ಪಾಂಡವಪುರ: ಚಿಕ್ಕಾಡೆ ಜಿಪಂ ಸದಸ್ಯ ತಿಮ್ಮೇಗೌಡ ಅವರ ಮನೆಗೆ ಮಂಗಳವಾರ ನಸುಕಿನಲ್ಲೇ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ದಾಖಲಾತಿ ಪರಿಶೀಲನೆ ನಡೆಸಿದರು.
ಪಟ್ಟಣದ ಡಾಲರ್ಸ್ ಕಾಲೋನಿಯಲ್ಲಿರುವ ತಿಮ್ಮೇಗೌಡರ ಮನೆಗೆ 8 ಅಧಿಕಾರಿಗಳ ತಂಡ ಬೆಳಿಗ್ಗೆ 6.30ರಲ್ಲಿ ದಾಳಿ ನಡೆಸಿತು. ಸಾಮಿಲ್, ಮರದ ಅಂಗಡಿ ಮತ್ತು ಪೆಟ್ರೋಲ್ ಬಂಕ್ ಮಾಲೀಕರಾಗಿರುವ ತಿಮ್ಮೇಗೌಡ ಸಚಿವ ಸಿ.ಎಸ್.ಪುಟ್ಟರಾಜು ಅವರ ಪರಮಾಪ್ತರು.
ತಿಮ್ಮೇಗೌಡರ ಮೊದಲ ಪುತ್ರ ಚೇತನ್ ಜತೆ ಇಬ್ಬರು ಅಧಿಕಾರಿಗಳು ಮರದ ಅಂಗಡಿ, ಸಾಮಿಲ್ಗೆ ತೆರಳಿ ಪರಿಶೀಲನೆ ನಡೆಸಿದರೆ, ಮತ್ತೊಬ್ಬ ಪುತ್ರ ಅನಿಲ್ ಜತೆ ಇನ್ನಿಬ್ಬರು ಅಧಿಕಾರಿಗಳು ಪೆಟ್ರೋಲ್ ಬಂಕ್ ಪರಿಶೀಲಿಸಿದರು. ಸಂಜೆ 4.15ಕ್ಕೆ ಐಟಿ ಅಧಿಕಾರಿಗಳು ವಾಪಸಾದರು.
`ಐಟಿ ಅಧಿಕಾರಿಗಳು ಬೆಳಿಗ್ಗೆ ಮನೆಗೆ ಬಂದವರೇ ನನ್ನ ಮೊಬೈಲ್ ವಶಕ್ಕೆ ಪಡೆದುಕೊಂಡರು. ಸಂಜೆವ ರೆಗೂ ಮನೆ, ಸಾಮಿಲ್, ಪೆಟ್ರೊಲ್ ಬಂಕ್ಗಳಲ್ಲಿ ದಾಖಲಾತಿ ಪರಿಶೀಲಿಸಿದರು. ನನ್ನ ಎಲ್ಲಾ ವ್ಯವಹಾರ ಸರಿಯಾಗಿ ದ್ದರಿಂದ ಐಟಿ ಅಧಿಕಾರಿಗಳು ಬರಿಗೈಯಲ್ಲಿ ವಾಪಸಾದರು ಎಂದು’ ತಿಮ್ಮೇಗೌಡ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.