ವಿರಾಜಪೇಟೆ: ಹಣಕಾಸು ಸಂಸ್ಥೆಗೆ ಚೆಕ್ ನೀಡಿ ಚೆಕ್ಬೌನ್ಸ್ ಮಾಡಿದ ಆರೋಪದ ಮೇರೆಗೆ ಇಲ್ಲಿನ ಬಿಎಸ್ಎನ್ಎಲ್ ಉದ್ಯೋಗಿ ಕೆ.ಆರ್.ಬೇಬಿ ಎಂಬಾಕೆಗೆ ಇಲ್ಲಿನ ಪ್ರಿನ್ಸಿಫಲ್ ಮುನ್ಸಿಫ್ ನ್ಯಾಯಾಲಯದ ನ್ಯಾಯಾಧೀಶ ಶಿವಾನಂದಲಕ್ಷ್ಮಣ ಅಂಚಿ ಅವರು ಆರು ತಿಂಗಳು ಸಜೆ, ಚೆಕ್ ಬೌನ್ಸ್ನ ಹಣ ರೂ. 3 ಲಕ್ಷ ಜೊತೆಗೆ ಅದರ ವೆಚ್ಚ ಸೇರಿಸಿ ಪಾವತಿಸುವಂತೆ ತೀರ್ಪು ನೀಡಿದ್ದಾರೆ.
ಕೆ.ಆರ್.ಬೇಬಿ ಎಂಬುವರು ತಾ:1-4-2010 ರಂದು ವಿರಾಜಪೇಟೆಯ ಮೂಕಾಂಬಿಕ ಹಣಕಾಸು ಸಂಸ್ಥೆಯಿಂದ ರೂ. 3 ಲಕ್ಷ ಸಾಲ ಪಡೆದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವಿರಾಜಪೇಟೆ ಶಾಖೆಯ ಚೆಕ್ ನೀಡಿದ್ದರು. ನಿಗದಿತ ದಿನಾಂಕ ದಲ್ಲಿ ಚೆಕ್ನ್ನು ಹಾಜರು ಪಡಿಸಿದಾಗ ಖಾತೆಯಲ್ಲಿ ಹಣವಿಲ್ಲ ಎಂದು ಚೆಕ್ನ್ನು ಹಿಂದಿರುಗಿಸಿದಾಗ ಹಣಕಾಸು ಸಂಸ್ಥೆಯ ಪಾಲುದಾರರಾದ ಪಿ.ಮೋಹನ್ ಉತ್ತಯ್ಯ ನ್ಯಾಯಾಲಯದಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರು ಆರೋಪ ಸಾಬೀತಾದ ಹಿನ್ನಲೆಯಲ್ಲಿ ಶಿಕ್ಷೆ ಹಾಗೂ ದಂಡವನ್ನು ವಿಧಿಸಿದ್ದಾರೆ. ಹಣಕಾಸು ಸಂಸ್ಥೆಯ ಪರವಾಗಿ ವಕೀಲ ಡಿ.ಸಿ.ಧ್ರುವಕುಮಾರ್ ವಾದಿಸಿದ್ದರು.