ತಿ.ನರಸೀಪುರ, ಜ.18(ಎಸ್ಕೆ)-ತಾಲೂಕು ಪ್ರಾಥಮಿಕ ಕೃಷಿ ಮತ್ತು ಭೂ ಅಭಿವೃದ್ಧಿ ಬ್ಯಾಂಕ್(ಪಿಕಾರ್ಡ್@ ಪಿಎಲ್ಡಿ) ಅಧಿಕಾರಿಗಳು ಸಾಲ ವಸೂಲಾತಿಗಾಗಿ ರೈತರ ಮನೆ ಬಾಗಿಲಿಗೆ ತೆರಳಿ ಅಸಭ್ಯವಾಗಿ ವರ್ತಿ ಸುತ್ತಿರುವುದಾಗಿ ಆರೋಪಿಸಿ ಕಬ್ಬು ಬೆಳೆಗಾರರ ಸಂಘದ ನೇತೃತ್ವ ದಲ್ಲಿ ರೈತರು ಶನಿವಾರ ಪ್ರತಿಭಟಿಸಿದರು.
ಪಟ್ಟಣದ ಪಿಕಾರ್ಡ್ @ ಪಿಎಲ್ಡಿ ಬ್ಯಾಂಕ್ ಮುಂಭಾಗ ಜಮಾವಣೆಗೊಂಡ ಪ್ರತಿಭಟನಾಕಾರರು, ಬ್ಯಾಂಕ್ಗೆ ಬೀಗ ಜಡಿದು ಘೋಷಣೆ ಕೂಗಿದರು. ರೈತರೊಂದಿಗೆ ಅಸಭ್ಯವಾಗಿ ವರ್ತಿಸಿದ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆ ಉದ್ದೇಶಿಸಿ ಕುರುಬೂರು ಶಾಂತಕುಮಾರ್ ಮಾತನಾಡಿ, ರಾಜ್ಯ ಸರ್ಕಾರ ರೈತರ ಸಾಲಮನ್ನಾ ವಿಚಾರವಾಗಿ ತಿಂಗಳಿಗೊಂದು ಸುತ್ತೋಲೆ ಹೊರಡಿಸಿ ರೈತರಿಗೆ ಅನ್ಯಾಯ ಮಾಡುತ್ತಿದೆ. ಬ್ಯಾಂಕ್ ಅಧಿಕಾರಿಗಳು ರೈತರ ಸಾಲ ಮರುಪಾವತಿ ಸುವಂತೆ ಒತ್ತಡ ಹೇರುತ್ತಿದ್ದಾರೆ. ಬ್ಯಾಂಕ್ ನಿಂದ ಪಡೆದಿರುವ ಸಾಲದ ಟ್ರ್ಯಾಕ್ಟರ್ಗಳ ಹಣ ಪಾವತಿಗೆ ಧಮ್ಕಿ ಹಾಕುವ ಮೂಲಕ ಗೂಂಡಾ ವರ್ತನೆ ತೋರುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರಲ್ಲದೆ, ರೈತರ ಸಮಸ್ಯೆಗಳ ಕುರಿತು ಜ.22ರಂದು ಮೈಸೂರಿನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ರಾಜ್ಯ ಪ್ರಧಾನ ಕಾರ್ಯ ದರ್ಶಿ ಅತ್ತಹಳ್ಳಿ ಎಂ.ದೇವರಾಜು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಿರಗಸೂರು ಶಂಕರ್, ತಾಲೂಕು ಅಧ್ಯಕ್ಷ ಕುರುಬೂರು ಸಿದ್ದೇಶ್, ಮುಖಂಡರಾದ ಸುರೇಶ್, ಬಿ.ಪಿ.ಪರ ಶಿವಮೂರ್ತಿ, ರೇವಣ್ಣ, ರಂಗರಾಜು, ಮಹದೇವ, ಎಂ.ಪ್ರಸಾದ್, ಕೃಷ್ಣಪ್ಪ, ಸಂಜೀವ, ಗೌರಿ ಶಂಕರ, ಜಯಸ್ವಾಮಿ, ಅಪ್ಪಣ್ಣ, ವೀರೇಶ್, ಮಂಜು, ಧನಂಜಯ ಸೇರಿದಂತೆ ಹಲವು ರೈತ ಮುಖಂಡರಿದ್ದರು.