ಜುಲೈ 31ರ ನಂತರ ಸರ್ಕಾರ ಸ್ತಬ್ಧ
ಮೈಸೂರು

ಜುಲೈ 31ರ ನಂತರ ಸರ್ಕಾರ ಸ್ತಬ್ಧ

July 26, 2019

ಬೆಂಗಳೂರು, ಜು.25(ಕೆಎಂಶಿ)-ಧನ ವಿನಿಯೋಗ ಮಸೂದೆ ಇದೇ 31ರೊಳಗಾಗಿ ಅಂಗೀಕಾರಗೊಳ್ಳದೆ ಇದ್ದರೆ, ಸರ್ಕಾರ ಸ್ತಬ್ಧಗೊಳ್ಳುತ್ತದೆ ಎಂಬ ಆತಂಕವನ್ನು ವಿಧಾನಸಭಾ ಧ್ಯಕ್ಷ ರಮೇಶ್‍ಕುಮಾರ್ ವ್ಯಕ್ತಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧನ ವಿನಿಯೋಗ ಮಸೂದೆ ಅಂಗೀಕಾರಗೊಳ್ಳದೆ ಇದ್ದರೆ, ಸರ್ಕಾರಿ ನೌಕರರಿಗೆ ವೇತನ ನೀಡುವುದು ಸೇರಿದಂತೆ ಹಲವಾರು ಕಾರ್ಯಗಳಿಗೆ ಅಡೆತಡೆ ಉಂಟಾಗುತ್ತದೆ.

ಯಾವುದೇ ಸರ್ಕಾರ ಬಂದರೂ ಸರಿ ಮೊದಲು ಅಧಿವೇಶನ ಕರೆದು ಧನವಿನಿಯೋಗ ಮಸೂದೆಯನ್ನು ಪಾಸ್ ಮಾಡಿ ಕೊಳ್ಳಬೇಕು ಎಂದು ನಾನು ಸಲಹೆ ನೀಡಿದ್ದೇನೆ. ಈ ರೀತಿಯ ಅನಿವಾರ್ಯ ಪರಿಸ್ಥಿತಿ ಬಂದೊದಗಿರುವುದು ವಿಷಾದನೀಯ ಎಂದರು. ಶಾಸಕರ ರಾಜೀನಾಮೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರಿಯಿಸಿದ ಅವರು, ನಿಯಮಗಳ ಪ್ರಕಾರ ರಾಜೀನಾಮೆ ನೀಡಿದವರು ವಿಚಾರಣೆಗೆ ಬರಬೇಕು.

ಈಗಾಗಲೇ ನೋಟಿಸ್ ಜಾರಿ ಮಾಡಿ ವಿಚಾರಣೆಗೆ ಕರೆದಿದ್ದೆ. ಅವರು ವಿಚಾರಣೆಗೆ ಬಂದಿಲ್ಲ. ಮತ್ತೆ ಮತ್ತೆ ನೋಟಿಸ್ ಕೊಟ್ಟು ವಿಚಾರಣೆಗೆ ಕರೆಯಲು ನನಗೆ ಬೇರೆ ಕೆಲಸ ಇಲ್ಲವಾ…? ಹಾಗಾಗಿ ವಿಚಾರಣೆ ಈಗಾಗಲೇ ಮುಗಿದಿದೆ. ಮತ್ತೆ ನೋಟಿಸ್ ಕೊಡುವ ಅಗತ್ಯವಿಲ್ಲ ಎಂದು ಹೇಳಿದರು.

ರಾಜೀನಾಮೆ ನೀಡಿದ ಶಾಸಕರ ಪ್ರಕರಣದಲ್ಲಿ ಯಾವುದೇ ತೀರ್ಪು ನೀಡುವ ಅಧಿಕಾರವನ್ನು ಸುಪ್ರೀಂಕೋರ್ಟ್ ಸ್ಪೀಕರ್ ಅವರ ವಿವೇಚನೆಗೆ ಬಿಟ್ಟಿದೆ. ನ್ಯಾಯಾಲಯದ ವಿಶ್ವಾಸ ಉಳಿಸಿಕೊಳ್ಳುವಂತೆ ಕೆಲಸ ನಿರ್ವಹಿಸುತ್ತೇನೆ ಎಂದು ಅವರು ಭರವಸೆ ನೀಡಿದರು. ಪ್ರಸ್ತುತ ನಡೆಯುತ್ತಿರುವ ವಿದ್ಯಮಾನ ಗಳನ್ನು ಗಮನಿಸಿದರೆ ರಾಜ್ಯದ ಧನ ವಿನಿಯೋಗ ವಿಧೇಯಕ ಸಂಸತ್‍ನಲ್ಲಿ ಅಂಗೀಕಾರ ಪಡೆಯುವ ಸಾಧ್ಯತೆ ಹೆಚ್ಚಾಗಿ ಕಂಡುಬರುತ್ತಿದೆ. ಆಗಸ್ಟ್ 1ರಿಂದ ಸರ್ಕಾರಿ ನೌಕರರ ವೇತನ, ಸರ್ಕಾರಿ ಕಾರ್ಯಕ್ರಮಗಳಿಗೆ ಅನುದಾನ ಸೇರಿದಂತೆ ರಾಜ್ಯ ಸರ್ಕಾರದ ಯಾವುದೇ ಹಣಕಾಸಿನ ವ್ಯವಹಾರ ನಡೆಸಲು ಧನ ವಿನಿಯೋಗ ವಿಧೇಯಕಕ್ಕೆ ವಿಧಾನ ಮಂಡಲದ ಉಭಯ ಸದನದ ಅನುಮೋದನೆ ಬೇಕಾಗಿದೆ. ಉಸ್ತುವಾರಿ ಮುಖ್ಯಮಂತ್ರಿ ಕುಮಾರಸ್ವಾಮಿ ಬಜೆಟ್ ಮಂಡನೆ ವೇಳೆ ಜು.31ರವರೆಗೆ ಮಾತ್ರ ಲೇಖಾನುದಾನ ಪಡೆದಿದ್ದರು. ಅಲ್ಲಿಯ ವರೆಗೆ ಸರ್ಕಾರದ ಆಡಳಿತ ಯಂತ್ರ ನಡೆಸಲು ತೊಂದರೆ ಯಾಗುವುದಿಲ್ಲ. ಒಂದು ವೇಳೆ ಜುಲೈ 31ರೊಳಗೆ ರಾಷ್ಟ್ರಪತಿ ಆಳ್ವಿಕೆ ಜಾರಿಯಾದರೆ ರಾಜ್ಯಪಾಲರು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿ, ಸಂಸತ್‍ನಲ್ಲಿ ರಾಜ್ಯದ ಧನ ವಿನಿ ಯೋಗ ವಿಧೇಯಕ ಮಂಡಿಸಿ ಒಪ್ಪಿಗೆ ಪಡೆಯಬೇಕಾಗುತ್ತದೆ.

Translate »