ಅವರು ಪ್ರಾರ್ಥಿಸಿದ್ದಾರೆ.

Translate »