ಬೋಗಸ್ ಬಂದೂಕು ಪರವಾನಗಿ ವಿತರಣೆ ಆರೋಪ ಡಿಸಿ ಕಚೇರಿ ಸಿಬ್ಬಂದಿ ಅಮಾನತು
ಕೊಡಗು

ಬೋಗಸ್ ಬಂದೂಕು ಪರವಾನಗಿ ವಿತರಣೆ ಆರೋಪ ಡಿಸಿ ಕಚೇರಿ ಸಿಬ್ಬಂದಿ ಅಮಾನತು

March 6, 2019

ಮಡಿಕೇರಿ: ಕೊಡಗು ಜಿಲ್ಲಾಧಿಕಾರಿ ಕಚೇರಿಯಲ್ಲಿ ದ್ವಿತೀಯ ದರ್ಜೆ ಸಹಾಯಕ ಸಿಬ್ಬಂದಿಯೋರ್ವ ವ್ಯಕ್ತಿಯೊಬ್ಬರಿಗೆ ಬೋಗಸ್ ಬಂದೂಕಿನ ಪರವಾನಗಿ ವಿತರಿಸಿದ ಆರೋಪದಲ್ಲಿ ಅಮಾನತ್ತುಗೊಂಡಿದ್ದು, ಹೆಚ್ಚುವರಿ ಜಿಲ್ಲಾಧಿಕಾರಿಗಳು ಈತನ ವಿರುದ್ದ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯ ಸಿಬ್ಬಂದಿ ಶ್ರೀನಿಧಿ ಎಂಬಾತನೇ ಕರ್ತವ್ಯದಿಂದ ಅಮಾನತು ಗೊಂಡಿದ್ದು, ಪೊಲೀಸ್ ಮೊಕದ್ದಮೆ ದಾಖಲಾಗಿರುವ ಹಿನ್ನಲೆಯಲ್ಲಿ ತಲೆಮರೆಸಿ ಕೊಂಡಿರುವುದಾಗಿ ತಿಳಿದು ಬಂದಿದೆ. ಈತನ ವಿರುದ್ಧ ಮೊಕದ್ದಮೆ ಸಂಖ್ಯೆ 06/2019 ಪೊಲೀಸ್ ಕಾಯ್ದೆ 465, 466ರ ಅನ್ವಯ ಪ್ರಕರಣ ದಾಖಲಿಸಿಕೊಂಡಿರುವ ನಗರ ಠಾಣಾ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಸುಂಟಿಕೊಪ್ಪದ ನಿವಾಸಿ ಯೋರ್ವರು ತಮ್ಮ ತಂದೆಯ ಹೆಸರಲ್ಲಿದ್ದ ಕೋವಿಯನ್ನು ತಮ್ಮ ಹೆಸರಿಗೆ ಬದಲಾಯಿಸಿಕೊಳ್ಳಲು ಅರ್ಜಿ ಸಲ್ಲಿಸಿ ಬಳಿಕ ಜಿಲ್ಲಾಧಿಕಾರಿ ಕಚೇರಿಯಿಂದ ತನ್ನ ಹೆಸರಿಗೆ ವರ್ಗಾವಣೆ ಪತ್ರ ಹೊಂದಿಕೊಂಡಿದ್ದರು.

ತದನಂತರ ತನ್ನ ಕೋವಿ ಸಂಖ್ಯೆ 138376 ಎಂದಿದ್ದು, ಹೆಸರಿನ ವರ್ಗಾವಣೆ ಸಂದರ್ಭ 138676 ಎಂದು ತಪ್ಪಾಗಿ ನಮೂದಿಸಲ್ಪಟ್ಟಿರುವುದನ್ನು ಸರಿಪಡಿಸಬೇಕೆಂದು ಅಧಿಕಾರಿಗಳಿಗೆ ಲಿಖಿತ ಕೋರಿಕೆ ಸಲ್ಲಿಸಿದ್ದರು. ಈ ಕುರಿತು ಹೆಚ್ಚುವರಿ ಜಿಲ್ಲಾಧಿಕಾರಿಗಳು ಸಂಶಯಗೊಂಡು ಕಚೇರಿಯ ಕಡತ ಸಂಖ್ಯೆ ಎ.ಆರ್.ಎಂ. 832: 2016-17ರಲ್ಲಿ ಪರಿಶೀಲನೆ ನಡೆಸಿದ್ದಾರೆ. ಈ ಸಂದರ್ಭ 12.6.2017 ರಂದು ಅಂದಿನ ಜಿಲ್ಲಾಧಿಕಾರಿ ಷರಾ ಬರೆದು ಕಚೇರಿ ಟಿಪ್ಪಣಿಯಂತೆ ಸಂಬಂಧಿಸಿದ ವರ್ಗಾವಣೆ ಕೋರಿಕೆ ಅರ್ಜಿ ತಿರಸ್ಕøತಗೊಂಡಿರುವುದು ಬೆಳಕಿಗೆ ಬಂದಿದೆ. ಅಲ್ಲದೆ ಮೇಲಿನ ಪ್ರಕರಣ ತಡೆಹಿಡಿಯುವಂತೆ ಆದೇಶ ನೀಡಿರುವುದು ಕಂಡು ಬಂದಿದೆ.

ಅಲ್ಲದೆ ಅರ್ಜಿದಾರರು ಕೋವಿ ಸಂಖ್ಯೆ ಬದಲಾವಣೆಗೊಂಡಿದ್ದಾಗಿ ಉಲ್ಲೇಖಿಸಿರುವ ಪ್ರಕರಣ ಮತ್ತು ಕಡತದಲ್ಲಿ ತಿರಸ್ಕøತಗೊಂಡಿರುವ ಕಡತದ ಸಂಖ್ಯೆ ಎರಡು ಒಂದೇ ಆಗಿರು ವುದು ಕಂಡು ಬಂದಿದೆ. ಮಾತ್ರವಲ್ಲದೆ ಸಿಬ್ಬಂದಿ ಶ್ರೀನಿಧಿ ಆಮಿಷಕ್ಕೆ ಒಳಗಾಗಿ ಬೋಗಸ್ ಪರವಾನಗಿ ವಿತರಿಸಿರುವುದು ದೃಢಪಟ್ಟಿದೆ ಎನ್ನಲಾಗಿದೆ. ಇದರೊಂದಿಗೆ ಕಳೆದ ಸುಮಾರು 11 ತಿಂಗಳಿನಿಂದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶಸ್ತ್ರಾಸ್ತ್ರ ಹೊಂದಲು ಮತ್ತು ಕೋವಿಗಳ ಪರವಾನಗಿ ಸಂಬಂಧ ಸಾರ್ವಜನಿಕರಿಗೆ ಮೋಸಗೊಳಿಸಿರುವ ಸಂಶಯ ಮೂಡಿದೆ.

ಇಂತಹ ಗುರುತರ ಆರೋಪಗಳ ನಡುವೆ ಆತನನ್ನು ಜಿಲ್ಲಾಧಿಕಾರಿ ಕಚೇರಿಯಿಂದ ತಾಲೂಕು ತಹಶೀಲ್ದಾರ್ ಕಚೇರಿಗೆ ವರ್ಗಾವಣೆಗೊಳಿಸಿದ್ದು, ಅಲ್ಲಿ ತನ್ನ ತಪ್ಪನ್ನು ತಿದ್ದಿಕೊಳ್ಳುವ ಬದಲಿಗೆ ಕರ್ತವ್ಯಕ್ಕೂ ತೆರಳದಿರುವ ಬಗ್ಗೆ ಆರೋಪ ಕೇಳಿ ಬಂದಿದೆ. ಈ ಎಲ್ಲಾ ಬೆಳವಣಿಗೆಗಳನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾಧಿಕಾರಿಗಳು ಕರ್ತವ್ಯದಿಂದ ಅಮಾನತುಗೊಳಿಸಿದ್ದಾರೆ. ಮಾತ್ರವಲ್ಲದೇ, 1.1.2018 ರಿಂದ 30.11.2018ರ ಅವಧಿಯ ತನಕ ಸಮಗ್ರ ತನಿಖೆಯೊಂದಿಗೆ ಇಡೀ ಪ್ರಕರಣವನ್ನು ಬಯಲಿಗೆಳೆಯುವಂತೆ ನಿರ್ದೇಶಿಸಿದ್ದಾರೆ.

Translate »