ನಾವು ಮೈತ್ರಿ ಸರ್ಕಾರ ಬೀಳಿಸಲು ಹೋಗಿಲ್ಲ, ಕಾಂಗ್ರೆಸ್‍ನವರೇ ಕಚ್ಚಾಡುತ್ತಿದ್ದಾರೆ
ಮೈಸೂರು

ನಾವು ಮೈತ್ರಿ ಸರ್ಕಾರ ಬೀಳಿಸಲು ಹೋಗಿಲ್ಲ, ಕಾಂಗ್ರೆಸ್‍ನವರೇ ಕಚ್ಚಾಡುತ್ತಿದ್ದಾರೆ

September 20, 2018

ಬೆಂಗಳೂರು: ಸಮ್ಮಿಶ್ರ ಸರ್ಕಾರವನ್ನು ಬೀಳಿಸೋಕೆ ನಾವು ಹೋಗಿಲ್ಲ. ಕಾಂಗ್ರೆಸ್ ನಾಯಕರೇ ಗುಂಪು ಮಾಡಿಕೊಂಡು ಕಚ್ಚಾಡುತ್ತಿದ್ದಾರೆ ಎಂದು ಬಿಜೆಪಿಯ ಹಿರಿಯ ಸದಸ್ಯ ಹಾಗೂ ಶಾಸಕ ಶ್ರೀರಾಮುಲು ಇಂದಿಲ್ಲಿ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‍ನಲ್ಲಿ ವರ್ಗಾವಣೆ ದಂಧೆ ಹಣದ ಕಾರಣಕ್ಕೆ ಅಸಮಾಧಾನ ಉಂಟಾಗಿದೆ. ಸಮ್ಮಿಶ್ರ ಸರ್ಕಾರ ಜನರ ನಂಬಿಕೆ, ವಿಶ್ವಾಸ ಕಳೆದುಕೊಂಡಿದೆ. ಅವರು ಭಿನ್ನಮತ ಸೃಷ್ಟಿಸಿಕೊಂಡು ಬಿಜೆಪಿ ಮೇಲೆ ಆರೋಪ ಹೊರಿಸುತ್ತಿದ್ದಾರೆ.

ದೇವರ ಮೇಲೆ ಆಣೆ ಮಾಡಿ ಹೇಳ್ತೀನಿ. ನಾನು ಕಾಂಗ್ರೆಸ್ ಹಾಗೂ ಜೆಡಿಎಸ್‍ನ ಯಾವ ಶಾಸಕರನ್ನೂ ಸಂಪರ್ಕ ಮಾಡಿಲ್ಲ. ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ತಾನಾಗೇ ಬಿದ್ದರೆ ನಾವು ಆಡಳಿತ ನಡೆಸುತ್ತೇವೆ ಎಂದು ಶ್ರೀರಾಮುಲು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ವರ್ಗಾವಣೆ ದಂಧೆ ಮತ್ತಿತರೆ ಕಾರಣಗಳಿಗಾಗಿ ಅವರಲ್ಲಿ ಕಚ್ಚಾಟ ಆರಂಭವಾಗಿದೆ. ಅವರು ಎಲ್ಲಿಗಾದರೂ ಹೋಗಲಿ. ಆ ಬಗ್ಗೆ ನಾವು ತಲೆಕಡಿಸಿಕೊಳ್ಳುವುದಿಲ್ಲ. ಕಾಂಗ್ರೆಸ್ ಶಾಸಕರು ದೆಹಲಿಗೆ ಹೋದರೆ ಅದಕ್ಕೆ ನಾವು ಜವಾಬ್ದಾರರಲ್ಲ. ಅವರಾಗಿಯೇ ಸರ್ಕಾರವನ್ನು ಅಸ್ಥಿರಗೊಳಿಸುವ ಕೆಲಸ ಮಾಡುತ್ತಿದ್ದು, ಅದನ್ನು ಬಿಜೆಪಿಯ ಮೇಲೆ ಹೊರಿಸುತ್ತಿದ್ದಾರೆ. ನಾವು ಇದನ್ನು ದೂರದಿಂದ ನೋಡುತ್ತಿದ್ದೇವೆ ಅಷ್ಟೇ. ನಾವು ಸರ್ಕಾರ ಕೆಡವಿ ನಮ್ಮ ಸರ್ಕಾರ ರಚಿಸಲು ಹೋಗುವುದಿಲ್ಲ ಸರ್ಕಾರ ತಾನಾಗಿಯೇ ಬಿದ್ದರೆ ಸುಮ್ಮನಿರುವುದಿಲ್ಲ ಎಂದರು.

ಸಮ್ಮಿಶ್ರ ಸರ್ಕಾರವು ಯಾರ ಮಾತನ್ನೂ ಕೇಳುವ ಪರಿಸ್ಥಿತಿಯಲ್ಲಿಲ್ಲ, ರಾಗಿ ಕಾಳಿನಷ್ಟು ಸರ್ಕಾರದ ಮೇಲೆ ಜನರಿಗೆ ನಂಬಿಕೆ ಇಲ್ಲ. ಜೆಡಿಎಸ್ ಒಂದು ಗುಂಪು, ಕಾಂಗ್ರೆಸ್ ಒಂದು ಗುಂಪು ಮಾಡಿಕೊಂಡಿದೆ. ಸರ್ಕಾರದ ತಪ್ಪುಗಳನ್ನು ಬಿಜೆಪಿ ಮೇಲೆ ಹೊರಿಸಿ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ನಾವೇನಾದರೂ ಯಾರನ್ನಾದರೂ ಪಕ್ಷಕ್ಕೆ ಸೆಳೆದ ಕುರಿತು ದಾಖಲೆಗಳಿದ್ದರೆ ತನ್ನಿ ಎಂದು ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರಿಗೆ ಸವಾಲೆಸೆದರು.

Translate »