ಕುಡಿಯುವ ನೀರು ಕಾಮಗಾರಿಗಳ ಕೈಗೆತ್ತಿಕೊಳ್ಳದೇ ಅಧಿಕಾರಿಗಳಿಂದ ಕೋಟ್ಯಾಂತರ ರೂ. ಅವ್ಯವಹಾರ
ಮೈಸೂರು

ಕುಡಿಯುವ ನೀರು ಕಾಮಗಾರಿಗಳ ಕೈಗೆತ್ತಿಕೊಳ್ಳದೇ ಅಧಿಕಾರಿಗಳಿಂದ ಕೋಟ್ಯಾಂತರ ರೂ. ಅವ್ಯವಹಾರ

February 16, 2019

ಮೈಸೂರು: ಕುಡಿಯುವ ನೀರು ಪೂರೈಕೆ ಸಂಬಂಧ ಕಾಮಗಾರಿಗಳನ್ನೇ ಕೈಗೆತ್ತಿ ಕೊಂಡಿಲ್ಲ. ಆದರೆ ಅವೆಲ್ಲಾ ಪೂರ್ಣಗೊಂಡಿವೆ ಎಂದು ಮೈಸೂರು ಜಿಲ್ಲಾ ಪಂಚಾಯಿತಿಯ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಅಧಿಕಾರಿಗಳು ಸರ್ಕಾರಕ್ಕೆ ವರದಿ ಸಲ್ಲಿಸಿ ಕೋಟ್ಯಾಂತರ ರೂ. ಅವ್ಯವಹಾರ ನಡೆಸಿ ದ್ದಾರೆ ಎಂದು ಜಿಪಂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರೂ ಆದ ಜಿಪಂ ಹಂಗಾಮಿ ಅಧ್ಯಕ್ಷ ಸಾ.ರಾ.ನಂದೀಶ್ ಗಂಭೀರ ಆರೋಪ ಮಾಡಿದ್ದಾರೆ.

ಮೈಸೂರು ಜಿಪಂನ ಮಿನಿ ಮೀಟಿಂಗ್ ಹಾಲ್‍ನಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬರದ ಹಿನ್ನೆಲೆಯಲ್ಲಿ ಕುಡಿಯುವ ನೀರಿಗೆ ಸಂಬಂ ಧಿಸಿದಂತೆ 2017-18ನೇ ಸಾಲಿಗೆ 10.73 ಕೋಟಿ ರೂ. ವೆಚ್ಚದಲ್ಲಿ ಒಟ್ಟು 420 ತುರ್ತು ಕಾಮಗಾರಿ ಗಳನ್ನು ಜಿಲ್ಲೆಯಲ್ಲಿ ಕೈಗೊಳ್ಳಲು ರಾಜ್ಯ ಸರ್ಕಾರ ಅನುಮೋದನೆ ನೀಡಿತ್ತು. ಆದರೆ ಅಧಿಕಾರಿಗಳು ಒಂದೇ ಒಂದು ಕಾಮಗಾರಿಯನ್ನೂ ನಡೆಸದೇ ಎಲ್ಲಾ ಕಾಮಗಾರಿಗಳನ್ನೂ ಪೂರ್ಣಗೊಳಿಸಲಾಗಿದೆ ಎಂದು ಸರ್ಕಾರಕ್ಕೆ ವರದಿ ಸಲ್ಲಿಸಿ 3 ಕೋಟಿ ರೂ. ಹಣ ಬಿಡು ಗಡೆ ಮಾಡಿಸಿಕೊಂಡಿದ್ದಾರೆ ಎಂದು ದೂರಿದರು.

ಕೆಆರ್ ನಗರ ತಾಲೂಕಿನಲ್ಲಿ 2.60 ಲಕ್ಷ ರೂ. ವೆಚ್ಚ ದಲ್ಲಿ 1 ಕಾಮಗಾರಿ, ಹೆಚ್‍ಡಿ ಕೋಟೆಯಲ್ಲಿ 45.18 ಲಕ್ಷ ರೂ. ವೆಚ್ಚದಲ್ಲಿ 25 ಕಾಮಗಾರಿ, ಪಿರಿಯಾಪಟ್ಟಣ ದಲ್ಲಿ 63.97 ಲಕ್ಷ ರೂ. ವೆಚ್ಚದಲ್ಲಿ 44 ಕಾಮಗಾರಿ, ಹುಣಸೂರಿನಲ್ಲಿ 1.26 ಕೋಟಿ ರೂ. ವೆಚ್ಚದಲ್ಲಿ 44 ಕಾಮಗಾರಿ, ನಂಜನಗೂಡಿನಲ್ಲಿ 2.18 ಕೋಟಿ ರೂ. ವೆಚ್ಚದಲ್ಲಿ 115 ಕಾಮಗಾರಿ, ಮೈಸೂರು ತಾಲೂಕಿನಲ್ಲಿ 2.47 ಕೋಟಿ ರೂ. ವೆಚ್ಚದಲ್ಲಿ 55 ಕಾಮಗಾರಿ ಹಾಗೂ ತಿ.ನರಸೀಪುರದಲ್ಲಿ 3.69 ಕೋಟಿ ರೂ. ವೆಚ್ಚ ದಲ್ಲಿ 140 ಕಾಮಗಾರಿ ಸೇರಿದಂತೆ ಒಟ್ಟಾರೆ 10.73 ಕೋಟಿ ವೆಚ್ಚದಲ್ಲಿ ಒಟ್ಟು 420 ಕಾಮಗಾರಿ ಪೂರ್ಣ ಗೊಳಿಸಲಾಗಿದೆ ಎಂದು ಸುಳ್ಳು ಮಾಹಿತಿಯನ್ನು ಸರ್ಕಾರಕ್ಕೆ ರವಾನಿಸಿದ್ದಾರೆ ಎಂದು ಆಪಾದಿಸಿದರು.

ಕೆಲಸವನ್ನೇ ಮಾಡದೇ ಇದೀಗ 3 ಕೋಟಿ ರೂ. ಹಣ ವನ್ನು ಬಿಡುಗಡೆ ಮಾಡಿಸಿಕೊಂಡಿದ್ದಾರೆ. ಈ ಸಂಬಂಧ ಸರ್ಕಾರಕ್ಕೆ ದೂರು ನೀಡಲಿದ್ದು, ಉಳಿದ ಹಣ ಬಿಡು ಗಡೆಗೆ ತಡೆ ಕೋರಲಾಗುವುದು. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಅಧಿಕಾರಿಗಳು ಇದ ರಲ್ಲಿ ಭಾಗಿಯಾಗಿದ್ದು, ಈ ಹಿಂದಿನ ಸಿಇಓ ಹಾಗೂ ಜಿಲ್ಲಾಧಿಕಾರಿಗಳು ಅಧಿಕಾರಿಗಳು ಸಿದ್ಧಪಡಿಸಿದ ವರದಿ ಅನುಮೋದಿಸಿದ್ದಾರೆ. ಅಧಿಕಾರಿಗಳ ಅಕ್ರಮದಲ್ಲಿ ಒಂದಿ ಬ್ಬರು ಜಿಪಂ ಸದಸ್ಯರೂ ಶಾಮೀಲಾಗಿರುವ ಶಂಕೆ ಇದೆ. ಈ ಸಂಬಂಧ ಕಾಮಗಾರಿ ನಡೆಸಲಾಗಿದೆ ಎನ್ನುವ ಸ್ಥಳಕ್ಕೆ ಖುದ್ದು ಭೇಟಿ ನೀಡಿ ಪರಿಶೀಲಿಸಲಿದ್ದೇನೆ ಎಂದರು.

ಬಸವ ವಸತಿ ಯೋಜನೆಯಡಿ ಅಧಿಕಾರಿಗಳೇ ಫಲಾನುಭವಿಗಳ ಆಯ್ಕೆ ಮಾಡಲು ಸೂಚನೆ
ಮೈಸೂರು, ಫೆ.15(ಪಿಎಂ)- ಹೆಚ್.ಡಿ.ಕೋಟೆ ತಾಲೂಕಿನ ಬೇಗೂರು ಗ್ರಾಮ ಪಂಚಾಯಿತಿಯಲ್ಲಿ ಸದಸ್ಯರ ಮುಸುಕಿನ ಗುದ್ದಾಟದಿಂದ ನೆನೆಗುದಿಗೆ ಬಿದ್ದಿರುವ ಬಸವ ವಸತಿ ಯೋಜನೆಯಡಿ 76 ಫಲಾ ನುಭವಿಗಳ ಆಯ್ಕೆಯನ್ನು ಅಧಿಕಾರಿಗಳೇ ಮಾಡು ವಂತೆ ಜಿಪಂ ಹಂಗಾಮಿ ಅಧ್ಯಕ್ಷ ಸಾ.ರಾ. ನಂದೀಶ್ ಅಧ್ಯಕ್ಷತೆಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ನಿರ್ದೇಶನ ನೀಡಲಾಯಿತು.

ಮೈಸೂರು ಜಿಪಂ ಸಭಾಂಗಣದಲ್ಲಿ ಹೆಚ್‍ಡಿ ಕೋಟೆ ತಾಲೂಕು ಪಂಚಾಯಿತಿಗೆ ಸಂಬಂಧಿಸಿ ದಂತೆ ಶುಕ್ರವಾರ ನಡೆದ ಪ್ರಗತಿ ಪರಿಶೀಲನಾ ಸಭೆ ಯಲ್ಲಿ ಬೇಗೂರು ಗ್ರಾಮ ಪಂಚಾಯಿತಿಯ ಸದಸ್ಯರ ಮುಸುಕಿನ ಗುದ್ದಾಟದ ಹಿನ್ನೆಲೆಯಲ್ಲಿ ವಸತಿ ಯೋಜನೆ ಅನುಷ್ಠಾನಕ್ಕೆ ಉಂಟಾಗಿರುವ ಸಮಸ್ಯೆಯನ್ನು ಜಿಪಂ ಅಧ್ಯಕ್ಷರು ಹಾಗೂ ಕ್ಷೇತ್ರದ ಜಿಪಂ ಸದಸ್ಯರ ಎದುರು ಪಿಡಿಓ ಹನುಮಂತರಾಜ್ ಬಿಚ್ಚಿಟ್ಟರು.

ಈ ವೇಳೆ ಮಾತನಾಡಿದ ಸದಸ್ಯ ವೆಂಕಟ ಸ್ವಾಮಿ, 76 ಕುಟುಂಬಕ್ಕೆ ಮನೆಗಳ ದೊರಕಿಸಿ ಕೊಡಲು ಗ್ರಾಮಗಳಿಗೆ ಭೇಟಿ ನೀಡಿ ನೀವೇ ಆಯ್ಕೆ ಮಾಡಿ ಎಂದು ಪಿಡಿಓ ಹನುಮಂತರಾಜ್ ಹಾಗೂ ಹೆಚ್‍ಡಿ ಕೋಟೆ ತಾಪಂ ಇಓ ದರ್ಶನ್ ಅವರಿಗೆ ಸೂಚನೆ ನೀಡಿದರು. ಇದೇ ವೇಳೆ ಜಿಪಂ ಮುಖ್ಯ ಯೋಜನಾಧಿಕಾರಿ ಕೆ.ಬಿ.ಪ್ರಭುಸ್ವಾಮಿ, ಇಂತಹ ಪರಿಸ್ಥಿತಿಯಲ್ಲಿ ಅಧಿಕಾರಿಗಳೇ ಫಲಾನುಭವಿ ಗಳನ್ನು ಆಯ್ಕೆ ಮಾಡಲು ಕಾಯ್ದೆಯಲ್ಲಿ ಅವ ಕಾಶವಿದೆ ಎಂದು ತಿಳಿಸಿದರು.

ಪಿಡಿಓ ವಿರುದ್ಧ ಸಾ.ರಾ.ನ ಗರಂ: ಆಲನಹಳ್ಳಿ ಗ್ರಾಪಂ ಪಿಡಿಓ ಸಿದ್ದಪ್ಪ ಅವರು ಸಮರ್ಪಕ ಮಾಹಿತಿ ನೀಡದ ಹಿನ್ನೆಲೆಯಲ್ಲಿ ಸಾ.ರಾ.ನಂದೀಶ್ ಗರಂ ಆದರು. ಅವರಿಗೆ ನೋಟೀಸ್ ನೀಡುವಂತೆ ಮುಖ್ಯ ಯೋಜನಾಧಿಕಾರಿಗೆ ಸೂಚನೆ ನೀಡಿದರು.
ಇದಕ್ಕೂ ಮುನ್ನ ತಮ್ಮ ಪಂಚಾಯಿತಿಯಲ್ಲಿ ನರೇಗಾ ಯೋಜನೆ ಬಗ್ಗೆ ಮಾಹಿತಿ ನೀಡಿದ ಸಿದ್ದಪ್ಪ, ಒಮ್ಮೊಮ್ಮೆ ಒಂದೊಂದು ಅಂಕಿ-ಅಂಶ ನೀಡುತ್ತ ಗೊಂದಲ ಮೂಡಿಸಿದರು. ಈ ವೇಳೆ ಮಧ್ಯ ಪ್ರವೇಶಿಸಿದ ಯೋಜನಾಧಿಕಾರಿ ಪ್ರಭುಸ್ವಾಮಿ, ಈ ಯೋಜನೆ ಯಡಿ ಗುರಿಗೂ ಮೀರಿ ಅನುಷ್ಠಾನಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು.

ವಸತಿ ಯೋಜನೆಗಳಡಿ ಮಂಜೂರಾಗಿರುವ ಮನೆ ಗಳ ಸಂಖ್ಯೆ ಹಾಗೂ ನಿರ್ಮಿಸಿರುವ ಮನೆಗಳು ಬಗ್ಗೆ ಸೂಕ್ತ ಮಾಹಿತಿ ನೀಡಲಾಗದೇ ಪಿಡಿಓ ಸಿದ್ದಪ್ಪ ತಡಕಾಡುತ್ತಿದ್ದರು. ಅಲ್ಲದೆ, ಪಂಚಾಯಿತಿ ವ್ಯಾಪ್ತಿಯಲ್ಲಿ ಎಷ್ಟು ಮಂದಿ ಅಂಗವಿಕಲರು ಇದ್ದಾರೆ ಎಂದು ಜಿಪಂ ಸದಸ್ಯ ಶ್ರೀಕೃಷ್ಣರ ಪ್ರಶ್ನೆಗೆ ಮೂವರು ಎಂದು ಸಿದ್ದಪ್ಪ ಉತ್ತರಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಶ್ರೀಕೃಷ್ಣ, ಆಲನಹಳ್ಳಿಯಲ್ಲೇ ಐವರು ಅಂಗವಿಕಲರು ಇದ್ದಾರೆ. ಈ ಪೈಕಿ ನಿಮ್ಮ ಪಂಚಾಯಿತಿ ಸದಸ್ಯೆಯೊಬ್ಬರ ಪತಿಯವರೂ ಅಂಗವಿಕಲರು. ಸೂಕ್ತ ಮಾಹಿತಿ ನಿಮ್ಮ ಬಳಿ ಇರಬೇಕು ಎಂದು ಕಿಡಿಕಾರಿದರು. ಜಿಪಂ ಮಾಜಿ ಅಧ್ಯಕ್ಷೆ ನಯೀಮಾ ಸುಲ್ತಾನ, ಜಿಪಂ ಸದಸ್ಯೆ ಬಿ.ಸಿ. ಪರಿಮಳ ಶ್ಯಾಮ್ ಸೇರಿದಂತೆ ಪಿಡಿಓಗಳು ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿದ್ದರು.

Translate »