ಬೆಂಗಳೂರಿನ ಹುಳಿಮಾವು ಕೆರೆ ಕೋಡಿ ಒಡೆದು, ಸಾವಿರಾರು ಮನೆಗಳು ಜಲಾವೃತ
ಮೈಸೂರು

ಬೆಂಗಳೂರಿನ ಹುಳಿಮಾವು ಕೆರೆ ಕೋಡಿ ಒಡೆದು, ಸಾವಿರಾರು ಮನೆಗಳು ಜಲಾವೃತ

November 25, 2019

ಬೆಂಗಳೂರು, ನ. 24- ಬೆಂಗಳೂರು ದಕ್ಷಿಣದ ದೊಡ್ಡ ಕೆರೆ ಎಂದೇ ಖ್ಯಾತಿಗಳಿಸಿರುವ ಹುಳಿಮಾವು ಕೆರೆಯ ಕೋಡಿ ಒಡೆದು, ಸುತ್ತಮುತ್ತಲಿನ ಬಡಾ ವಣೆಗಳಿಗೆ ನೀರು ನುಗ್ಗಿದ್ದು, ಸಾವಿರಾರು ಮನೆಗಳು ಜಲಾವೃತವಾಗಿರುವ ಘಟನೆ ಭಾನುವಾರ ನಡೆದಿದೆ. ಇಲ್ಲಿನ ಬೊಮ್ಮನಹಳ್ಳಿ ವಲಯದ ಅರಕೆರೆ ವಾರ್ಡ್ ನಲ್ಲಿರುವ ಹುಳಿಮಾವು ಕೆರೆಯ ಕೋಡಿ ಒಡೆದು ಅಕ್ಷಯ ಗಾರ್ಡನ್ ಅಪಾರ್ಟ್‍ಮೆಂಟ್ ಸಮುಚ್ಚಯದ ಆಸು ಪಾಸಿನ ಪ್ರದೇಶಗಳು ಜಲಾವೃತವಾಗಿವೆ. ಸಮೀಪದ ತಗ್ಗು ಪ್ರದೇಶದಲ್ಲಿರುವ ಅನೇಕ ಮನೆಗಳಿಗೂ ನೀರು ನುಗ್ಗಿದ ಪರಿಣಾಮ 2 ಸಾವಿರಕ್ಕೂ ಹೆಚ್ಚು ಮನೆಗಳು ಜಲಾವೃತ ವಾಗಿವೆ. ರಸ್ತೆಗಳಲ್ಲಿ ನೀರು ಪ್ರವಾಹದ ರೀತಿಯಲ್ಲಿ ಹರಿಯುತ್ತಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ. ಹುಳಿಮಾವು ಕೆರೆ ಒಟ್ಟು 140 ಎಕರೆ ಇದ್ದು, ನೀರು ಸಹ ಹೆಚ್ಚಿನ ಪ್ರಮಾಣದಲ್ಲಿತ್ತು. ರವಿವಾರ ಇದ್ದಕ್ಕಿದ್ದಂತೆ ನೀರು ಮನೆಯೊಳಗೆ ನುಗ್ಗಿದ್ದರಿಂದ ಜನ ಪರದಾಡುವಂತಾಗಿದೆ. ನ್ಯೂನೋ ಆಸ್ಪತ್ರೆ, ಶಾಂತಿನಿಕೇತನ, ಕೃಷ್ಣನಗರ, ಹುಳಿಮಾವು ಸೇರಿದಂತೆ ಹಲವು ಲೇಔಟ್‍ಗಳಿಗೆ ನೀರು ನುಗ್ಗಿದೆ. ಅಷ್ಟೇ ಅಲ್ಲದೆ, ಕಾರು, ದ್ವಿಚಕ್ರ ವಾಹನಗಳು ಓಡಾಡದಂತಹ ಪರಿಸ್ಥಿತಿ ರಸ್ತೆಗಳಲ್ಲಿ ನಿರ್ಮಾಣವಾಗಿದ್ದರೆ, ಮನೆಯೊಳಗೆ ನೀರು ನುಗ್ಗಿದ್ದರಿಂದ ಅಡುಗೆ, ದಿನಸಿ ಸಾಮಾನು ನೀರಿನಲ್ಲಿ ಕೊಚ್ಚಿಹೋಗಿರುವ ದೃಶ್ಯ ಕಂಡಿತು.

 

Translate »