ಬೆಂಗಳೂರಲ್ಲಿ ಹತ್ಯೆಯಾದ ಓಲಾ ಕ್ಯಾಬ್ ಚಾಲಕನಿಗೆ ಮೈಸೂರಲ್ಲಿ ಶ್ರದ್ಧಾಂಜಲಿ
ಮೈಸೂರು

ಬೆಂಗಳೂರಲ್ಲಿ ಹತ್ಯೆಯಾದ ಓಲಾ ಕ್ಯಾಬ್ ಚಾಲಕನಿಗೆ ಮೈಸೂರಲ್ಲಿ ಶ್ರದ್ಧಾಂಜಲಿ

December 6, 2018

ಮೈಸೂರು: ಬೆಂಗಳೂರಿನ ಬೈಯ್ಯಪ್ಪನಹಳ್ಳಿ ಬಳಿ ದುಷ್ಕರ್ಮಿ ಗಳಿಂದ ಹತ್ಯೆಯಾದ ಮೋಹನ್ ಎಂಬ ಓಲಾ ಕ್ಯಾಬ್ ಚಾಲಕನಿಗೆ ಮೈಸೂರಿನ ಓಲಾ ಮತ್ತು ಊಬರ್ ಕ್ಯಾಬ್ ಚಾಲಕರು ಬುಧವಾರ ಮೈಸೂರಿನ ನ್ಯಾಯಾಲಯದ ಎದುರಿನ ಗಾಂಧಿ ಪುತ್ಥಳಿ ಬಳಿ ಶ್ರದ್ಧಾಂಜಲಿ ಅರ್ಪಿಸಿದರು.

ಮೈಸೂರು ಅರಮನೆ ನಗರಿ ಸಾರಥಿ ಸೇನೆ ಕಾರ್ಮಿಕರ ಸಂಘದ ಆಶ್ರಯದಲ್ಲಿ ಗಾಂಧಿ ಪುತ್ಥಳಿ ಬಳಿ ಜಮಾಯಿಸಿದ ಚಾಲಕರು, ಮೃತ ಮೋಹನ್ ಭಾವಚಿತ್ರದ ಎದುರು ಮೇಣದ ಬತ್ತಿಗಳನ್ನು ಹಚ್ಚಿ, ಮೌನ ಆಚರಿಸಿ ಶ್ರದ್ಧಾಂಜಲಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ರೋಹಿತ್ ರಾಜ್, ಮೃತ ಮೋಹನ್ ಹಾಸನ ಮೂಲದ ಚಾಲಕ. ಜೀವನ ನಿರ್ವಹಣೆಗೆಂದು ಬೆಂಗಳೂರಿನಲ್ಲಿ ಓಲಾ ಕ್ಯಾಬ್‍ನಲ್ಲಿ ಚಾಲಕನಾಗಿದ್ದ. ಡಿ.3ರ ರಾತ್ರಿ ಕರ್ತವ್ಯದಲ್ಲಿದ್ದ ವೇಳೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಆತನ ಮೇಲೆ ಹಲ್ಲೆ ನಡೆಸಿ, ನಗದು, ವಾಚ್ ಇನ್ನಿತರ ವಸ್ತು ಗಳನ್ನು ದೋಚಿದ್ದರು. ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಆತ ಮೃತಪಟ್ಟ. ರಾತ್ರಿ ಪಾಳಿ ಯಲ್ಲಿ ಕೆಲಸ ಮಾಡುವ ಓಲಾ ಮತ್ತು ಊಬರ್ ಕ್ಯಾಬ್ ಚಾಲಕರು ಧೈರ್ಯವಾಗಿ ಕರ್ತವ್ಯ ನಿರ್ವಹಿಸದ ಸ್ಥಿತಿ ಉಂಟಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಸಂಘದ ಗೌರವಾಧ್ಯಕ್ಷ ನಿಂಗರಾಜು, ಕಾರ್ಯದರ್ಶಿ ಸಿದ್ದರಾಜು, ಎಸ್.ಕೆ.ಪ್ರಕಾಶ್, ಮಹೇಶ್, ಎಂ.ರವಿಕುಮಾರ್ ಇನ್ನಿತರರು ಭಾಗವಹಿಸಿದ್ದರು.

Translate »