ಓರ್ವ ಸಾವು, ಮತ್ತೋರ್ವ ಪಾರು
ನಂಜನಗೂಡು,ಮಾ. 6(ರವಿ)-ನಿರ್ಜನ ಪ್ರದೇಶದ ರಸ್ತೆ ಬದಿ ಪಾನಗೋಷ್ಠಿ ನಡೆಸುತ್ತಿದ್ದ ಯುವಕನೊಬ್ಬನ ಮೇಲೆ ದುಷ್ಕರ್ಮಿಗಳು ಮಾರಕಾಸ್ತ್ರ ಗಳಿಂದ ಹಲ್ಲೆ ನಡೆಸಿ ಹತ್ಯೆಗೈದ ನಂತರ ಶವವನ್ನು ನಾಲೆಗೆ ಎಸೆದಿ ರುವ ಘಟನೆ ನಂಜನಗೂಡು ತಾಲೂಕು ಕಲ್ಕುಂದ ಗ್ರಾಮದ ಹೊರವಲಯದಲ್ಲಿ ಗುರುವಾರ ರಾತ್ರಿ ನಡೆದಿದೆ.
ಹತ್ಯೆಗೀಡಾದ ಯುವಕನ ಜೊತೆ ಪಾನಗೋಷ್ಠಿ ನಡೆಸುತ್ತಿದ್ದ ಆತನ ಸ್ನೇಹಿತ ದುಷ್ಕರ್ಮಿಗಳ ಹಲ್ಲೆ ಯಿಂದ ತೀವ್ರವಾಗಿ ಗಾಯಗೊಂಡನಾದರೂ, ಅವ ರಿಂದ ತಪ್ಪಿಸಿಕೊಂಡು ಪ್ರಾಣ ಉಳಿಸಿಕೊಂಡಿದ್ದಾನೆ.
ವಿವರ: ತಾಲೂಕಿನ ತಗಡೂರು ಗ್ರಾಮದ ಮನೋಜ್(20) ಮತ್ತು ವಿಜಯಕುಮಾರ್(20) ಅವರುಗಳು ಗುರುವಾರ ರಾತ್ರಿ ಸೋನಹಳ್ಳಿ ಬಳಿಯಿರುವ ವೈನ್ ಸ್ಟೋರ್ನಲ್ಲಿ ಮದ್ಯ ಖರೀದಿಸಿ, ಕಲ್ಕುಂದ ಗ್ರಾಮದ ಹೊರವಲಯದ ರಸ್ತೆ ಬದಿ ಕುಳಿತು ಪಾನಗೋಷ್ಠಿ ನಡೆಸುತ್ತಿದ್ದರು ಎಂದು ಹೇಳಲಾಗಿದೆ. ಈ ವೇಳೆ ಅಲ್ಲಿಗೆ ಇಬ್ಬರು ಅಪರಿಚಿತ ಯುವಕರು ಬಂದಿದ್ದು, ಇವರಿಬ್ಬರನ್ನು ಮಾತನಾಡಿಸಿ, ಮೊಬೈಲ್ ನಂಬರ್ ಗಳನ್ನು ವಿನಿಮಯ ಮಾಡಿಕೊಂಡಿದ್ದಾರೆ. ಪರಸ್ಪರ ಪರಿಚಯ ಮಾಡಿಕೊಂಡು ಚೆನ್ನಾಗಿಯೇ ಮಾತನಾಡುತ್ತಿದ್ದ ದುಷ್ಕರ್ಮಿಗಳು, ಇದ್ದಕ್ಕಿದ್ದಂತೆ ಯಾವುದೋ ವಿಷಯ ವನ್ನು ಪ್ರಸ್ತಾಪಿಸಿ ತಗಾದೆಗಿಳಿದಿದ್ದಾರೆ. ಹಠಾತ್ತನೇ ಮಾರಕಾಸ್ತ್ರಗಳಿಂದ ಮನೋಜ್ ಮತ್ತು ವಿಜಯಕುಮಾರ್ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದು, ಈ ವೇಳೆ ತನ್ನ ಮೇಲೆ ಹಲ್ಲೆಯಾಗಿದ್ದರೂ ಸ್ಥಳದಿಂದ ಓಡಿ ಹೋಗಿ ಪ್ರಾಣ ಉಳಿಸಿಕೊಳ್ಳುವಲ್ಲಿ ವಿಜಯ ಕುಮಾರ್ ಸಫಲನಾಗಿದ್ದಾನೆ. ಗ್ರಾಮಕ್ಕೆ ತೆರಳಿ ಮನೋಜ್ ಮೇಲೆ ಮಾರಣಾಂತಿಕ ಹಲ್ಲೆಯಾಗಿದೆ ಎಂಬ ವಿಷಯವನ್ನು ಅವರ ಕುಟುಂಬದವರಿಗೆ ವಿಜಯಕುಮಾರ್ ತಿಳಿಸಿದ್ದಾನೆ. ಅವರು ಸ್ಥಳಕ್ಕೆ ದೌಡಾಯಿಸಿ ರಾತ್ರಿಯಿಡೀ ಹುಡುಕಾಟ ನಡೆಸಿದರೂ ಮನೋಜ್ನ ಸುಳಿವು ಸಿಕ್ಕಿಲ್ಲ. ಆದರೆ, ಇಂದು ಬೆಳಿಗ್ಗೆ ಕಲ್ಕುಂದ ಗ್ರಾಮದ ಬಳಿ ಕಬಿನಿ ಬಲದಂಡೆ ನಾಲೆಯಲ್ಲಿ ಮನೋಜ್ನ ಮೃತದೇಹ ಪತ್ತೆಯಾಗಿದೆ. ಘಟನಾ ಸ್ಥಳಕ್ಕೆ ನಂಜನಗೂಡು ಡಿವೈಎಸ್ಪಿ ಪ್ರಭಾಕರರಾವ್ ಶಿಂಧೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂಬಂಧ ಬಿಳಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.