ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಚಾಲನೆ
ಕೊಡಗು

ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಚಾಲನೆ

February 1, 2019

ವಿರಾಜಪೇಟೆ: ವಿರಾಜಪೇಟೆ ಕ್ಷೇತ್ರದ ಪ್ರತಿ ಗ್ರಾಮ ಪಂಚಾಯಿತಿಗಳಿಗೂ ಕೊಡಗು ಪ್ಯಾಕೆಜ್ ಅನುದಾನ ಹಾಗೂ ಪ್ರಕೃತಿ ವಿಕೋಪದ ಅನುದಾನ ಸೇರಿ ರೂ.2 ಕೋಟಿ ಅನುದಾನದಲ್ಲಿ ಗ್ರಾಮೀಣ ಪ್ರದೇಶದ ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದು ಶಾಸಕ ಕೆ.ಜಿ.ಬೋಪಯ್ಯ ಹೇಳಿದರು.

ವಿರಾಜಪೇಟೆ ತಾಲೂಕಿನ ಎರಡನೇ ರುದ್ರಗುಪ್ಪೆಯಿಂದ ವಿ.ಬಾಡಗ ಗ್ರಾಮಕ್ಕೆ ಹೋಗುವ ಮುಖ್ಯ ರಸ್ತೆಯ ಡಾಂಬರೀಕರಣ ಕಾಮಗಾರಿಗೆ ಮಳೆ ಪರಿಹಾರದ ಅನುದಾನದಲ್ಲಿ ರೂ.12 ಲಕ್ಷ ಹಾಗೂ ಲೋಕೋಪಯೋಗಿ ಇಲಾಖೆಯಿಂದ ರೂ.10 ಲಕ್ಷದ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ಬಳಿಕ ಮಾತನಾಡಿದ ಶಾಸಕ ಬೋಪಯ್ಯ, ಈ ಎಲ್ಲಾ ಕಾಮಗಾರಿಗಳನ್ನು ಮಾರ್ಚ್ ತಿಂಗಳ 31ರೊಳಗೆ ಮುಗಿಸುವಂತೆ ಇಲಾ ಖೆಯ ಅಧಿಕಾರಿಗಳಿಗೆ ಸೂಚಿಸಿದರು. ಹಾಗೂ ಕಾಮಗಾರಿಗಳು ನಡೆಯುವ ಸಂದರ್ಭ ಕಳಪೆಯಾಗದಂತೆ ಗ್ರಾಮಸ್ಥರು ನೋಡಿಕೊಳ್ಳುವುದು ಉತ್ತಮ ಎಂದರು.

ಇದಕ್ಕೂ ಮೊದಲು ಕಂಡಂಗಾಲದ ಮಂದಮಾಡ ಪಳ್ಳಿರಸ್ತೆಗೆ ರೂ.10 ಲಕ್ಷದಲ್ಲಿ ಕಾಂಕ್ರೀಟ್ ರಸ್ತೆಗೆ ಮತ್ತು ಅಮ್ಮತ್ತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪುಲಿಯೇರಿ ಗ್ರಾಮದಲ್ಲಿ ರಸ್ತೆ ಡಾಂಬರೀಕರಣಕ್ಕೆ ಭೂಮಿ ಪೂಜೆ ನೆರವೇರಿಸಿದ್ದರು.

ವಿ.ಬಾಡಗದಲ್ಲಿ ನಡೆದ ಭೂಮಿ ಪೂಜೆ ಸಂದರ್ಭ ಬಿಜೆಪಿಯ ಅಮ್ಮಣಿಚಂಡ ರಂಜಿ ಪೂಣಚ್ಚ, ಪ್ರಧಾನ ಕಾರ್ಯದರ್ಶಿ ಲಾಲ ಭೀಮಯ್ಯ, ಕಿಟ್ಟು ಕುಟ್ಟಪ್ಪ, ಬಲ್ಲಡಿಚಂಡ ಸೀತಮ್ಮ, ಮಾಚಯ್ಯ, ಮೂಕಚಂಡ ಅರುಣ್ ಅಪ್ಪಣ್ಣ, ಗಣಪತಿ, ಕೆ.ಮೋಹನ್ ಮೊಣ್ಣಪ್ಪ, ಮಲ್ಲಂಡ ಮಧುದೇವಯ್ಯ, ಜೋಕಿಂ ರಾಡ್ರಿಗಾಸ್, ವಿಷ್ಣು ಹಾಗೂ ಅಮ್ಮತ್ತಿ ಪುಲಿಯೇರಿಯಲ್ಲಿ ನಡೆದ ಭೂಮಿ ಪೂಜೆಯಲ್ಲಿ ಅಲ್ಲಿನ ಗ್ರಾಪಂ, ಅಧ್ಯಕ್ಷೆ ಪಿ.ಎಸ್.ಶಾಂತ, ಉಪಾಧ್ಯಕ್ಷ ದಿತಿನ್ ನಾಚಪ್ಪ, ಸದಸ್ಯರಾದ ಚಂದ್ರಕಲಾ, ಪ್ರಶಾಂತ್, ತಾಯಮ್ಮ, ಅಭಿವೃದ್ಧಿ ಅಧಿಕಾರಿ ಮೇದಪ್ಪ ಮುಂತಾದವರು ಉಪಸ್ಥಿತರಿದ್ದರು.

Translate »