ಮೈಸೂರು ನಗರದಲ್ಲಿ ಶನಿವಾರದಿಂದ ಮತ್ತೊಂದು ನಿರಾಶ್ರಿತರ ನೆರವು ಕೇಂದ್ರ
ಮೈಸೂರು

ಮೈಸೂರು ನಗರದಲ್ಲಿ ಶನಿವಾರದಿಂದ ಮತ್ತೊಂದು ನಿರಾಶ್ರಿತರ ನೆರವು ಕೇಂದ್ರ

March 28, 2020

ಮೈಸೂರು, ಮಾ.28(ಎಸ್ ಬಿಡಿ)-  ಮೈಸೂರು ನಗರದಲ್ಲಿ ಶನಿವಾರದಿಂದ ಮತ್ತೊಂದು ನಿರಾಶ್ರಿತರ ನೆರವು ಕೇಂದ್ರ ಆರಂಭವಾಗಿದೆ.

ನಗರದ ಮೆಟ್ರೋಪೋಲ್ ವೃತ್ತದ ಬಳಿ, ವಿನೋಬಾ ರಸ್ತೆಯಲ್ಲಿರುವ ನಂಜರಾಜ ಬಹದ್ದೂರ್ ಛತ್ರದಲ್ಲಿ 2ನೇ ನೆರವು ಕೇಂದ್ರ ಆರಂಭಿಸಲಾಗಿದೆ. ಈಗಾಗಲೇ ಗಂಗೋತ್ರಿ ಬಡಾವಣೆ ಯೂತ್ ಹಾಸ್ಟೆಲ್ ನೆರವು ಕೇಂದ್ರದಲ್ಲಿ 70ಕ್ಕೂ ಹೆಚ್ಚು ನಿರಾಶ್ರಿತರು ಆಶ್ರಯ ಪಡೆದಿದ್ದಾರೆ.

ಕೊರೊನಾ ನಿಯಂತ್ರಿಸುವ ನಿಟ್ಟಿನಲ್ಲಿ ಸಂಪೂರ್ಣ ಲಾಕ್ ಡೌನ್ ಮಾಡಲಾಗಿರುವ ಹಿನ್ನೆಲೆಯಲ್ಲಿ ನಿರಾಶ್ರಿತರು ತೀವ್ರ ಸಂಕಷ್ಟಕ್ಕೆ ಸಿಲುಕಿ ನರಳುತ್ತಿದ್ದಾರೆ. ಮೈಸೂರು ನಗರದಲ್ಲಿ ನೂರಾರು ಮಂದಿ ಊಟ, ವಸತಿ ಇಲ್ಲದೆ ಕಂಗಾಲಾಗಿದ್ದಾರೆ. ಇಂತಹವರ ನೆರವಿಗೆ ದಾನಿಗಳು ಮುಂದಾಗಿದ್ದಾರಾದರೂ ನಾಳೆಯ ಪರಿಸ್ಥಿತಿ ಏನೆಂಬ ಆತಂಕ ಇದ್ದೇ ಇದೆ. ಹಾಗಾಗಿ ನಗರ ಪಾಲಿಕೆ, ದಾನಿಗಳ ಸಹಕಾರದಿಂದ ನಿರಾಶ್ರಿತರಿಗೆ ನೆರವಾಗಲು ಮುಂದಾಗಿದೆ.

ಕೈ ಜೋಡಿಸಿದ ದಾನಿಗಳು- ಸುತ್ತೂರು ಶ್ರೀಗಳು, ಮೈಸೂರು ಬಿಷಪ್, ಶಾಸಕ ಎಸ್.ಎ.ರಾಮದಾಸ್, ಬಿಜೆಪಿ ಮುಖಂಡ ಹೆಚ್.ವಿ.ರಾಜೀವ್, ಒಂಟಿಕೊಪ್ಪಲು ರೋಟರಿ ಸಂಸ್ಥೆ ಸೇರಿದಂತೆ ಅನೇಕ ಮಹನೀಯರು, ಸಂಸ್ಥೆಯವರು ಪಾಲಿಕೆಯ ಸತ್ಕಾರ್ಯಕ್ಕೆ ನೆರವಾಗಲು ಮುಂದಾಗಿದ್ದಾರೆ. ಇವರು ಒದಗಿಸಿದ ಆಹಾರವನ್ನು ನಿರಾಶ್ರಿತರಿಗೆ ನೀಡಲಾಗುತ್ತಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

ದಾನಿಗಳು ನಗರ ಪಾಲಿಕೆ ಹೆಚ್ಚುವರಿ ಆಯುಕ್ತ ಎನ್.ಎಂ.ಶಶಿಕುಮಾರ್(9449276306) ಅವರನ್ನು ಸಂಪರ್ಕಿಸಬಹುದು.
17 ಸಾಂತ್ವನ ಕೇಂದ್ರ- ಸಂಪೂರ್ಣ ಲಾಕ್ ಡೌನ್ ನಿಂದಾಗಿ ಅಸಂಘಟಿತ ಕಾರ್ಮಿಕರು ಆಹಾರಕ್ಕೆ ಪರಿತಪಿಸುವಂತಾಗಿದೆ. ಹಾಗಾಗಿ ಮೈಸೂರು ನಗರದ ಎಲ್ಲಾ 9 ವಲಯಗಳಲ್ಲೂ ಸಾಂತ್ವನ ಕೇಂದ್ರ ನಿರ್ಮಿಸಲಾಗಿದೆ.

ಲಕ್ಷ್ಮೀಪುರಂನ ಹೊಯ್ಸಳ ಕರ್ನಾಟಕ ಸಂಘ, ಚಾಮುಂಡೇಶ್ವರಿ ಕರಿಮಾರಮ್ಮ ಕಲ್ಯಾಣ ಮಂಟಪ, ಅಶೋಕ್ ಪುರಂ ವನಿತಾ ಸದನ ಶಾಲೆ, ಜಯನಗರ ಇಸ್ಕಾನ್ ದೇವಾಲಯ ಸಮೀಪದ ಸಮುದಾಯ ಭವನ, ಶಾರದಾದೇವಿ ನಗರ ಇಂದಿರಾ ಕ್ಯಾಂಟಿನ್, ಕುವೆಂಪುನಗರ ಕೆಹೆಚ್ ಬಿ ಕಾಂಪ್ಲೆಕ್ಸ್, ಕುಕ್ಕರಹಳ್ಳಿ ಸಮುದಾಯ ಭವನ, ಕುದುರಾಮಾಳ ಸಮುದಾಯ ಭವನ, ಕುಂಬಾರಕೊಪ್ಪಲು ಮಹದೇಶ್ವರ ಸಮುದಾಯ ಭವನ, ಆರ್ ಎಂಸಿ ವೃತ್ತ, ಕೆ.ಆರ್.ಆಸ್ಪತ್ರೆ ಆವರಣದ ಇಂದಿರಾ ಕ್ಯಾಂಟಿನ್

Translate »