ವಿಕಲಚೇತನರಿಗೆ ಪ್ರೋತ್ಸಾಹ ಅಗತ್ಯ
ಕೊಡಗು

ವಿಕಲಚೇತನರಿಗೆ ಪ್ರೋತ್ಸಾಹ ಅಗತ್ಯ

December 4, 2018

ವಿರಾಜಪೇಟೆ:  ವಿಕಲ ಚೇತನ ಮಕ್ಕಳಲ್ಲಿಯು ಪ್ರತಿಭೆಗಳಿದ್ದು, ಅವರಿಗೆ ಹೆಚ್ಚಿನ ಪ್ರೋತ್ಸಾಹ ಮತ್ತು ವೇದಿಕೆಯನ್ನು ಕಲ್ಪಿಸಿ ಕೊಡುವಂತಾಗಬೇಕು ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಅಚ್ಚಪಂಡ ಮಹೇಶ್ ಗಣಪತಿ ಹೇಳಿದರು.

ವಿಶ್ವ ಅಂಗವಿಕಲ ಮಕ್ಕಳ ದಿನಾಚರಣೆ ಅಂಗವಾಗಿ ಕೊಡಗು ಜಿಲ್ಲಾ ಪಂಚಾಯತ್, ಸಮಗ್ರ ಶಿಕ್ಷಣ ಅಭಿಯಾನ, ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ವಿರಾಜಪೇಟೆ ಸರಕಾರಿ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ‘ತಾಲೂಕು ಮಟ್ಟದ ವಿಕಲ ಚೇತನ ಮಕ್ಕಳಿಗೆ ಕ್ರೀಡಾ ಸ್ಪರ್ಧೆ’ ಕಾರ್ಯ ಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ವಿಕಲಚೇತನರೆಂಬ ಕೀಳರಿಮೆ ಬೇಡ. ಇತರ ಮಕ್ಕಳಂತೆ ಅವರನ್ನು ಪ್ರೋತ್ಸಾಹಿಸುವ ಮೂಲಕ ಸರಕಾರದಿಂದ ಸಿಗುವಂತಹ ಸೌಲಭ್ಯಗಳನ್ನು ವಿಕಲಚೇತನರಿಗೆ ಮೊದಲು ನೀಡುವಂತಾಗಬೇಕು. ಅವರಿಗೆ ಎಲ್ಲರ ಪ್ರೋತ್ಸಾಹ ಸಹಕಾರ ಅಗತ್ಯವಾಗಿದ್ದು, ಜಿಲ್ಲಾ ಪಂಚಾಯಿತಿ ಮುಖಾಂತರ ವಿಕಲಚೇತನ ಮಕ್ಕಳಿಗೆ ಹೆಚ್ಚಿನ ಸೌಲಭ್ಯಗಳನ್ನು ಒದಗಿಸಲು ಪ್ರಯತ್ನಿಸುವುದಾಗಿ ಹೇಳಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಅಂಬುಜ ಪ್ರಾಸ್ತಾವಿಕ ವಾಗಿ ಮಾತನಾಡಿ, ವಿಶೇಷ ಅಗತ್ಯತೆ ಉಳ್ಳ ಮಕ್ಕಳಿಗಾಗಿ ಶಿಕ್ಷಣ ಇಲಾಖೆ ಹಲವು ಕಾರ್ಯ ಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ಅವರಿಗೆ ಸಾಧನ ಸಲಕರಣೆಗಳನ್ನು ನೀಡುವುದರೊಂದಿಗೆ ಅವರಿಗೆ ವಿಶೇಷ ಭತ್ಯೆ ಹಾಗೂ ಸಾರಿಗೆ ವೆಚ್ಚ ವನ್ನು ನೀಡಲಾಗುತ್ತಿದೆ ಎಂದರು. ವೇದಿಕೆಯಲ್ಲಿ ತಾಲೂಕು ದೈಹಿಕ ಶಿಕ್ಷಣದ ಪಿ.ಡಿ.ರತಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸುರೇಂದ್ರ, ಜಿಲ್ಲಾ ದೈಹಿಕ ಶಿಕ್ಷಣ ಸಂಘದ ಅಧ್ಯಕ್ಷ ಪ್ರವೀಣ್ ಇತರರು ಉಪಸ್ಥಿತರಿದ್ದರು.
ತಾಲೂಕಿನ 1 ರಿಂದ 4, 5 ರಿಂದ 7, 8 ರಿಂದ 10 ನೇ ತರಗತಿ ಮೂರು ವಿಭಾಗದಲ್ಲಿ ವಿಕಲ ಚೇತನ ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.

ಪರಿಸರ ನಿರ್ಮಾಣ ಕಾರ್ಯಕ್ರಮದ ಅಂಗವಾಗಿ ಇದೇ ವೇದಿಕೆಯಲ್ಲಿ ವಿಶೇಷ ಸಾಧನೆ ಮಾಡಿದ ವಿಕಲಚೇತನರುಗಳಾದ ಕೊಂಡಗೇರಿ ಸ.ಹ.ಪ್ರಾ.ಶಾಲಾ ಸಹ ಶಿಕ್ಷಕಿ ರಾಜೇಶ್ವರಿ, ಗ್ರಾಮೀಣ ಪುನರ್ವಸತಿ ಕೆಲಸಗಾರರಾದ ಗಾಯತ್ರಿ, ವಾಲಿಬಾಲ್ ಕ್ರೀಡಾಪಟು ರಂಶದ್, ಸ್ವಯಂ ಸೇವಕಿ ಮಂಗಳ, ಕುಮಾರಿ ದಕ್ಷಾ ಅವರು ಗಳನ್ನು ಗೌರವಿಸಲಾಯಿತು. ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಉತ್ತಪ್ಪ ಸ್ವಾಗತಿಸಿದರು. ಬಿ.ಐ.ಇ.ಆರ್.ಟಿ.ಕೆ.ಎಸ್. ಅಜಿತ ನಿರೂಪಿಸಿ ದರೆ. ಬಿ.ಆರ್.ಪಿ. ಗೀತಾಂಜಲಿ ವಂದಿಸಿದರು.

Translate »