ಕೊಡಗು ಪುನರ್ ನಿರ್ಮಾಣಕ್ಕೆ 10 ಸಾವಿರ ಕೋಟಿ ವಿಶೇಷ ಪ್ಯಾಕೇಜ್‍ಗೆ ಆಗ್ರಹ
ಕೊಡಗು

ಕೊಡಗು ಪುನರ್ ನಿರ್ಮಾಣಕ್ಕೆ 10 ಸಾವಿರ ಕೋಟಿ ವಿಶೇಷ ಪ್ಯಾಕೇಜ್‍ಗೆ ಆಗ್ರಹ

October 10, 2018

ಮಡಿಕೇರಿ: ಹಿಂದೆಂದೂ ಕೇಳರಿಯದ ಪ್ರಕೃತಿ ವಿಕೋಪಕ್ಕೆ ಕೊಡಗು ಜಿಲ್ಲೆ ತುತ್ತಾಗಿದ್ದು, ಕೇಂದ್ರ ಸರಕಾರ ಜಿಲ್ಲೆಯ ಪುನರ್ ನಿರ್ಮಾಣಕ್ಕೆ 10 ಸಾವಿರ ಕೋಟಿ ರೂ. ವಿಶೇಷ ಪ್ಯಾಕೇಜ್ ನೀಡಬೇಕೆಂದು ಸಂಸದೀಯ ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ವೀರಪ್ಪ ಮೊಯ್ಲಿ ಆಗ್ರಹಿಸಿದ್ದಾರೆ.

ಕೊಡಗು ಜಿಲ್ಲೆಯಲ್ಲಿ ಸಂಭವಿಸಿದ ಪ್ರಕೃತಿ ವಿಕೋಪ ಮತ್ತು ಅದರಿಂದಾದ ನಷ್ಟಗಳ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳೊಂದಿಗೆ ಹಾರಂಗಿಯಲ್ಲಿ ಸಭೆ ನಡೆಸಿದ ವೀರಪ್ಪ ಮೊಯ್ಲಿ, ಸಮಗ್ರ ವರದಿ ಮತ್ತು ಈಗಾಗಲೇ ನಡೆಸಲಾದ ಪರಿಹಾರ ಕಾರ್ಯಗಳ ಕುರಿತು ಮಾಹಿತಿ ಪಡೆದುಕೊಂಡರು.

ಆ ಬಳಿಕ ಮಾದಾಪುರ, ಇಗ್ಗೋಡ್ಲು, ಹಟ್ಟಿಹೊಳೆ, ಮಕ್ಕಂದೂರು, ತಂತಿಪಾಲ ಮತ್ತಿತ್ತರ ಪ್ರದೇಶ ಗಳಿಗೆ ಭೇಟಿ ನೀಡಿ ಪ್ರಕೃತಿ ವಿಕೋಪದಿಂದಾದ ಹಾನಿಯ ಪರಿಶೀಲನೆ ನಡೆಸಿದರು. ನಗರದ ಸುದ ರ್ಶನ ಅತಿಥಿ ಗೃಹದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತ ನಾಡಿದ ಎಂ.ವೀರಪ್ಪ ಮೊಯ್ಲಿ, ಕೊಡಗು ಜಿಲ್ಲೆಯಲ್ಲಿ ಪ್ರಕೃತಿಯ ಮುನಿಸಿನಿಂದ ಸಂಕಷ್ಟ ಎದುರಾಗಿದೆ. ಆಸ್ತಿ-ಪಾಸ್ತಿಯೊಂದಿಗೆ ಪ್ರಾಣ ಹಾನಿಯೂ ಸಂಭವಿಸಿದ್ದು, ಇಂದಿಗೂ ಇಬ್ಬರು ವ್ಯಕ್ತಿಗಳ ಮೃತ ದೇಹಗಳು ಪತ್ತೆಯಾಗಿಲ್ಲ. ಪ್ರಕೃತಿ ವಿಕೋಪವನ್ನು ಅಧ್ಯಯನ ನಡೆಸಲು ಮತ್ತೊಮ್ಮೆ ಜಿಯೋಲಾಜಿಕಲ್ ಸರ್ವೆ ನಡೆಸಬೇಕಿದೆ ಎಂದು ವೀರಪ್ಪ ಮೊಯ್ಲಿ ಅಭಿಪ್ರಾಯಪಟ್ಟರು.

ಪ್ರಕೃತಿ ವಿಕೋಪದಿಂದ ರಾಷ್ಟ್ರೀಯ ಹೆದ್ದಾರಿಗೆ 500 ಕೋಟಿ ನಷ್ಟವಾಗಿದ್ದರೆ, ಲೋಕೋಪಯೋಗಿ ಇಲಾಖೆಗೆ 605 ಕೋಟಿ, ಸ್ಥಳೀಯ ಸಂಸ್ಥೆಗಳಿಗೆ 364 ಕೋಟಿ, ನೀರಾವರಿಗೆ 500ಕೋಟಿ, ಕುಡಿಯುವ ನೀರಿಗೆ 3 ಕೋಟಿ ರೂ. ನಷ್ಟವಾಗಿರುವ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 7804 ಹೆಕ್ಟೇರ್ ಬೆಳೆ ನಾಶವಾಗಿದ್ದರೆ, 11,838 ಹೆಕ್ಟೇರ್ ತೋಟಗಾರಿಕ ಬೆಳೆ ನಾಶವಾಗಿರುವ ಕುರಿತು ಅಧಿ ಕಾರಿಗಳು ರಾಜ್ಯ ಸರಕಾರಕ್ಕೆ ವರದಿ ನೀಡಿದ್ದಾರೆ. ಇಷ್ಟು ದೊಡ್ಡ ಮೊತ್ತದ ನಷ್ಟವನ್ನು ಕೇವಲ ರಾಜ್ಯ ಸರಕಾರಕ್ಕೆ ಭರಿಸಲು ಸಾಧ್ಯವಿಲ್ಲ. ಹೀಗಾಗಿ ಕೇಂದ್ರ ಸರಕಾರ ಕೂಡ ಜವಾಬ್ದಾರಿ ಹೊತ್ತುಕೊಂಡು ಪರಿ ಸ್ಥಿತಿಯನ್ನು ನಿಭಾಯಿಸಬೇಕಿದೆ. ಎನ್‍ಡಿಆರ್‍ಎಫ್ ಮಾನ ದಂಡದ ಮೂಲಕ ಪರಿಹಾರ ನೀಡುವ ಬದಲು ಜಿಲ್ಲೆಗೆ 10 ಸಾವಿರ ಕೋಟಿ ವಿಶೇಷ ಪ್ಯಾಕೇಜ್ ಘೋಷಿಸುವಂತೆ ಕೇಂದ್ರ ಸರಕಾರವನ್ನು ಆಗ್ರಹಿಸಿದರು.

ನವೆಂಬರ್ 2 ಮತ್ತು 3 ರಂದು ಕೇರಳ ರಾಜ್ಯಕ್ಕೂ ತೆರಳಿ ಪ್ರಕೃತಿ ವಿಕೋಪವನ್ನು ಅಧ್ಯಯನ ನಡೆಸು ವುದಾಗಿ ವೀರಪ್ಪ ಮೊಯ್ಲಿ ತಿಳಿಸಿದರು.

ಕೊಡಗು ಜಿಲ್ಲಾಡಳಿತ ಮನೆ ಕಳೆದುಕೊಂಡವರಿಗೆ ಮನೆ ನಿರ್ಮಿಸಿ ಕೊಡಲು 100 ಎಕರೆ ಸರಕಾರಿ ಜಾಗವನ್ನು ಗುರುತಿಸಿದೆ. ಮಾತ್ರವಲ್ಲದೆ, ಸುಮಾರು 743 ಕುಟುಂಬಗಳು ಅಪಾಯಕಾರಿ ಪ್ರದೇಶದಲ್ಲಿ ವಾಸಿ ಸುತ್ತಿದ್ದು, ಅವರನ್ನು ಕೂಡ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಿ ಪುನರ್ ವಸತಿ ಕಲ್ಪಿಸಬೇಕಿದೆ. ಈ ಹಿನ್ನೆಲೆಯಲ್ಲಿ ಕೊಡಗು ಜಿಲ್ಲಾಧಿಕಾರಿ, ಕರ್ನಾಟಕ ಮತ್ತು ಕೇರಳ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ಸೇರಿದಂತೆ ಸಂಸದೀಯ ಹಣಕಾಸು ಸ್ಥಾಯಿ ಸಮಿತಿ ಸದಸ್ಯರನ್ನು ಒಳಗೊಂಡು ವಿಶೇಷ ಸಭೆ ನಡೆಸಲಾಗುವುದು. ಆ ಸಭೆಯ ವರದಿಯನ್ನು ಕೇಂದ್ರ ಸರಕಾರ, ಗೃಹ ಸಚಿವರು ಹಾಗೂ ಹಣ ಕಾಸು ಸಚಿವರಿಗೂ ಸಲ್ಲಿಸಲಾಗುವುದು. ಮಾತ್ರ ವಲ್ಲದೆ, ನವೆಂಬರ್ ಕೊನೆಯ ವಾರದಲ್ಲಿ ನಡೆ ಯುವ ಸಂಸದೀಯ ಅಧಿವೇಶನದಲ್ಲೂ ಪ್ರಸ್ತಾಪಿಸಿ ಸೂಕ್ತ ಕ್ರಮಕ್ಕೆ ಒತ್ತಾಯಿಸುವುದಾಗಿ ವೀರಪ್ಪ ಮೊಯ್ಲಿ ಭರವಸೆ ನೀಡಿದರು. ಸಂಸದೀಯ ಹಣಕಾಸು ಸ್ಥಾಯಿ ಸಮಿತಿ ಸರ್ವ ಪಕ್ಷಗಳ ಸದಸ್ಯರನ್ನು ಒಳ ಗೊಂಡಿರುವ ಹಿನ್ನೆಲೆಯಲ್ಲಿ ಸಮಿತಿ ನೀಡುವ ವರದಿ ಅನುಷ್ಠಾನವಾಗುವ ಅಗತ್ಯವೂ ಇರುತ್ತದೆ ಎಂದು ವೀರಪ್ಪ ಮೊಯ್ಲಿ ಪತ್ರಕರ್ತರ ಪ್ರಶ್ನೆ ಯೊಂದಕ್ಕೆ ಉತ್ತರಿಸಿದರು.

ಪ್ರಕೃತಿ ವಿಕೋಪವನ್ನು ಕೊಡಗು ಜಿಲ್ಲಾಡಳಿತ ಮತ್ತು ಅಧಿಕಾರಿ ವರ್ಗ ಉತ್ತಮ ರೀತಿಯಲ್ಲಿ ನಿರ್ವ ಹಿಸಿದ್ದಾರೆ. ಧ್ವಂಸಗೊಂಡಿದ್ದ ರಸ್ತೆಗಳನ್ನು ತ್ವರಿತವಾಗಿ ದುರಸ್ಥಿಪಡಿಸಿರುವ ಕ್ರಮಕ್ಕೆ ವೀರಪ್ಪ ಮೊಯ್ಲಿ ಶ್ಲಾಘನೆ ವ್ಯಕ್ತಪಡಿಸಿದರು. ಸಂಕಷ್ಟದ ನಡುವೆಯೂ ಇಚ್ಚಾಶಕ್ತಿ ಪ್ರದರ್ಶಿಸಿದ ಜಿಲ್ಲೆಯ ಜನತೆಯ ಮನಸ್ಥಿತಿಗೂ ಅಭಿನಂದನೆ ಸಲ್ಲಿಸಿದರು. ಸಂಸದರ ವೇತನ ನಿಧಿ ಯಿಂದ 10 ಲಕ್ಷ ಮತ್ತು ತಮ್ಮ 1 ತಿಂಗಳ ವೇತನ ವನ್ನು ಕೊಡಗು ಜಿಲ್ಲಾ ಪ್ರಕೃತಿ ವಿಕೋಪ ನಿಧಿಗೆ ನೀಡುವುದಾಗಿ ವೀರಪ್ಪ ಮೊಯ್ಲಿ ಘೋಷಿಸಿದರು. ಕೊಡಗು ಜಿಲ್ಲೆಯ ಪುನರ್ ನಿರ್ಮಾಣಕ್ಕೆ ರಾಜ್ಯ ಮತ್ತು ಕೇಂದ್ರ ಸರಕಾರಗಳೊಂದಿಗೆ ವಿವಿಧ ಸಂಸ್ಥೆಗಳು, ದಾನಿಗಳೂ ನೆರವು ನೀಡಲು ಮುಂದೆ ಬರ ಬೇಕೆಂದು ವೀರಪ್ಪ ಮೊಯ್ಲಿ ಮನವಿ ಮಾಡಿದರು.

ದೊಡ್ಡಬಳ್ಳಾಪುರ ಶಾಸಕ ವೆಂಕಟರಮಣ, ಶಾಸಕ ವಾಸು, ಮುಖಂಡರಾದ ಬಿ.ಎ.ಬಾವ, ಮಿಟ್ಟು ಚಂಗಪ್ಪ, ಎಂಎಲ್‍ಸಿ ವೀಣಾ ಅಚ್ಚಯ್ಯ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಿವು ಮಾದಪ್ಪಸುದ್ದಿಗೋಷ್ಠಿಯಲ್ಲಿದ್ದರು.

Translate »