ಮೈಸೂರು: ಚಂಡಮಾರುತದಿಂದ ಸಂಕಷ್ಟದಲ್ಲಿರುವ ಒಡಿಶಾ, ಆಂಧ್ರಪ್ರದೇಶ ಮತ್ತು ಪಶ್ಚಿಮ ಬಂಗಾಳದ ಸಂತ್ರಸ್ತರಿಗೆ ಆಹಾರ ಪೂರೈಸಲು ಮೈಸೂರಿನ ಪ್ರಮುಖ ಆಹಾರ ಸಂಶೋಧನಾ ಸಂಸ್ಥೆಗಳಾದ ಸಿಎಫ್ಟಿಆರ್ಐ ಮತ್ತು ಡಿಎಫ್ಆರ್ಎಲ್ ಮುಂದಾಗಿವೆ.
ಸಿಎಫ್ಟಿಆರ್ಐ ನಿರ್ದೇಶಕ ಡಾ. ಕೆಎಸ್ಎಂಎಸ್. ರಾಘವರಾವ್ ಅವರು ಅಧಿಕಾರಿಗಳು ಹಾಗೂ ಸಿಬ್ಬಂದಿಗಳೊಂದಿಗೆ ಸೇರಿ 1 ಲಕ್ಷ ಆಹಾರ ಪೊಟ್ಟಣವನ್ನು ಚಂಡಮಾರುತ ಸಂತ್ರಸ್ತರಿಗೆ ರವಾನಿಸಲು ಸಿದ್ಧಪಡಿಸುತ್ತಿದ್ದಾರೆ. ಅದೇ ರೀತಿ ಮೂರೂ ರಾಜ್ಯಗಳ ಸಂತ್ರಸ್ತರ ಸ್ಥಳಗಳಿಗೆ ಸುಮಾರು ಎರಡು ಟನ್ ಆಹಾರ ಕಳುಹಿಸಲು ಡಿಎಫ್ಆರ್ಎಲ್ ಸಂಸ್ಥೆಯು ತಯಾರಿ ನಡೆಸುತ್ತಿದೆ. ಈ ಕುರಿತು ‘ಮೈಸೂರು ಮಿತ್ರ’ನೊಂದಿಗೆ ಮಾತನಾಡಿದ ಡಿಎಫ್ಆರ್ಎಲ್ ಡಾ. ಎ.ಡಿ. ಸೆಮ್ವಾಲ್ ಅವರು, ಸದಾ ಸಿದ್ಧವಿರುವ 2 ಟನ್ ಆಹಾರ ಈಗಾಗಲೇ ದಾಸ್ತಾನಿದೆ. ಉಪ್ಮಾ, ಚಪಾತಿ, ಪೊಟಾಟೋ ಪಲಾವ್, ಚಾಕೋಲೆಟ್ ಬಾರ್, ಜ್ಯೂಸ್ ಪ್ಯಾಕೆಟ್ಸ್, ಬಿಸ್ಕತ್ಗಳನ್ನು ಚಂಡಮಾರುತ ಪ್ರದೇಶಗಳಿಗೆ ಕಳುಹಿಸಲಾಗುವುದು ಎಂದು ತಿಳಿಸಿದರು.
ದೆಹಲಿಯ ಡಿಆರ್ಡಿಓ ಕೇಂದ್ರ ಸ್ಥಾನದಿಂದ ಸೂಚನೆ ಬರುತ್ತಿದ್ದಂತೆಯೇ ಆರ್ಮಿ ಹೆಲಿಕಾಪ್ಟರ್ ಅಥವಾ ವಿಮಾನದ ಮೂಲಕ ಬೆಂಗಳೂರಿನಿಂದ ಆಹಾರ ಪದಾರ್ಥಗಳನ್ನು ನಾವು ಕಳುಹಿಸುತ್ತೇವೆ ಎಂದ ಅವರು, ನಮ್ಮಲ್ಲಿ ನಾನಾ ಆಹಾರ ಪದಾರ್ಥ ಸಾಕಷ್ಟು ದಾಸ್ತಾನಿದೆ ಎಂದರು.