ಇಂಜಿನಿಯರಿಂಗ್ ಕಾಲೇಜು ಸಹ ಪ್ರಾಧ್ಯಾಪಕ ಸಾವು
ಮೈಸೂರು

ಇಂಜಿನಿಯರಿಂಗ್ ಕಾಲೇಜು ಸಹ ಪ್ರಾಧ್ಯಾಪಕ ಸಾವು

December 21, 2018

ಮೈಸೂರು: ಮನೆಯಲ್ಲಿ ಕುಸಿದು ಬಿದ್ದು ಇಂಜಿನಿಯರಿಂಗ್ ಕಾಲೇಜು ಸಹ ಪ್ರಾಧ್ಯಾಪಕರೊಬ್ಬರು ಸಾವನ್ನಪ್ಪಿರುವ ಘಟನೆ ಮೈಸೂರಿನ ಬೋಗಾದಿಯಲ್ಲಿ ಬುಧವಾರ ರಾತ್ರಿ ಸಂಭವಿಸಿದೆ.

ಮೈಸೂರಿನ ಬೋಗಾದಿ 2ನೇ ಹಂತದ ನಿವಾಸಿ ಬಿ.ಗುರುನಾಥರಾವ್ ಅವರ ಮಗ ಬಿ.ವಿಜಯ ರಘು (45) ಸಾವನ್ನಪ್ಪಿದವರು. ನಗುವನಹಳ್ಳಿ ಬಳಿಯ ಮಹಾ ರಾಜ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(ಎಂಐಟಿ)ಯಲ್ಲಿ ಮೆಕ್ಯಾನಿಕಲ್ ವಿಭಾಗದ ಸಹ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದ ವಿಜಯ ರಘು ಅವರು, ಬುಧವಾರ ಸಂಜೆ ಕಾಲೇಜಿನಿಂದ ಬಂದು ಪತ್ನಿಯನ್ನು ಸಂಗೀತ ಕ್ಲಾಸ್‍ಗೆ ಡ್ರಾಪ್ ಮಾಡಿ ಬಂದಿದ್ದರು. ರಾತ್ರಿ ಸುಮಾರು 8.30 ಗಂಟೆ ವೇಳೆಗೆ ಮನೆಯಲ್ಲೇ ಕುಸಿದು ಬಿದ್ದಿದ್ದರು. ತಕ್ಷಣ ಅವರನ್ನು ವಿಜಯನಗರ 3ನೇ ಹಂತದ ಐಶ್ವರ್ಯ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತಾದ್ದರೂ, ಪರೀಕ್ಷಿಸಿದ ವೈದ್ಯರು, ವಿಜಯ ರಘು ಅವರು ಮೃತಪಟ್ಟಿರುವುದನ್ನು ದೃಢಪಡಿಸಿದ್ದರು.

ಅವರು ಪತ್ನಿ ಎಂಆರ್‍ಐಟಿ ಕಾಲೇಜು ಮೆಕ್ಯಾನಿಕಲ್ ವಿಭಾಗದ ಸಹ ಪ್ರಾಧ್ಯಾಪಕಿ ಶ್ರೀಮತಿ ಸ್ವಾತಿ ಹರೀಶ ಹಾಗೂ ಅಪಾರ ಬಂಧು-ಬಳಗ ಅಗಲಿದ್ದಾರೆ. ಪ್ರಕರಣ ದಾಖ ಲಿಸಿಕೊಂಡಿರುವ ಸರಸ್ವತಿಪುರಂ ಠಾಣೆ ಪೊಲೀಸರು, ಇಂದು ಬೆಳಿಗ್ಗೆ ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಮೃತದೇಹವನ್ನು ಸಂಬಂಧಿಕರಿಗೆ ಒಪ್ಪಿಸಿದರು. ಮರಣೋ ತ್ತರ ಪರೀಕ್ಷೆ ವೇಳೆ ಎಂಐಟಿ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಶವಾಗಾರದ ಬಳಿ ಭಾರೀ ಸಂಖ್ಯೆಯಲ್ಲಿ ನೆರೆದು ಮೃತದೇಹದ ಅಂತಿಮ ದರ್ಶನ ಪಡೆದರು.

Translate »