ಮೈಸೂರು: ಮೈಸೂರು ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ 4ನೇ ವಾರ್ಡಿನ ಕಾಂಗ್ರೆಸ್ ಅಭ್ಯರ್ಥಿ ಎಸ್.ಮಹೇಶ್ ಮೇಲೆ ಶುಕ್ರವಾರ ರಾತ್ರಿ ಹಲ್ಲೆ ನಡೆದಿದೆ. ಮತದಾನ ಮುಗಿದ ನಂತರ ಬೆಂಬಲಿಗರಾದ ರವಿ ಮತ್ತು ದಿನೇಶ್ರೊಂದಿಗೆ ವಾರ್ಡಿನ ಭೈರವೇಶ್ವರ ನಗರದಲ್ಲಿ ಚುನಾವಣೆ ಸಂಬಂಧ ಚರ್ಚಿಸುತ್ತಾ ಕುಳಿತಿದ್ದಾಗ ರಾತ್ರಿ 10.30 ಗಂಟೆ ವೇಳೆಗೆ ಬೈಕ್ನಲ್ಲಿ ಬಂದ ದೀಪಕ್ ಗೌಡ, ಮಲ್ಲಿಕಾರ್ಜುನ ಹಾಗೂ ಇತರರು ಏಕಾಏಕಿ ದಾಳಿ ನಡೆಸಿ ಹಲ್ಲೆ ಮಾಡಿ ಪರಾರಿಯಾದರು ಎಂದು ಮಹೇಶ್ ಮೇಟಗಳ್ಳಿ ಠಾಣೆಗೆ ದೂರು ನೀಡಿದ್ದಾರೆ.
ನನ್ನ ಮೂಗು, ತುಟಿಗೆ ಗಾಯವಾಗಿದ್ದು, ಮುಂದಿನ ಹಲ್ಲು ಮುರಿದಿದೆ ಎಂದು ಮಹೇಶ್ ನೀಡಿರುವ ದೂರಿನನ್ವಯ, ಪ್ರಕರಣ ದಾಖಲಿಸಿಕೊಂಡಿದ್ದು, ಕೆ.ಆರ್.ಆಸ್ಪತ್ರೆ ಯಲ್ಲಿ ಅವರನ್ನು ವೈದ್ಯಕೀಯ ತಪಾಸಣೆಗೊಳಪಡಿಸಿದ್ದಾರೆ. ಮತದಾನ ನಡೆಯುತ್ತಿದ್ದ ವೇಳೆ ಲೋಕನಾಯಕನಗರದ ಬೂತ್ನಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿತ್ತು. ಮತದಾನ ಮುಗಿದ ನಂತರ ಗುಂಪು ಸಂಚು ಹೂಡಿ ತನ್ನ ಮೇಲೆ ಹಲ್ಲೆ ನಡೆಸಿದೆ ಎಂದು ಮಹೇಶ್ ಆರೋಪಿಸಿದ್ದಾರೆ.