ಮಂಡ್ಯ: ಮಂಡ್ಯ ಲೋಕಸಭಾ ಚುನಾವಣಾ ನಾಮಪತ್ರ ಹಿಂಪಡೆಯಲು ಇಂದು ಕಡೆಯ ದಿನವಾಗಿದ್ದು, ಐವರು ಅಭ್ಯರ್ಥಿಗಳು ನಾಮಪತ್ರವನ್ನು ಹಿಂಪಡೆದಿದ್ದು, ಒಟ್ಟು 22 ಮಂದಿ ಅಂತಿಮ ಕಣದಲ್ಲಿದ್ದಾರೆ.
ಅಂಬರೀಶ್ ಪತ್ನಿ ಎ. ಸುಮಲತಾ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದು, ಸುಮಲತಾ ಹೆಸರಿನ ಇನ್ನೂ ಮೂವರು ಅಭ್ಯರ್ಥಿಗಳು ಕಣದಲ್ಲೇ ಉಳಿದಿದ್ದಾರೆ. ಒಟ್ಟಾರೆ ನಾಲ್ವರು ಸುಮಲತಾ ಹೆಸರಿನವರು ಸ್ಪರ್ಧಿಸುತ್ತಿದ್ದು, ಅಂಬರೀಶ್ ಪತ್ನಿ ಸುಮ ಲತಾ ಅವರಿಗೆ ಕ್ರಮ ಸಂಖ್ಯೆ 20 ಮತ್ತು ಕಹಳೆ ಊದುವ ವ್ಯಕ್ತಿ ಚಿಹ್ನೆ ನೀಡಲಾಗಿದೆ.
ಚುನಾವಣಾ ಕಣದಲ್ಲಿ 22 ಅಭ್ಯರ್ಥಿ ಗಳು ಇರುವ ಕಾರಣ ಮತದಾನಕ್ಕೆ ಎರಡು ಮತಯಂತ್ರಗಳನ್ನು ಬಳಸಲಾಗುತ್ತದೆ. ಕ್ರಮ ಸಂಖ್ಯೆ 1 ಆಗಿರುವ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರ ಹೆಸರು ಮೊದಲನೇ ಮತಯಂತ್ರ ದಲ್ಲಿದ್ದರೆ, 20ನೇ ಕ್ರಮ ಸಂಖ್ಯೆ ಇರುವ ಸುಮಲತಾ ಅಂಬರೀಶ್ ಹೆಸರು 2ನೇ ಮತಯಂತ್ರದಲ್ಲಿ ಇರಲಿದೆ.
ಕರುನಾಡು ಪಕ್ಷದ ಅಭ್ಯರ್ಥಿ ಹೆಚ್.ಕೆ. ಕೃಷ್ಣ ಮತ್ತು ಪಕ್ಷೇತರ ಅಭ್ಯರ್ಥಿಗಳಾದ ಕೆ. ಉದಯಕುಮಾರ್, ಎನ್.ಪಿ. ಸುರೇಶ್ ಮತ್ತು ಜಿ.ಬಿ. ನವೀನ್ಕುಮಾರ್ ಇಂದು ನಾಮಪತ್ರ ಹಿಂಪಡೆದರು.