ಟೀ ಹಣ ಕೇಳಿದ್ದಕ್ಕೆ ಅಂಗಡಿಯವರ ಮೇಲೆ ಹಲ್ಲೆ
ಮೈಸೂರು

ಟೀ ಹಣ ಕೇಳಿದ್ದಕ್ಕೆ ಅಂಗಡಿಯವರ ಮೇಲೆ ಹಲ್ಲೆ

October 31, 2019

ಮೈಸೂರು,ಅ.30(ಆರ್‍ಕೆ)-ಕುಡಿದ ಟೀ ಹಣ ಕೇಳಿದ ಅಂಗಡಿಯವರ ಮೇಲೆರಗಿ ಹಲ್ಲೆ ಮಾಡಿದ್ದಲ್ಲದೆ, ವ್ಯಕ್ತಿ ಯೋರ್ವ ಬಿಸ್ಕೆಟ್ ಕಂಟೇನರ್, ಗಾಜಿನ ಬಾಟಲಿಗಳು, ಟೇಬಲ್ ಅನ್ನು ಕಿತ್ತು ಬಿಸಾಡಿ ರಂಪಾಟ ಮಾಡಿದ ಘಟನೆ ಮೈಸೂರಿನ ಎಂಜಿ ರಸ್ತೆಯಲ್ಲಿ ನಡೆಯಿತು.

ಮೈಸೂರಿನ ಕಾಕರವಾಡಿ ನಿವಾಸಿ ಕಲೀಂ(35) ಟೀ ಅಂಗಡಿ ವಸ್ತುಗಳನ್ನೆಲ್ಲಾ ಧ್ವಂಸ ಮಾಡಿ ಹೈಡ್ರಾಮ ನಡೆಸಿದ ವ್ಯಕ್ತಿಯಾಗಿದ್ದು, ನಂತರ ಸಾರ್ವಜನಿಕ ರಿಂದ ಗೂಸಾ ತಿಂದು ಪೊಲೀಸರ ಅತಿಥಿಯಾಗಿ ದ್ದಾನೆ. ಇಂದು ಬೆಳಿಗ್ಗೆ ಸುಮಾರು 7.30 ಗಂಟೆ ವೇಳೆ ಎಂಜಿ ರಸ್ತೆಯ ಡಬಲ್ ಟ್ಯಾಂಕ್ ಬಳಿ ಇರುವ ಬಿಬಿ(ಬಾಬಾ ಬುಡನ್‍ಗಿರಿ) ಟೀ ಸ್ಟಾಲ್‍ಗೆ ಬಂದ ಕಲೀಂ, ಟೀ ಕುಡಿದು, ಸಿಗರೇಟ್ ಸೇದಿ ಹಣ ಕೊಡದೆ ಹೋಗಿದ್ದ. ಮತ್ತೆ 10 ಗಂಟೆಗೆ ಬಂದ ಆತ, ಟೀ ಕೇಳಿದ. ಬೆಳಿಗ್ಗೆ ಹಣ ಕೊಡದೆ ಹೋಗಿ ಮತ್ತೆ ಈಗ ಕೇಳಿದರೆ ಹೇಗೆ ಎಂದು ಅಂಗಡಿಯವರು ಟೀ ಕೊಡಲು ನಿರಾಕರಿಸಿದ್ದಾಗಿ ಅಂಗಡಿ ಮಾಲೀಕ ಜಬ್ಬರ್ ಸಿಂಗ್ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

ಅದರಿಂದ ಕೋಪಗೊಂಡ ಕಲೀಂ, ಅಂಗಡಿ ಹುಡು ಗರ ಮೇಲೆರಗಿ ಹಲ್ಲೆ ನಡೆಸಿದ್ದಲ್ಲದೆ, ಬಿಸ್ಕೆಟ್, ಕೇಕ್ ಗಳನ್ನು ತುಂಬಿದ್ದ ಗಾಜಿನ ಬಾಟಲಿಗಳನ್ನು ತೆಗೆದು ಫುಟ್‍ಪಾತ್‍ಗೆಸೆದು ಟೇಬಲ್, ಕಂಟೇನರ್ ಅನ್ನು ಕಾಲಿನಿಂದ ಒದ್ದು ಬೀಳಿಸಿದ್ದಲ್ಲದೆ, ಸಾಫ್ಟ್ ಡ್ರಿಂಕ್ಸ್ ಬಾಟಲಿ ಇದ್ದ ರೇಕ್‍ಗಳನ್ನು ಎತ್ತಿಹಾಕಿ ಸಿನಿಮಾ ಶೈಲಿಯಲ್ಲಿ ಧ್ವಂಸ ಮಾಡಿದ್ದಾನೆ ಎಂದು ಅವರು ತಿಳಿಸಿದರು.

ಕಲೀಂ ಪೆಪ್ಸಿ ಬಾಟಲಿ ಒಡೆದು ಕೈಯಲ್ಲಿ ಹಿಡಿದು ಕೊಂಡಿದ್ದರಿಂದ ಹೆದರಿದ ಅಂಗಡಿ ಹುಡುಗರು ಹತ್ತಿರ ಹೋಗಲಿಲ್ಲ. ಸುಮಾರು 10 ನಿಮಿಷಗಳ ಕಾಲ ಅಂಗಡಿ ಯಲ್ಲಿದ್ದ ಎಲ್ಲಾ ವಸ್ತುಗಳನ್ನೂ ಬೀದಿಗೆಸೆದು ಧ್ವಂಸ ಗೊಳಿಸಿದ ಆತ, ಕಡೆಗೆ ತನ್ನ ಸ್ನೇಹಿತನ ಸ್ಕೂಟರ್ ಹತ್ತಿ ಪರಾರಿಯಾಗಲೆತ್ನಿಸಿದಾಗ ಸಾರ್ವಜನಿಕರು ಆತ ನನ್ನು ಹಿಡಿದು ಥಳಿಸಿ ಕಡೆಗೆ ಪೊಲೀಸರಿಗೊಪ್ಪಿಸಿದರು ಎಂದು ಜಬ್ಬರ್ ಸಿಂಗ್ ಘಟನೆಯ ವಿವರ ನೀಡಿದರು.

ಆತ ನಡೆಸಿದ ದಾಂಧಲೆ, ರಂಪಾಟದ ದೃಶ್ಯಗಳು ಅಂಗಡಿಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿವೆ ಎಂದ ಅವರು, ಕಳೆದ ನಾಲ್ಕೈದು ದಿನಗಳಿಂದಲೂ ಆ ವ್ಯಕ್ತಿ ಇದೇ ರೀತಿ ಹಣ ಕೊಡದೆ ಟೀ ಕುಡಿದು ಹೋಗು ತ್ತಿದ್ದ, ನಾವೂ ಅಷ್ಟಾಗಿ ತಲೆಕೆಡಿಸಿಕೊಂಡಿರಲಿಲ್ಲ ಎಂದು ತಿಳಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಲಕ್ಷ್ಮೀಪುರಂ ಠಾಣೆ ಗರುಡ ಪೊಲೀಸರು, ಕಲೀಂನನ್ನು ವಶಕ್ಕೆ ಪಡೆದು ಕೆ.ಆರ್.ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ಪರೀಕ್ಷೆ ಮಾಡಿಸಿದ ನಂತರ ಪ್ರಕರಣ ದಾಖಲಿಸಿ ಬಂಧಿಸಿದರು. ಘಟನೆ ನಡೆದ ಸ್ಥಳದ ಮಹಜರು ನಡೆಸಿ ಅಲ್ಲಿನ ಸಿಸಿ ಕ್ಯಾಮರಾ ಫುಟೇ ಜಸ್ ಅನ್ನು ಸಂಗ್ರಹಿಸಿದರು. ಆರೋಪಿಯ ಸಂಬಂ ಧಿಕರನ್ನು ಕರೆಸಿ ವಿಚಾರಣೆ ನಡೆಸಿದಾಗ ಕಲೀಂಗೆ ಆಗಿಂದಾಗ್ಗೆ ಫಿಟ್ಸ್ ಬರುತ್ತದೆ, ಮಾನಸಿಕ ಆರೋ ಗ್ಯವೂ ಸರಿ ಇಲ್ಲದಿರುವುದರಿಂದ ಹಾಗೆ ಮಾಡಿರ ಬಹುದು ಎಂದು ಆತನ ಸಹೋದರ ತಿಳಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಹಾಡಹಗಲೇ ಜನನಿಬಿಡ ಹಾಗೂ ವಾಹನ ಸಂಚಾರ ದಟ್ಟಣೆ ಇರುವ ಎಂಜಿ ರಸ್ತೆಯಲ್ಲಿ ಸಾರ್ವಜನಿಕರೆದುರೇ ದಾಂಧಲೆ ನಡೆಸಿ ಟೀ ಅಂಗಡಿ ವಸ್ತುಗಳನ್ನು ಧ್ವಂಸ ಗೊಳಿಸಿರುವ ಘಟನೆ ನೆರೆದಿದ್ದವರನ್ನು ಬೆಚ್ಚಿ ಬೀಳಿಸಿದೆ. ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಲಕ್ಷ್ಮೀ ಪುರಂ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Translate »