ಅಂಗವಿಕಲರಿಗೆ ಸಂವಹನದ ಮೂಲಕ ಪೋಷಣೆ ಮಾಡುವ ಅಗತ್ಯವಿದೆ
ಮೈಸೂರು

ಅಂಗವಿಕಲರಿಗೆ ಸಂವಹನದ ಮೂಲಕ ಪೋಷಣೆ ಮಾಡುವ ಅಗತ್ಯವಿದೆ

August 10, 2018

ಮೈಸೂರು: ಅಂಗವಿಕಲರಿಗೆ ವೈದ್ಯಕೀಯ ಸೇವೆ ಜೊತೆಗೆ ಸಂವಹನದ ಮೂಲಕ ಪೋಷಣೆ ಮಾಡಬೇಕಾದ ಅಗತ್ಯವಿದೆ ಎಂದು ರಾಜ್ಯ ಅಂಗವಿಕಲರ ಕಲ್ಯಾಣ ಇಲಾಖೆ ಆಯುಕ್ತ ಎಸ್.ವಿ.ಬಸವರಾಜು ಅಭಿಪ್ರಾಯಪಟ್ಟಿದ್ದಾರೆ.

ಮೈಸೂರಿನ ಮಾನಸಗಂಗೋತ್ರಿಯ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ (AIISH)ಯ ಆವರಣದ ನಾಲೆಡ್ಜ್ ಪಾರ್ಕ್ ಸಭಾಂಗಣದಲ್ಲಿ ಏರ್ಪಡಿಸಿದ್ದ ಸಂಸ್ಥೆಯ 53ನೇ ವಾರ್ಷಿಕೋತ್ಸವ ಸಮಾ ರಂಭದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡುತ್ತಿದ್ದರು.

ಇತ್ತೀಚೆಗೆ ಅಂಗವಿಕಲರಿಗೆ ಸಾಕಷ್ಟು ಸೌಲಭ್ಯ ನೀಡಲಾಗುತ್ತಿದೆ. ಇನ್ನೂ ಹೆಚ್ಚು ಅನುಕೂಲ ಮಾಡಲು ಸರ್ಕಾರ ಚಿಂತಿಸುತ್ತಿದೆ. ಅಂಗವಿಕಲರಿಗೆ ವೈದ್ಯಕೀಯ ಸೇವೆ ಗಿಂತಲೂ ಹೆಚ್ಚಾಗಿ ಸಂವಹನದ ಮೂಲಕ ಪೋಷಣೆ ಮಾಡುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

ವಿಕಲಚೇತನರಿಗೆ ತರಬೇತಿ ನೀಡುವುದಕ್ಕಿಂತಲೂ ಅವರನ್ನು ಪೋಷಣೆ ಮಾಡುವವರಿಗೆ ಹೆಚ್ಚಿನ ರೀತಿಯ ತರಬೇತಿ ನೀಡಿದರೆ ಬಹಳಷ್ಟು ಮಂದಿಗೆ ಅನುಕೂಲವಾಗುತ್ತದೆ ಎಂದ ಅವರು, ಅಂಗವಿಕಲರ ಅನುಕೂಲಕ್ಕಾಗಿ ಸೂಕ್ತ ಕಾಯ್ದೆ, ಕಾನೂನುಗಳಿದ್ದಾಗ್ಯೂ ಅವರಿಗೆ ಸೂಕ್ತ ನ್ಯಾಯ ಒದಗಿಸಲು ಸಾಧ್ಯವಾಗಿಲ್ಲ ಎಂದು ನುಡಿದರು.

ಈ ನಿಟ್ಟಿನಲ್ಲಿ ಆಯಿಷ್ ನಂತಹ ಸಂಸ್ಥೆ ಗಳ ಸೇವೆ ಅತೀ ಪ್ರಾಮುಖ್ಯವಾಗಿದ್ದು, ತಂತ್ರಜ್ಞಾನ ಬಳಸಿಕೊಂಡು ವಿನೂತನ ರೀತಿಯ ಸೌಲಭ್ಯಗಳನ್ನು ಒದಗಿಸುವ ಕೆಲಸ ಮಾಡಬೇಕಿದೆ. ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬ ಅಂಗವಿಕಲರಿಗೂ ವೈದ್ಯಕೀಯ ಸೇವೆ ಹಾಗೂ ಪುನರ್ವಸತಿ ಕಲ್ಪಿಸ ವುದು ಸವಾಲಾಗಿ ಪರಿಣಮಿಸಿದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮೈಸೂರಿನ ಆಡಳಿತ ತರಬೇತಿ ಸಂಸ್ಥೆ ಮಹಾನಿರ್ದೇಶಕ ಡಾ.ಕಪಿಲ್‍ಮೋಹನ್ ಮಾತನಾಡಿ, ಆಯಿಷ್ ಬಿಡುಗಡೆ ಮಾಡಿರುವ ವರದಿಯಲ್ಲಿ ಶೇ.2.67ರಷ್ಟು ಮಂದಿ ಸಂವಹನ ಸಮಸ್ಯೆಯಿಂದ ಬಳಲುತ್ತಿರುವುದು ನಿಜಕ್ಕೂ ಆಘಾತಕಾರಿ ಸಂಗತಿ ಯಾಗಿದೆ ಎಂದು ತಿಳಿಸಿದರು.

ಸಂಸ್ಥೆ ಹೊರತಂದಿರುವ ನ್ಯೂಬಾರ್ನ್ ಸ್ಕ್ರೀನಿಂಗ್ ಕಾರ್ಡ್‍ಅನ್ನು ಆರೋಗ್ಯ ಇಲಾಖೆಯೊಂದಿಗೆ ಸೇರ್ಪಡೆಗೊಳಿಸಿದರೆ ಎಲ್ಲರಿಗೂ ಸೇವೆ ತಲುಪಿಸಬಹುದು. ಹಿಂದೆ ಸಂವಹನದ ಸಮಸ್ಯೆಗಳು ಬೇಗ ಪತ್ತೆ ಯಾಗುತ್ತಿರಲಿಲ್ಲ, ಆದರೆ ಈಗ ಮಗು ಹುಟ್ಟುವಾಗಲೇ ಸಮಸ್ಯೆ ಗುರುತಿಸ ಬಹುದಾಗಿದೆ. ಆರಂಭದಲ್ಲೇ ಅಂಗವೈಕ ಲ್ಯತೆ ಕಂಡುಬರುವುದರಿಂದ ಸುಲಭವಾಗಿ ಚಿಕಿತ್ಸೆ ನೀಡಿ ಸರಿಪಡಿಸಬಹುದಾಗಿದೆ ಎಂದು ನುಡಿದರು.

ಆಯಿಷ್ 53ನೇ ವಾರ್ಷಿಕೋತ್ಸವದ ಅಂಗವಾಗಿ ಲಕ್ನೋ ಹಾಗೂ ಬಿಹಾರದ ಬಾಗಲ್ಪುರನಲ್ಲಿ ಹೊಸದಾಗಿ ಆರಂಭಿಸಿರುವ ನ್ಯೂಬಾರ್ನ್ ಸ್ಕ್ರೀನಿಂಗ್(ಓಃS) ಕೇಂದ್ರಗಳನ್ನು ಕಂಪ್ಯೂಟರ್ ಬಟನ್ ಒತ್ತುವ ಮೂಲಕ ಎಸ್.ವಿ.ಬಸವರಾಜು ಆನ್‍ಲೈನ್‍ನಲ್ಲಿ ಉದ್ಘಾಟಿಸಿದರು.

ಸಂಸ್ಥೆ ಹೊರತಂದಿರುವ ಸಂವಹನ ಸಮಸ್ಯೆಯಿಂದ ಬಳಲುವವರ ಕುರಿತ ಸಮೀಕ್ಷಾ ವರದಿಯನ್ನು ಇದೇ ಸಂದರ್ಭ ಬಿಡುಗಡೆ ಮಾಡಲಾಯಿತಲ್ಲದೆ, ಪಿಹೆಚ್‍ಡಿ. ಪದವಿ ಪಡೆದ ವಿದ್ಯಾರ್ಥಿ ಗಳು ಹಾಗೂ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. ಆಯಿಷ್ ನಿರ್ದೇಶಕಿ ಡಾ.ಎಸ್.ಆರ್.ಸಾವಿತ್ರಿ, ತಾಂತ್ರಿಕ ಸೇವೆ ಗಳ ವಿಭಾಗದ ಮುಖ್ಯಸ್ಥೆ ಡಾ.ಎನ್. ಶ್ರೀದೇವಿ ಹಾಗೂ ಇತರರು ವಾರ್ಷಿ ಕೋತ್ಸವದಲ್ಲಿ ಪಾಲ್ಗೊಂಡಿದ್ದರು.

Translate »