ಹಾಡಹಗಲೇ ವೃದ್ಧೆಯ ಮಾಂಗಲ್ಯ ಸರ ಅಪಹರಣ
ಮೈಸೂರು

ಹಾಡಹಗಲೇ ವೃದ್ಧೆಯ ಮಾಂಗಲ್ಯ ಸರ ಅಪಹರಣ

April 8, 2019

ಮೈಸೂರು: ಮೊಮ್ಮಕ್ಕಳೊಂದಿಗೆ ನಡೆದುಕೊಂಡು ಹೋಗುತ್ತಿದ್ದ ವೃದ್ಧೆಯ ಮಾಂಗಲ್ಯ ಸರ ಎಗರಿಸಿ ಅಪರಿಚಿತ ಬೈಕ್ ಸವಾರನೋರ್ವ ಪರಾರಿ ಯಾಗಿರುವ ಘಟನೆ ಮೈಸೂರಿನ ಹೆಬ್ಬಾಳು ಬಡಾವಣೆಯ ಸೂರ್ಯಬೇಕರಿ ಬಳಿ ಇಂದು ಮಧ್ಯಾಹ್ನ ಸಂಭವಿಸಿದೆ.

ಮೈಸೂರಿನ ಸೂರ್ಯಬೇಕರಿ ಸಮೀಪ ಸುಭಾಷನಗರದ ಚಾಮುಂಡೇಶ್ವರಿ ದೇವಸ್ಥಾನ ರಸ್ತೆ, 3ನೇ ಕ್ರಾಸ್ ನಿವಾಸಿ ಆರ್.ನಾಗರಾಜು ಅವರ ಪತ್ನಿ ಶ್ರೀಮತಿ ಶಶಿಕಲಾ(52) ಚಿನ್ನದ ಮಾಂಗಲ್ಯ ಸರ ಕಳೆದುಕೊಂಡವರು.

ಅದೇ ಬಡಾವಣೆಯ ಮತ್ತೊಂದು ರಸ್ತೆಯಲ್ಲಿ ಬಾಡಿಗೆ ಮನೆ ಮಾಡಿದ್ಧ ಅವರು ಸಾಮಗ್ರಿಗಳನ್ನು ಸಾಗಿಸಿದ ನಂತರ ಮೊಮ್ಮಕ್ಕಳಿಬ್ಬರೊಂದಿಗೆ ನಡೆದುಕೊಂಡು ಹೋಗುತ್ತಿದ್ದಾಗ ಹಿಂದಿನಿಂದ ಹೆಲ್ಮೆಟ್ ಧರಿಸಿ ಬೈಕ್‍ನಲ್ಲಿ ಬಂದ ಅಪರಿಚಿತ ಯುವಕನೋರ್ವ ಮಧ್ಯಾಹ್ನ 1 ಗಂಟೆ ವೇಳೆ ಚಾಮುಂಡೇಶ್ವರಿ ದೇವಸ್ಥಾನ ಸಮೀಪ ಜನಸಂದಣಿ ನಡುವೆಯೇ ಶಶಿಕಲಾ ಅವರ ಕೊರಳಿನಲ್ಲಿದ್ದ 37 ಗ್ರಾಂ ತೂಗುವ ಮಾಂಗಲ್ಯ ಸರ ಕಿತ್ತು ಪರಾರಿಯಾಗಿದ್ದಾನೆ.

ಬಿಸಿಲಿನಲ್ಲಿ ನಡೆದುಕೊಂಡು ಹೋಗುತ್ತಿದ್ದ ಶಶಿಕಲಾ ಅವರಿಗೆ ತತ್‍ಕ್ಷಣದಲ್ಲಿ ಏನಾಯಿತೆಂಬುದೇ ತಿಳಿಯದೆ ಸಾವರಿಸಿಕೊಂಡು ನೋಡಿದಾಗ ಕೊರಳಿನಲ್ಲಿ ಚಿನ್ನದ ಸರ ಇಲ್ಲದಿರುವುದು ಮನವರಿಕೆಯಾಯಿತು.

ತಕ್ಷಣ ಜೋರಾಗಿ ಕಿರುಚಿಕೊಂಡರಾದರೂ ಅಷ್ಟರಲ್ಲಿ ಯುವಕ ನಾಪತ್ತೆಯಾಗಿದ್ದ, ವಿಷಯ ತಿಳಿಯುತ್ತಿದ್ದಂತೆಯೇ ಸುತ್ತುವರೆದ ಸಾರ್ವಜನಿಕರು ಶಶಿಕಲಾರನ್ನು ಸಮಾಧಾನ ಪಡಿಸಿದರು. ಮಾಹಿತಿ ತಿಳಿದ ಮೇಟಗಳ್ಳಿ ಠಾಣೆ ಗರುಡ ಪೊಲೀಸರು ಘಟನಾ ಸ್ಥಳಕ್ಕೆ ಧಾವಿಸಿ ಮಹಜರು ನಡೆಸಿದರು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು. ಸರಗಳ್ಳನಿಗಾಗಿ ಶೋಧ ನಡೆಸುತ್ತಿದ್ದಾರೆ. ಸರ ಅಪಹರಣವಾದ ಹಿನ್ನೆಲೆಯಲ್ಲಿ ಮೈಸೂರು ನಗರದಾದ್ಯಂತ ಸರ್ಕಲ್‍ಗಳು, ಜಂಕ್ಷನ್‍ಗಳಲ್ಲಿ ನಾಕಾಬಂದಿ ಮಾಡಿ ಬೈಕ್ ಸವಾರರನ್ನು ಪೊಲೀಸರು ತಪಾಸಣೆ ನಡೆಸಿದರು.

Translate »