ಅವಸಾನದತ್ತ ಸಾಗಿದೆ ಶ್ರೀರಾಮೇಶ್ವರ ದೇಗುಲ
ಹಾಸನ

ಅವಸಾನದತ್ತ ಸಾಗಿದೆ ಶ್ರೀರಾಮೇಶ್ವರ ದೇಗುಲ

July 16, 2018

ರಾಮನಾಥಪುರ: ತ್ರೇತಾ ಯುಗದ ಐತಿಹ್ಯ ಸಾರುವ ಇಲ್ಲಿನ ಸುಪ್ರಸಿದ್ಧ ಚರ್ತುಯುಗ ಮೂರ್ತಿ ಶ್ರೀ ರಾಮೇಶ್ವರ ದೇವಸ್ಥಾನವು ಸಂಬಂಧಪಟ್ಟವರ ನಿರ್ಲಕ್ಷ್ಯದಿಂದ ಅವಸಾನದತ್ತ ಸಾಗಿರುವುದು ಭಕ್ತರ ಆತಂಕಕ್ಕೆ ಕಾರಣವಾಗಿದೆ.

ಶತಮಾನಗಳಷ್ಟು ಪುರಾತನವಾದ ರಾಮೇಶ್ವರ ದೇವಸ್ಥಾನವು ಜೀವನದಿ ಕಾವೇರಿ ದಡದಲ್ಲಿದ್ದು, ಇಲ್ಲಿನ ಶಿವಲಿಂಗ ಶ್ರೀರಾಮೇಶ್ವರಸ್ವಾಮಿ ಗೋಪುರ, ರಾಜ ಗೋಪುರ ಹಾಗೂ ದೇವಸ್ಥಾನದ ಸುತ್ತಲಿನ ತಡೆಗೋಡೆಗಳ ಮೇಲೆ ಗಿಡ ಗಂಟಿಗಳು ಬೆಳೆದು ದೇವಸ್ಥಾನದ ಕಟ್ಟಡಕ್ಕೆ ಹಾನಿಯನ್ನುಂಟು ಮಾಡಿದೆ.

ಇತ್ತೀಚೆಗೆ ನಿರಂತರವಾಗಿ ಸುರಿಯು ತ್ತಿರುವ ಮಳೆಯಿಂದ ಶ್ರೀ ರಾಮೇಶ್ವರ ಸ್ವಾಮಿ ದೇವಾಲಯ ಗರ್ಭಗುಡಿ ಸೇರಿ ದಂತೆ ದೇಗುಲದ ಹಲವೆಡೆ ಸೋರು ತ್ತಿದ್ದು, ದೇಗುಲ ಆವರಣ ಜಲಾವೃತವಾಗಿದೆ. ದೇವಾಲಯದ ಗರ್ಭಗುಡಿ ಮಾತ್ರವಲ್ಲದೆ, ಸಂಪೂರ್ಣವಾಗಿ ಶಿಥಿಲಗೊಂಡಿರುವ ಪಾಶ್ರ್ವಗೋಡೆಗಳು ಬಿರುಕು ಬಿಟ್ಟಿದ್ದು, ಮಳೆ ನೀರು ಒಳಗೆ ಸಂಗ್ರಹಗೊಳ್ಳುತ್ತಿದೆ. ದೇವಾಲಯದ ಪೌಳಿ, ಪ್ರಾಗಂಗಣದ ಸುತ್ತಲೂ ಇರುವ 36 ಶಿವಲಿಂಗ ಹಾಗೂ ಬಸವಲಿಂಗಗಳ ಗುಡಿಗಳು, ಶ್ರೀಚಕ್ರದ ಸ್ಥಳ, ಇಂದ್ರಾಕ್ಷಿ, ವಿಶಾಲಾಕ್ಷಮ್ಮ ಗುಡಿಗಳು ಸಹ ಜಲಮಯವಾಗಿವೆ. ದೇವಸ್ಥಾನದೊಳಗೆ ತೆರಳುವ ಭಕ್ತರ ಮನ ಕಲಕುತ್ತಿದೆ.

ಶ್ರೀರಾಮೇಶ್ವರಸ್ವಾಮಿ ದೇವಾಲಯದ ಗರ್ಭಗುಡಿ ಮಾತ್ರವಲ್ಲದೆ, ಸಂಪೂರ್ಣವಾಗಿ ಶಿಥಿಲಗೊಂಡಿರುವ ಪಾಶ್ರ್ವಗೋಡೆ ಗಳು ಹಾಗೂ ದೇವಸ್ಥಾನದ ಪ್ರಾಂಗಣದ ಮೇಲೆ ನೀರು ಸೇರದಂತೆ ತಾತ್ಕಾಲಿಕವಾಗಿ ಪ್ಲಾಸ್ಟಿಕ್ ಹೊದಿಕೆ ಹಾಕಲಾಗಿದೆ. ಅದರೆ ಮಳೆ ಹೊಡೆತಕ್ಕೆ ಹೊದಿಕೆ ರಕ್ಷಣೆ ಅಸಾಧ್ಯ ಎನಿಸಿದೆ. ಇಂತಹ ಧಾರ್ಮಿಕ ಸ್ಮಾರಕ ವನ್ನು ರಕ್ಷಿಸದೆ ನಿರ್ಲಕ್ಷಿಸಿರುವುದರಿಂದ ಭಕ್ತರಲ್ಲಿ ಅಸಮಾಧಾನ ಮೂಡಿದೆ.

ಕೆಲ ದಿನಗಳಿಂದ ಮಳೆ ಸುರಿಯುತ್ತಿರುವು ದರಿಂದ ವಿದ್ಯುತ್ ವ್ಯವಸ್ಥೆ ಸ್ಥಗಿತಗೊಳಿ ಸಲಾಗಿದೆ. ಕತ್ತಲೆಯಿಂದ ಭಕ್ತರಿಗೆ ದೇವರ ದರ್ಶನ ಇಲ್ಲವಾಗಿದೆ. ಅಲ್ಲದೆ ಗರ್ಭಗುಡಿ ಯಲ್ಲಿ ನೀರು ಸಂಗ್ರಹವಾಗುತ್ತಿದ್ದು, ಅರ್ಚಕರು ನೀರು ತೆಗೆದರೂ ಮತ್ತೆ-ಮತ್ತೆ ನೀರು ದೇವರ ವಿಗ್ರಹದ ಸುತ್ತಮುತ್ತ ಸೋರಿ ಪೂಜಾ ವಿಧಿ ವಿಧಾನಗಳಿಗೆ ತಡೆಯಾಗುತ್ತಿದೆ.

ಚತುರ್ಯುಗ ಮೂರ್ತಿ ಶ್ರೀರಾಮೇಶ್ವರ ಸ್ವಾಮಿ ಕ್ಷೇತ್ರದ ಅಧಿಪತಿಯಾಗಿರುವು ದರಿಂದ ಈ ಗ್ರಾಮಕ್ಕೆ ರಾಮನಾಥಪುರ ಎಂಬ ಹೆಸರು ಬಂದಿದ್ದು, ಈ ಕ್ಷೇತ್ರಕ್ಕೆ ಬರುವ ಯಾತ್ರಾರ್ಥಿಗಳಿಗೆ ಇಲ್ಲಿನ ವಿಶೇಷ ಧಾರ್ಮಿಕ ಉತ್ಸವಗಳು, ಪೂಜಾ ವಿಧಾನಗಳು ಧನ್ಯತಾಭಾವ, ನೆಮ್ಮದಿ ತರುವುದಲ್ಲದೆ, ಮಂತ್ರ ಮುಗ್ಧರನ್ನಾಗಿಸುತ್ತದೆ. ಇಂತಹ ಅತ್ಯಾಕರ್ಷಕ ಪುರಾತನ ದೇವಸ್ಥಾನ ಅವಸಾನದತ್ತ ಸಾಗಿದ್ದು, ದೇಗುಲದ ಬಹು ಭಾಗದ ಗೋಡೆ ಕುಸಿಯುವ ಹಂತ ತಲುಪಿದೆ. ಶೀಘ್ರವೇ ಎಚ್ಚೆತ್ತು ದುರಸ್ತಿಪಡಿಸದೆ ಇದ್ದಲ್ಲಿ ದೇವಾಲಯದ ನೂರಾರು ಶಿವ ಲಿಂಗಗಳು, ಶಿಲಾ ಶಾಸನಗಳು ನಶಿಸುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.

ಸಾಕಷ್ಟು ದೇಗುಲಗಳನ್ನು ತನ್ನೊಡಲಿಟ್ಟು ಕೊಂಡಿರುವ ರಾಮನಾಥಪುರ ಒಂದು ಪ್ರವಾಸಿ ಕ್ಷೇತ್ರವಾಗಿ ರೂಪುಗೊಳಿಸುವಲ್ಲಿ ಸರ್ಕಾರ, ಜಿಲ್ಲಾ, ತಾಲೂಕು ಆಡಳಿತ ಹಾಗೂ ಮುಜರಾಯಿ ಇಲಾಖೆ ಜವಾ ಬ್ದಾರಿಯಿಂದ ಕಾರ್ಯ ನಿರ್ವಹಿಸಬೇಕಿದ್ದು, ಕ್ಷೇತ್ರದ ಪ್ರಮುಖ ದೇಗುಲವಾದ ಶ್ರೀರಾಮೇಶ್ವರ ದೇವಸ್ಥಾನವನ್ನು ಸಂರಕ್ಷಿಸಬೇಕಾಗಿದ್ದು, ಶೀಘ್ರವೇ ಜೀರ್ಣೋದ್ಧಾರ ಮಾಡುವಂತೆ ಭಕ್ತರು ಹಾಗೂ ಗ್ರಾಮಸ್ಥರು ನಾನಾ ಸಂಘ ಸಂಸ್ಥೆಗಳು ಆಗ್ರಹಿಸಿವೆ.

Translate »