ಬಿ.ವೈ.ವಿಜಯೇಂದ್ರ-ಜಗನ್ ಮೋಹನ್ ರೆಡ್ಡಿ ಭೇಟಿ
ಮೈಸೂರು

ಬಿ.ವೈ.ವಿಜಯೇಂದ್ರ-ಜಗನ್ ಮೋಹನ್ ರೆಡ್ಡಿ ಭೇಟಿ

December 6, 2019

ಅನಂತಪುರ, ಡಿ.5- ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ಬಿ.ವೈ. ವಿಜಯೇಂದ್ರ ಅವರು ಗುರುವಾರ ಆಂಧ್ರ ಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರೊಂದಿಗೆ ಮಹತ್ವದ ಚರ್ಚೆ ನಡೆಸಿದ್ದು, ಇದು ರಾಜಕೀಯ ವಲಯ ದಲ್ಲಿ ಭಾರೀ ಸಂಚಲನಕ್ಕೆ ಕಾರಣವಾಗಿದೆ. ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯುತ್ತಿರುವ ಸಂದರ್ಭದಲ್ಲೇ ಈ ಭೇಟಿಯಾಗಿರುವುದು ಕುತೂಹಲ ಮೂಡಿಸಿದೆ. ದಕ್ಷಿಣ ಕೋರಿಯಾದ ಮೋಟಾರು ವಾಹನ ಸಂಸ್ಥೆ ಕಿಯಾ ಮೋಟಾರ್ಸ್ ಘಟಕದ ಪೂರ್ಣ ಪ್ರಮಾಣದ ಕಾರ್ಯಾರಂಭ ಕಾರ್ಯಕ್ರಮಕ್ಕೆ ಆಗಮಿಸಿದ ವಿಜಯೇಂದ್ರ, ಜಗನ್ ಮೋಹನ್ ರೆಡ್ಡಿ ಇದ್ದ ವೇದಿಕೆಯಲ್ಲಿ ಆಸೀನರಾಗಿದ್ದರು. ಬಳಿಕ ಕಿಯಾ ಮೋಟಾರ್ಸ್ ಉತ್ಪಾದನಾ ಘಟಕದಲ್ಲಿ ಜಗನ್ ಮೋಹನ್ ರೆಡ್ಡಿ ಅವರೊಂದಿಗೆ ಸ್ವಲ್ಪ ಹೊತ್ತು ಗಹನವಾದ ಚರ್ಚೆ ನಡೆಸಿದರು ಎಂದು ಅವರ ಆಪ್ತ ಮೂಲಗಳು ತಿಳಿಸಿವೆ. ಉಪ ಚುನಾವಣೆಯಲ್ಲಿ ವ್ಯತಿರಿಕ್ತ ಫಲಿತಾಂಶ ಬಂದರೆ ಹೇಗೆಂಬ ರಾಜಕೀಯ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಈ ಭೇಟಿ ನಡೆದಿರುವುದು ಮಹತ್ವ ಪಡೆದುಕೊಂಡಿದೆ. ಜಗನ್ ಮೋಹನ್ ರೆಡ್ಡಿ ಎನ್.ಡಿ.ಎ. ಮೈತ್ರಿಕೂಟಕ್ಕೆ ಬೆಂಬಲ ಸೂಚಿಸಿದ್ದು, ಈ ಹಿನ್ನೆಲೆಯಲ್ಲಿ ವಿಜಯೇಂದ್ರ ಭೇಟಿ ಮಾಡಿರಬಹುದು ಎನ್ನಲಾಗಿದೆ.

Translate »