ಪ್ರಕೃತಿ ವಿಕೋಪಕ್ಕೆ ಸಿಲುಕಿದ ಜಮೀನು ಕೃಷಿಯೋಗ್ಯ ಮಾಡಲು ಪ್ರಯತ್ನ
ಕೊಡಗು

ಪ್ರಕೃತಿ ವಿಕೋಪಕ್ಕೆ ಸಿಲುಕಿದ ಜಮೀನು ಕೃಷಿಯೋಗ್ಯ ಮಾಡಲು ಪ್ರಯತ್ನ

September 7, 2018

ಪೊನ್ನಂಪೇಟೆ: ಉತ್ತರ ಕೊಡಗಿ ನಲ್ಲಿ ಉಂಟಾಗಿರುವ ಭೀಕರ ಪ್ರಕೃತಿ ವಿಕೋ ಪದಿಂದ ಭೂಕುಸಿತ ಸೇರಿದಂತೆ ಅಪಾರ ಪ್ರಮಾಣದಲ್ಲಿ ಕಾಫಿ ತೋಟ ಮತ್ತು ಕೃಷಿ ಭೂಮಿಗಳು ಹಾನಿಯಾಗಿದ್ದು, ಅವುಗಳನ್ನು ಸೇನಾ ನೆರವು ಪಡೆದು ಕೃಷಿ ಯೋಗ್ಯವಾಗಿ ಮಾಡಲು ರಕ್ಷಣಾ ಸಚಿವರೊಂದಿಗೆ ಮಾತುಕತೆ ನಡೆಸಲಾಗುತ್ತಿದೆ. ಯಾವುದೇ ಕಾರಣಕ್ಕೂ ಇಲ್ಲಿನ ಸಂತ್ರಸ್ತ ಕೃಷಿಕರು ವಿಚಲಿತರಾಗಿ ಜಾಗವನ್ನು ಮಾರಾಟ ಮಾಡದಂತೆ ಕೊಡಗು ವನ್ಯ ಜೀವಿ ಸಂಘದ ಅಧ್ಯಕ್ಷ ಕರ್ನಲ್ ಚೆಪ್ಪುಡಿರ ಮುತ್ತಣ್ಣ ಕರೆ ನೀಡಿದ್ದಾರೆ.

ಪೊನ್ನಂಪೇಟೆಯ ಕೊಡಗು ವನ್ಯ ಜೀವಿ ಸಂಘದ ಕಛೇರಿಯಲ್ಲಿ ನಡೆದ ಪ್ರತಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಕೃತಿ ವಿಕೋಪಕ್ಕೆ ತುತ್ತಾಗಿ ಕೃಷಿ ಜಾಗದ ಮೇಲೆ ಗುಡ್ಡಗಳು ಕುಸಿದು ಬೃಹತ್ ಮಣ್ಣುಗಳು ತುಂಬಿಕೊಂಡಿದೆ. ಹಾಗೆಯೇ ತೋಟಗಳ ಹಲವು ಪದರುಗಳು ಸೀಳಿ ಕೊಚ್ಚಿ ಹೋಗಿದ್ದು, ಇಂತಹ ಜಾಗದಲ್ಲಿ ಮಣ್ಣುಗಳಲ್ಲಿ ಅಮ್ಲೀಯ ಗುಣವಿದ್ದು, ಅಲ್ಲಿ ತೋಟ ಅಥವಾ ಭತ್ತದ ಕೃಷಿ ಮಾಡಲು ಸಾಧ್ಯವಾಗುವುದಿಲ್ಲ. ಅಂತಹ ಜಾಗದ ಮೇಲ್ಪದರವನ್ನು ಕೃಷಿಯೋಗ್ಯವಾಗಿ ಮಾಡಲು ಬಹಳ ಕಷ್ಟವಿದೆ. ಆದರೆ, ಈ ನಿಟ್ಟಿನಲ್ಲಿ ಭಾರತೀಯ ಸೇನೆಯ ನೆರವು ಪಡೆದು ಸೇನೆಯ ಬೃಹತ್ಯಂತ್ರಗಳನ್ನು ಬಳಸಿ ಈ ಪ್ರದೇಶವನ್ನು ಕೃಷಿ ಯೋಗ್ಯ ಮಾಡಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ರಕ್ಷಣಾ ಸಚಿವರೊಂದಿಗೆ ಕೊಡಗು ವನ್ಯ ಜೀವಿ ಸಂಘ ಹಾಗೂ ನಿವೃತ್ತ ಸೈನಿಕ ಸಂಘದಿಂದ ವ್ಯವಹರಿಸಲಾಗುತ್ತಿದೆ. ಆದ್ದರಿಂದ ಕೃಷಿ ಭೂಮಿಯನ್ನು ಕಳೆದುಕೊಂಡಿರುವ ಕೃಷಿಕರು ವಿಚಲಿತರಾಗಿ ಅಥವಾ ದುಡುಕಿ ತಮ್ಮ ಆಸ್ತಿಗಳನ್ನು ಮಾರಾಟ ಮಾಡಬಾರದು ಎಂದು ಕರ್ನಲ್ ಮುತ್ತಣ್ಣ ಮನವಿ ಮಾಡಿದರು.

ಈಗಾಗಲೇ ಪ್ರಕೃತಿ ವಿಕೋಪದಿಂದ ಕೃಷಿ ಜಾಗ ಕಳೆದುಕೊಂಡಿರುವ ಹಾಗೂ ಹಾನಿಯಾಗಿರುವ ಪ್ರದೇಶದಲ್ಲಿ ಈ ಸಂಕಷ್ಟದ ದುರ್ಲಾಭವನ್ನು ಪಡೆದು ಕೆಲವು ರಿಯಲ್ ಎಸ್ಟೇಟ್ ಮಾಫಿಯಾ ಮತ್ತು ರಾಜಕಾರಣಿಗಳು ಇಲ್ಲಿನ ಜನರಲ್ಲಿ ಆತಂಕವನ್ನು ಸೃಷ್ಠಿಸಿ ಜಾಗ ಮಾರಾಟ ಮಾಡುವಂತೆ ಪ್ರೇರೆಪಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಇಂತಹವರ ಮಾತಿಗೆ ಮರುಳಾಗಿ ಖಾಸಗಿಯಾಗಲಿ ಸರ್ಕಾರಕ್ಕೆ ಆಗಲಿ ಮಾರಾಟ ಮಾಡ ಬಾರದೆಂದು ಕಿವಿ ಮಾತು ಹೇಳಿದರು.

ಈಗಾಗಲೇ ಬೃಹತ್ ರಸ್ತೆ ಹಾಗೂ ಮಣ್ಣಿನ ಕಾಮಗಾರಿಗಳನ್ನು ಮಾಡುವ ಯಂತ್ರೋಪಕರಣಗಳನ್ನು ತಯಾರಿಸುವ ಸಂಸ್ಥೆಯೊಂದಿಗೆ ಸಂಪರ್ಕಿಸಿ ಬೃಹತ್ ಯಂತ್ರ ಗಳನ್ನು ತಂದು ಕುಸಿತವಾಗಿರುವ ಮಣ್ಣನ್ನು ತೆರವುಗೊಳಿಸಿ ಕೃಷಿ ಯೋಗ್ಯವಾಗಿ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ. ಇಲ್ಲಿನ ಜನರು ಧೈರ್ಯದಿಂದಿರಬೇಕು. ಯಾವುದೇ ಕಾರಣಕ್ಕೆ ಗಾಬರಿಯಾಗದೆ ತಲಾತಲಾಂತರದಿಂದ ಬಳುವಳಿಯಾಗಿ ಬಂದಿರುವ ಜಾಗವನ್ನು ಮಾರಾಟ ಮಾಡ ಬಾರದು. ಜಾಗ ಮಾರಾಟ ಮಾಡಿ ಮುಂದೆ ಪಶ್ಚಾತ್ತಾಪ ಪಡದಂತೆ ಕರ್ನಲ್ ಮುತ್ತಣ್ಣ ಎಚ್ಚರಿಸಿದ್ದಾರೆ.

Translate »