200 ಕಿ.ಮೀ. ವೇಗದಲ್ಲಿ ಒಡಿಶಾ ತೀರಕ್ಕೆ ಅಪ್ಪಳಿಸಿದ ‘ಫೊನಿ’ ಚಂಡಮಾರುತ
ಮೈಸೂರು

200 ಕಿ.ಮೀ. ವೇಗದಲ್ಲಿ ಒಡಿಶಾ ತೀರಕ್ಕೆ ಅಪ್ಪಳಿಸಿದ ‘ಫೊನಿ’ ಚಂಡಮಾರುತ

May 4, 2019

ಭುವನೇಶ್ವರ: ನಿರೀಕ್ಷೆ ಯಂತೆಯೇ ಫೊನಿ ಚಂಡಮಾರುತ ಒಡಿಶಾ ಕರಾವಳಿ ತೀರಕ್ಕೆ ಅಪ್ಪಳಿಸಿದ್ದು, ಚಂಡಮಾರುತದ ವೇಗಕ್ಕೆ ಪುರಿ ಕಡಲ ತೀರದಲ್ಲಿನ ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿ, ವಿದ್ಯುತ್ ಸೇವೆ ಸ್ಥಗಿತವಾಗಿದೆ.

ಬರೋಬ್ಬರಿ ಪ್ರತೀ ಗಂಟೆಗೆ 200 ಕಿ.ಮೀ ವೇಗದಲ್ಲಿ ಫೊನಿ ಚಂಡಮಾರುತ ಪುರಿ ಕಡಲ ತೀರಕ್ಕೆ ಅಪ್ಪಳಿಸಿದ್ದು, ಅಲ್ಲಲ್ಲಿ ಭೂ ಕುಸಿತವಾದ ವರದಿಯಾಗಿದೆ. ಚಂಡ ಮಾರುತದಿಂದಾಗಿ ಒಡಿಶಾ, ಆಂಧ್ರ ಪ್ರದೇಶ, ತೆಲಂಗಾಣ, ತಮಿಳು ನಾಡು ಮತ್ತು ಕೇರಳದಲ್ಲಿ ಮುಂಜಾನೆ ಯಿಂದಲೇ ಭಾರಿ ಪ್ರಮಾಣದ ಬಿರು ಗಾಳಿ ಸಹಿತ ಮಳೆ ಸುರಿಯುತ್ತಿದೆ. ಆಂಧ್ರದ ಕರಾವಳಿಯಲ್ಲೂ ಭಾರೀ ಮಳೆ ಸುರಿಯುತ್ತಿದ್ದು, ಪಶ್ಚಿಮ ಬಂಗಾಳ ಮತ್ತು ಈಶಾನ್ಯ ರಾಜ್ಯಗಳಲ್ಲಿಯೂ ಭಾರೀ ಮಳೆ ಬೀಳುವ ಎಚ್ಚರಿಕೆಯನ್ನು ಹವಾ ಮಾನ ಇಲಾಖೆ ನೀಡಿದೆ. ಇನ್ನು ನಾಳೆ (ಶನಿವಾರ) ಮಧ್ಯಾಹ್ನದ ಹೊತ್ತಿಗೆ ಫೊನಿ ಚಂಡಮಾರುತ ಒಡಿಶಾ ಕರಾವಳಿಯ ಗೋಪಾಲಪುರ ಮತ್ತು ಚಾಂದಬಾಲಿ ನಡುವೆ ಅಪ್ಪಳಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜ್ಯದ 14 ಜಿಲ್ಲೆಗಳು ಹಾನಿ ಎದುರಿಸಲಿದ್ದು, ಅಪಾಯದ ಪ್ರದೇಶದ ನಿವಾಸಿಗಳ ತೆರವು ಕಾರ್ಯಾಚರಣೆ ಸಮರೋಪಾದಿಯಲ್ಲಿ ನಡೆಯುತ್ತಿದೆ. ಒಡಿಶಾದಲ್ಲಿ ಶನಿವಾರದವರೆಗೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದ್ದು, ಕೆಲ ಖಾಸಗಿ ಕಂಪನಿಗಳೂ ಕೂಡ ರಜೆ ಘೋಷಣೆ ಮಾಡಿವೆ. ಇನ್ನು ಫೊನಿ ಪ್ರಭಾವ ಆಂಧ್ರಪ್ರದೇಶ, ಪಶ್ಚಿಮ ಬಂಗಾಳದಲ್ಲೂ ಇರಲಿದೆ. ಆದರೆ ಕರ್ನಾಟಕದಲ್ಲಿ ಇದರ ಪರಿಣಾಮ ಇರುವುದಿಲ್ಲ.

6 ಬಲಿ: ಒಡಿಶಾ ಕಡಲ ತೀರಕ್ಕೆ ಗುರುವಾರ ಬೆಳಗ್ಗೆ ಅಪ್ಪಳಿಸಿದ ಫೊನಿ ಚಂಡಮಾರುತ ಭಾರಿ ಅವಾಂತರ ಸೃಷ್ಟಿ ಮಾಡಿದ್ದು, ಚಂಡ ಮಾರುತದಿಂದಾಗಿ ಸೃಷ್ಟಿಯಾದ ವಿವಿಧ ಅವಘಡಗಳಲ್ಲಿ ಆರು ಮಂದಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಚಂಡಮಾರುತ ಪೀಡಿತ ರಾಜ್ಯಗಳಿಗೆ ತುರ್ತು ಪರಿಹಾರಕ್ಕಾಗಿ 1,000 ಕೋಟಿ ರೂಪಾಯಿ ಬಿಡುಗಡೆ ಮಾಡಿರುವುದಾಗಿ ಹೇಳಿದ್ದಾರೆ. ಇಂದು ರಾಜಸ್ಥಾನದಲ್ಲಿ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಫೊನಿ ಚಂಡಮಾರುತಕ್ಕೆ ಸಂಬಧಿಸಿದಂತೆ ನಾನು ಕ್ಷಣ ಕ್ಷಣದ ಮಾಹಿತಿಯನ್ನು ಪಡೆಯುತ್ತಿದ್ದೇನೆ. ಕೇಂದ್ರ ಸರ್ಕಾರ ಎಲ್ಲಾ ರೀತಿಯ ನೆರವು ನೀಡಲಿದೆ ಎಂದು ತಿಳಿಸಿದ್ದಾರೆ. ಪ್ರಸ್ತುತ ಫೊನಿ ಚಂಡಮಾರುತ ಉತ್ತರ ಮತ್ತು ಈಶಾನ್ಯ ಭಾರತದತ್ತ ಧಾವಿಸುತ್ತಿದ್ದು, ಕಟಕ್ ನಿಂದ ಸುಮಾರು 30 ಕಿ.ಮೀ ದೂರದಲ್ಲಿದೆ.

Translate »