ವಿರಾಜಪೇಟೆ ತಾಲೂಕನ್ನೂ ಬಿಡಲಿಲ್ಲ ಪ್ರಕೃತಿಯ ಮುನಿಸು: ಅಂಬಟ್ಟಿ ಗ್ರಾಮದಲ್ಲಿ ಮಣ್ಣಿನಡಿ ಮರೆಯಾದ ಮನೆ
ಕೊಡಗು

ವಿರಾಜಪೇಟೆ ತಾಲೂಕನ್ನೂ ಬಿಡಲಿಲ್ಲ ಪ್ರಕೃತಿಯ ಮುನಿಸು: ಅಂಬಟ್ಟಿ ಗ್ರಾಮದಲ್ಲಿ ಮಣ್ಣಿನಡಿ ಮರೆಯಾದ ಮನೆ

September 6, 2018

ಪೊನ್ನಂಪೇಟೆ: ಕೊಡಗಿನಲ್ಲಿ ಕಳೆದ ತಿಂಗಳು ಸಂಭವಿಸಿದ ಪ್ರಕೃತಿಯ ‘ಮಹಾ ದುರಂತ’ದ ಛಾಯೆ ಜಿಲ್ಲೆಯಾದ್ಯಂತ ಪಸರಿಸಿದೆ.

ಜಿಲ್ಲೆಯ ಮಡಿಕೇರಿ ಮತ್ತು ಸೋಮವಾರಪೇಟೆ ತಾಲೂ ಕಿನಲ್ಲಿ ಜನಜೀವನ ಅಸ್ತವ್ಯಸ್ತಗೊಳಿಸುವಂತೆ ಪ್ರಕೃತಿಯ ಮಹಾದುರಂತ ಘಟಿಸಿದ್ದರಿಂದ ವಿರಾಜಪೇಟೆ ತಾಲೂಕಿನಲ್ಲಿ ಉಂಟಾದ ದುರಂತದ ಕಪ್ಪುಛಾಯೆ ಹೆಚ್ಚಿನ ಸುದ್ದಿಯಾಗದೆ ಸರಿಯಾಗಿ ಗಮನಸೆಳೆಯಲಿಲ್ಲ ಎಂಬ ಮಾತು ಕೇಳಿಬರುತ್ತಿದೆ.

ಕಳೆದ ತಿಂಗಳು ವಿರಾಜಪೇಟೆ ತಾಲೂಕಿನಲ್ಲಿ ಸಂಭವಿಸಿದ ಪ್ರಕೃತಿ ದುರಂತಗಳು ಇದೀಗ ತಡವಾಗಿ ಬೆಳಕಿಗೆ ಬರುತ್ತಿದ್ದು, ವಾಸದ ಮನೆಯೊಂದು ಭೂಕುಸಿತಕ್ಕೆ ಸಿಲುಕಿ ಮಣ್ಣಿನಲ್ಲಿ ಮರೆಯಾದ ಘೋರ ಘಟನೆ ವಿರಾಜಪೇಟೆ ಸಮೀಪದ ಅಂಬಟ್ಟಿ ಗ್ರಾಮದಲ್ಲಿ ನಡೆದಿದೆ. ಈ ಮನೆಯಲ್ಲಿ ವಾಸಿಸುತಿದ್ದ ಇಡೀ ಕುಟುಂಬ ಇದೀಗ ಸಮೀಪದಲ್ಲಿ ರುವ ಸಂಬಂಧಿಕರೊಬ್ಬರ ಮನೆಯಲ್ಲಿ ಆಶ್ರಯ ಪಡೆದಿದೆ. ಬೆಟ್ಟದ ತಪಲಿನಲ್ಲಿರುವ ಅಂಬಟ್ಟಿ ಗ್ರಾಮದ ಹಲವೆಡೆ ಭೂಕುಸಿತ ಉಂಟಾಗಿದ್ದು, ವ್ಯಾಪಕವಾದ ನಷ್ಟ ಉಂಟಾಗಿದೆ.

ಕಳೆದ ತಿಂಗಳ 16 ರಂದು ಈ ಭಾಗದಲ್ಲಿ ಸುರಿದ ಮಹಾಮಳೆಯ ಸಂದರ್ಭದಲ್ಲಿ ಅಂಬಟ್ಟಿ ಗ್ರಾಮದ ಕಿಕ್ಕರೆರ ಷರೀಫ್ ಅವರ ಮನೆ ಮುಂದೆ ದಿಢೀರನೇ ಭೂಕುಸಿತ ಸಂಭವಿಸಿತು. ಈ ವೇಳೆ ಒಂದು ದಿನ ಮೊದಲು ಸಂಭವಿಸಿದ್ದ ಭೂಕುಸಿತದಿಂದಾಗಿ ನೆಲಕಚ್ಚಿದ್ದ ಷರೀಫ್ ಅವರ ಕೊಟ್ಟಿಗೆಯನ್ನು ಸರಿಪಡಿಸುವಲ್ಲಿ ಮನೆಯವರು ನಿರತರಾಗಿದ್ದರು ಎನ್ನಲಾಗಿದೆ.

ಭಾರಿ ಶಬ್ದದೊಂದಿಗೆ ಉಂಟಾದ ಭೂಕುಸಿತವನ್ನು ಕೆಲಸನಿರತ ಮನೆಯವರು ಹೊರಗೆ ನಿಂತು ನೋಡುತ್ತಿದ್ದಂತೆ ಮುಂಭಾಗದಲ್ಲಿದ್ದ ಮಣ್ಣು ಪೂರ್ಣವಾಗಿ ಮನೆಯನ್ನು ಆವರಿಸಿಕೊಂಡಿತು ಎಂದು ಮನೆ ಮಾಲೀಕ ಷರೀಫ್ ಅವರು ಕಣ್ಣಾರೆ ಕಂಡ ಅಂದಿನ ಭಯಾನಕ ದೃಶ್ಯವನ್ನು ‘ಮೈಸೂರು ಮಿತ್ರ’ ನಿಗೆ ವಿವರಿಸಿದರು.

ಮಣ್ಣು ಮತ್ತು ಕೆಸರು ಮಿಶ್ರಿತ ನೀರು ರಭಸದಿಂದ ಮನೆಯ ಭಾಗಕ್ಕೆ ಪ್ರವೇಶಿ ಸತೊಡಗಿತು. ಭಾರಿ ಭೂಕುಸಿತದಿಂದಾಗಿ ಮನೆಯ ಒಂದು ಭಾಗದ ಗೋಡೆ ಸಂಪೂರ್ಣ ನೆಲಕಚ್ಚಿದಾಗ ಇಡೀ ಮನೆಯ ಪ್ರದೇಶವನ್ನು ಮಣ್ಣು ಅತಿಕ್ರಮಿಸಿಕೊಂಡಿತು ಎಂದು ಷರೀಫ್ ವಿವರಿಸಿದರು.ಹಗಲು ವೇಳೆ ಈ ದುರ್ಘಟನೆ ಸಂಭ ವಿಸಿದ್ದರಿಂದ ಮತ್ತು ಮನೆಯವರೆಲ್ಲರೂ ಹೊರಭಾಗದಲ್ಲಿ ಕೆಲಸನಿರತರಾದ್ದರಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ರಾತ್ರಿಯೇನಾದರು ಈ ಘಟನೆ ನಡೆದಿದ್ದರೆ ಮನೆಯಲ್ಲಿರುತ್ತಿದ್ದ ಇಬ್ಬರು ಮಕ್ಕಳು, ವೃದ್ಧೆ ಸೇರಿದಂತೆ 9 ಜನ ಮಣ್ಣು ಪಾಲಾಗಿತ್ತಿದ್ದರು ಎಂದು ಸಂತ್ರಸ್ತ ಕುಟುಂ ಬಕ್ಕೆ ಇದೀಗ ಆಶ್ರಯ ಕಲ್ಪಿಸಿರುವ ಪಕ್ಕದ ನಿವಾಸಿ, ನಿವೃತ್ತ ಯೋಧ ಕರ್ತೊರೆರ ಕೆ. ಮುಸ್ತಫಾ ಅವರು ಹೇಳಿದರು.

ಭಾರಿ ಭೂಕುಸಿತದಿಂದಾಗಿ ಅಂಬಟ್ಟಿಯ ಷರೀಫ್ ಅವರ ಮನೆ ಸಂಪೂರ್ಣ ಮಣ್ಣು ಪಾಲಾಗಿದೆ. ಮನೆಯಲ್ಲಿದ್ದ ಬೆಲೆ ಬಾಳುವ ವಸ್ತುಗಳೆಲ್ಲಾ ಮಣ್ಣಿನಡಿ ಸಿಲುಕಿಕೊಂಡಿವೆ. ಇದರಿಂದಾಗಿ ಇದೀಗ ಮಣ್ಣು ತೆಗೆದರೂ ಈ ಮನೆ ವಾಸಕ್ಕೆ ಯೋಗ್ಯವಿಲ್ಲದಂತಾಗಿದೆ. ಆದರೆ ಮನೆಯೊಳಗೆ ಮತ್ತು ಆವ ರಣದಲ್ಲಿ ಭಾರಿ ಪ್ರಮಾಣದಲ್ಲಿರುವ ಮಣ್ಣನ್ನು ತೆರವುಗೊಳಿಸುವುದು ಕಷ್ಟದ ಕೆಲಸ ವಾಗಿದೆ ಎನ್ನಲಾಗುತ್ತಿದೆ.

ಘಟನೆ ಸಂಭವಿಸುತ್ತಿದ್ದಂತೆ ಎಚ್ಚೆತ್ತುಕೊಂಡ ನೆರೆಕರೆಯವರು ಮತ್ತು ಗ್ರಾಮ ಸ್ಥರು ಕೂಡಲೇ ಸ್ಥಳಕ್ಕೆ ಧಾವಿಸಿ ಷರೀಫ್ ಅವರ ಕುಟುಂಬವನ್ನು ಸಮೀಪದ ಸಂಬಂಧಿಕರೊಬ್ಬರ ಮನೆಗೆ ಸ್ಥಳಾಂತರಿಸಿದರು. ಆದರೆ ಮನೆಯ ವಸ್ತುಗಳೆಲ್ಲಾ ಮಣ್ಣಿನ ಕೆಳಭಾಗದಲ್ಲಿದ್ದರಿಂದ ಅವುಗಳನ್ನು ಹೊರತೆಗೆಯಲು ಸಾಧ್ಯವಾಗಲಿಲ್ಲ. ಇದರಿಂದಾಗಿ ಷರೀಫ್ ಅವರಿಗೆ ಲಕ್ಷಾಂತರ ಮೊತ್ತದ ನಷ್ಟ ವುಂಟಾಗಿದೆ ಎಂದು ಅಂದಾಜಿಸಲಾಗಿದೆ.

ಷರೀಫ್ ಅವರ ಮನೆಯ ಸಮೀಪ ದಲ್ಲೇ ಗ್ರಾಮದ ಕೂವಲೆರ ಖದೀಜ ಎಂಬು ವರು ಮನೆ ನಿರ್ಮಾಣಕ್ಕಾಗಿ ಸಮತಟ್ಟುಗೊಳಿಸಲಾಗಿದ್ದ ನಿವೇಶನ ಪೂರ್ಣವಾಗಿ ಭೂಕುಸಿತಕ್ಕೆ ಒಳಗಾಗಿದೆ. ಅದ್ದರಿಂದ ಇಲ್ಲಿ ಮನೆ ನಿರ್ಮಾಣ ಸಾದ್ಯವಿಲ್ಲದಂತಾಗಿದೆ. ಘಟನೆ ನಡೆದ ನಂತರ ಗ್ರಾಮ ಲೆಕ್ಕಾಧಿ ಕಾರಿ ಮತ್ತು ಬಿಟ್ಟಂಗಾಲ ಗ್ರಾಪಂ ಪಿಡಿಓ. ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಆದರೆ ಘೋರ ದುರಂತ ನಡೆದಿದ್ದರೂ ಯಾವುದೇ ಜನಪ್ರತಿನಿಧಿಗಳಾಗಲಿ, ತಹಶೀಲ್ದಾರ್ ಆಗಲಿ ಇದುವರೆಗೂ ಭೇಟಿ ನೀಡದಿರುವುದು ಗ್ರಾಮಸ್ಥರ ಅಸಮಾಧಾನಕ್ಕೆ ಕಾರಣವಾಗಿದೆ.ಸೋಮವಾರದಂದು ದುದ್ದಿಯಂಡ ಹೆಚ್.ಮೊಯಿದು ಹಾಜಿ ಅವರ ನೇತೃತ್ವದಲ್ಲಿ ಗ್ರಾಮಕ್ಕೆ ತೆರಳಿದ ಕೆ.ಎಂ.ಎ. ತಂಡ ಸಂತ್ರಸ್ತ ಕುಟುಂಬಕ್ಕೆ ಸಾಂತ್ವನ ಹೇಳಿ ಧೈರ್ಯ ತುಂಬಿತು.

1961ರಲ್ಲೂ ಅಂಬಟ್ಟಿ ಗ್ರಾಮ ತತ್ತರಿಸಿತ್ತು

1961ರಲ್ಲಿ ಸಂಭವಿಸಿದ್ದ ಪ್ರಕೃತಿ ದುರಂತದಲ್ಲಿಯೂ ಅಂಬಟ್ಟಿ ಗ್ರಾಮ ಪೂರ್ಣವಾಗಿ ತತ್ತರಿಸಿತ್ತು. ಅದಾದ 57 ವರ್ಷಗಳ ನಂತರ ಮತ್ತೊಮ್ಮೆ ಅಂಬಟ್ಟಿ ಗ್ರಾಮ ಪ್ರಕೃತಿ ವಿಕೋಪವನ್ನು ಎದುರಿಸಿದೆ ಎಂದು ಹಿಂದಿನ ತಲೆಮಾರಿನವರಿಂದ ತಿಳಿದಿದ್ದೇನೆ.
1961ರಲ್ಲಿ ನಡೆದ ಘಟನೆ ಇದಕ್ಕಿಂತಲೂ ಘೋರವಾಗಿತ್ತು ಎನ್ನಲಾಗುತ್ತಿದೆ. ‘ಅಂಬಟ್ಟಿ ಬೆಟ್ಟ’ ಎಂದು ಕರೆಯಲಾಗುವ ಗ್ರಾಮದಂಚಿನ ಬೆಟ್ಟದ ಒಂದು ಭಾಗವೇ ಭೂಕುಸಿತಕ್ಕೆ ಒಳ ಗಾಗಿತ್ತು. ಅಂದಿನ ಪ್ರಕೃತಿ ದುರಂತದಲ್ಲಿ ನೂರಾರು ಎಕರೆ ತೋಟ ಮತ್ತು ಭತ್ತದ ಗದ್ದೆ ಮಣ್ಣು ಪಾಲಾಗಿತ್ತು. 50 ಜೋಡಿಗೂ ಹೆಚ್ಚಿನ ಜಾನುವಾರುಗಳು ಜೀವಂತ ಸಮಾಧಿಯಾಗಿದ್ದವು. ಆದರೆ ಆ ದುರ್ಘಟನೆಯೂ ಹಗಲು ವೇಳೆ ಸಂಭವಿಸಿದ್ದ ರಿಂದ ಯಾವುದೇ ಪ್ರಾಣಹಾನಿಯಾಗಿರಲಿಲ್ಲ. ಗ್ರಾಮದ ಹಿರಿಯರ ಪ್ರಕಾರ 1961ರಲ್ಲಿ ಸುರಿದ ಮಹಾಮಳೆಯನ್ನೆ ನೆನಪಿಸುವಂತೆ ಈ ಭಾರಿ ಮಹಾಮಳೆ ಸುರಿದಿದೆ. ಗ್ರಾಮದಲ್ಲಿ ಹಿಂದೆಂದೂ ಕಾಣದಿದ್ದ ಜಾಗಗಳಲ್ಲೂ ಜಲ ಹುಟ್ಟಿಕೊಂಡು ತೊರೆಗ ಳಂತೆ ಹರಿಯುತ್ತಿತ್ತು. ಇದೀಗ ಸಂತ್ರಸ್ತರಾಗಿರುವ ಷರೀಫ್ ಅವರ ಕುಟುಂಬಕ್ಕೆ ತುರ್ತು ಪುನರ್ವಸತಿ ಕಲ್ಪಿಸಲು ಸರಕಾರ ಕ್ರಮ ಕೈಗೊಳ್ಳಬೇಕು. –ಕರ್ತೊರೆರ ಕೆ. ಮುಸ್ತಫಾ, ನಿವೃತ್ತ ಯೋಧ

Translate »