ಈ ದಸರೆ ವೇಳೆ ನಿಮ್ಮ ವಾಹನವನ್ನು ಪುರಭವನ ಆವರಣದಲ್ಲಿ ನಿಲ್ಲಿಸಬಹುದು
ಮೈಸೂರು

ಈ ದಸರೆ ವೇಳೆ ನಿಮ್ಮ ವಾಹನವನ್ನು ಪುರಭವನ ಆವರಣದಲ್ಲಿ ನಿಲ್ಲಿಸಬಹುದು

September 28, 2018

ಮೈಸೂರು: ನಾಡಹಬ್ಬ ದಸರಾ ಮಹೋತ್ಸವದ ವೇಳೆ ಅರಮನೆಯ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಬರುವ ಪ್ರವಾಸಿಗರು ಹಾಗೂ ಸಾರ್ವಜನಿಕರ ವಾಹನ ಪಾರ್ಕಿಂಗ್ ಸಮಸ್ಯೆಯನ್ನು ನೀಗಲು ಮೈಸೂರು ನಗರ ಪಾಲಿಕೆ ಮುಂದಾಗಿದ್ದು, ಪುರಭವನ ಆವರಣದಲ್ಲಿ ನಿರ್ಮಾಣ ಹಂತದಲ್ಲಿರುವ ಮಲ್ಟಿ ಲೆವೆಲ್ ಪಾರ್ಕಿಂಗ್ ಕಟ್ಟಡದಲ್ಲಿ ಸದ್ಯಕ್ಕೆ ವಾಹನ ನಿಲುಗಡೆಗೆ ಅವಕಾಶ ನೀಡಲು ನಿರ್ಧರಿಸಲಾಗಿದೆ.

2011ರಲ್ಲಿ ಪುರಭವನದ ಆವರಣದಲ್ಲಿ 18.28 ಕೋಟಿ ರೂ. ವೆಚ್ಚದಲ್ಲಿ ಮಲ್ಟಿಲೆವೆಲ್ ಪಾರ್ಕಿಂಗ್ ಕಟ್ಟಡ ನಿರ್ಮಾಣ ಆರಂಭವಾಗಿತ್ತು. ಹೈದರಾಬಾದ್ ಮೂಲದ ಛಾಬ್ರಿಯಾ ಅಸೋಸಿಯೇಟ್ಸ್ ಸಂಸ್ಥೆಗೆ ಇದರ ಗುತ್ತಿಗೆ ನೀಡಲಾಗಿತ್ತು. 2011ರ ಎಪ್ರಿಲ್ 29ರಂದು ಇದಕ್ಕೆ ಗುದ್ದಲಿ ಪೂಜೆ ನೆರವೇರಿಸಲಾಗಿತ್ತು. ನಿಯಮಾನುಸಾರ ಕಟ್ಟಡವನ್ನು 2012ರ ಏಪ್ರಿಲ್ ತಿಂಗಳಲ್ಲಿ ಪೂರ್ಣಗೊಳಿಸಬೇಕಾಗಿತ್ತು. ಆದರೆ ನಿಗದಿತ ಸಮಯದಲ್ಲಿ ಕಾಮಗಾರಿ ಪೂರ್ಣಗೊಳಿಸದೆ ಇರುವುದರಿಂದ ಗುತ್ತಿಗೆ ಪಡೆದಿದ್ದ ಕಂಪನಿಯನ್ನು ಕಪ್ಪುಪಟ್ಟಿಗೆ ನಗರ ಪಾಲಿಕೆ ಸೇರಿಸಿದೆ. ಈ ಹಿನ್ನೆಲೆಯಲ್ಲಿ ಗುತ್ತಿಗೆದಾರ ನ್ಯಾಯಾಲಯದ ಮೆಟ್ಟಿಲೇರಿದ್ದು, ಮಲ್ಟಿಲೆವೆಲ್ ಪಾರ್ಕಿಂಗ್ ಕಟ್ಟಡದ ಕಾಮಗಾರಿ ಸ್ಥಗಿತಗೊಂಡಿದೆ. ಈಗ ದಸರಾ ವೇಳೆ ತಾತ್ಕಾಲಿಕವಾಗಿ ಮಲ್ಟಿ ಲೆವೆಲ್ ಪಾರ್ಕಿಂಗ್ ಕಟ್ಟಡ ಬಳಸಿಕೊಳ್ಳಲು ಉದ್ದೇಶಿಸಲಾಗಿದೆ.

ನೆರವಾಗಲಿದೆ: 6000 ಚದರ ಅಡಿ ವಿಸ್ತೀರ್ಣದಲ್ಲಿ ಈ ಪಾರ್ಕಿಂಗ್ ಕಟ್ಟಡ ನಿರ್ಮಿಸಲಾಗು ತ್ತಿದೆ. 3 ಮಹಡಿಗೆ ಪಿಲ್ಲರ್‌ಗಳನ್ನು ಬಳಸಿ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. ಇದರಲ್ಲಿ ಸುಮಾರು 700 ಕಾರು ಹಾಗೂ 500 ದ್ವಿಚಕ್ರ ವಾಹನಗಳಿಗೆ ಅವಕಾಶ ಕಲ್ಪಿಸಲಾಗುತ್ತದೆ.

ಈ ಕಟ್ಟಡದ ಮೇಲ್ಭಾಗದಲ್ಲಿ ಬಯಲು ರಂಗಮಂದಿರ ನಿರ್ಮಿಸಲಾಗಿದೆ. ಬಯಲು ರಂಗಮಂದಿರದ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ದ್ವಿಚಕ್ರ ವಾಹನ ನಿಲುಗಡೆ ಕಟ್ಟಡದ ಕಾಮಗಾರಿಗೆ ಕೇವಲ ಪಿಲ್ಲರ್‍ಗಳನ್ನಷ್ಟೇ ಅಳವಡಿಸಲಾಗಿದ್ದು, ತಡೆಗೋಡೆ ಸೇರಿದಂತೆ ಯಾವುದೇ ಕೆಲಸ ಪೂರ್ಣಗೊಂಡಿಲ್ಲ. ಜೊತೆಗೆ ಮಲ್ಟಿ ಲೆವೆಲ್ ಕಟ್ಟಡದಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡಲು ಹಾಗೂ ನಿಲುಗಡೆಯ ಸ್ಥಳದಿಂದ ವಾಪಸ್ಸು ಕೊಂಡೊಯ್ಯಲು ರ್ಯಾಂಪ್ ವ್ಯವಸ್ಥೆಯನ್ನು ಮಾಡಲಾಗಿದೆ.

ಕಳೆದ ಸಾಲಿನ ದಸರಾ ಮಹೋತ್ಸವ ವೇಳೆ ಪುರಭವನ ಆವರಣದಲ್ಲಿ ಅಪೂರ್ಣಗೊಂಡಿರುವ ಈ ಮಲ್ಟಿ ಲೆವೆಲ್ ಪಾರ್ಕಿಂಗ್ ಕಟ್ಟಡದಲ್ಲಿಯೇ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿತ್ತು. ನವರಾತ್ರಿಯ ವೇಳೆ ಅರಮನೆ ಹಾಗೂ ಸುತ್ತಮುತ್ತಲ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಿಸಲು ಬಂದವರು ಇಲ್ಲಿ ವಾಹನ ನಿಲುಗಡೆ ಮಾಡಿದ್ದರಿಂದ ವಾಹನ ನಿಲುಗಡೆ ಸಮಸ್ಯೆ ನಿವಾರಣೆಯಾಗಿತ್ತು.

ಈ ಸಾಲಿನ ದಸರಾ ವೇಳೆಯೂ ಇದನ್ನು ಬಳಸಿಕೊಳ್ಳಲಾಗುತ್ತಿದೆ. ನವರಾತ್ರಿಯ ವೇಳೆ ಅರಮನೆಯ ಆವರಣ, ದೊಡ್ಡಗಡಿಯಾರ, ಪುರಭವನ, ಕುಪ್ಪಣ್ಣ ಪಾರ್ಕ್‍ನಲ್ಲಿನ ಫಲಪುಷ್ಪ ಪ್ರದರ್ಶನ, ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲಿ ನಡೆಯುವ ಆಹಾರ ಮೇಳ, ಜೆ.ಕೆ.ಮೈದಾನದಲ್ಲಿ ನಡೆಯುವ ರೈತ, ಮಹಿಳಾ ಹಾಗೂ ಮಕ್ಕಳ ದಸರಾ, ಜಗನ್ಮೋಹನ ಅರಮನೆಯಲ್ಲಿ ನಡೆಯುವ ಲಕ್ಷ ಗೊಂಬೆ ಪ್ರದರ್ಶನ ಸೇರಿದಂತೆ ವಿವಿಧೆಡೆ ನಡೆಯುವ ಕಾರ್ಯಕ್ರಮಗಳಿಗೆ ಬರುವ ಪ್ರವಾಸಿಗರು ತಮ್ಮ ವಾಹನ ನಿಲುಗಡೆಗೆ ಪರದಾಡುವ ಸ್ಥಿತಿ ನಿರ್ಮಾಣವಾಗುತ್ತಿತ್ತು. ಈ ನಡುವೆ ಸಯ್ಯಾಜಿರಾವ್ ರಸ್ತೆ, ದೇವರಾಜ ರಸ್ತೆ ಸೇರಿದಂತೆ ಅರಮನೆಯ ಸುತ್ತಮುತ್ತಲಿನ ರಸ್ತೆಯಲ್ಲಿ ಏಕಮುಖ ಸಂಚಾರ ವ್ಯವಸ್ಥೆ ಮಾಡುವುದರಿಂದ ಈ ರಸ್ತೆಗಳಲ್ಲಿ ವಾಹನ ನಿಲುಗಡೆಯನ್ನು ನಿರ್ಬಂಧಿಸುವ ಸಾಧ್ಯತೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಪುರಭವನದ ಮಲ್ಟಿಲೆವೆಲ್ ಪಾರ್ಕಿಂಗ್ ಕಟ್ಟಡದಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡುತ್ತಿರುವುದರಿಂದ ಪೊಲೀಸರು ನಿಟ್ಟುಸಿರು ಬಿಡುವಂತಾಗಿದೆ.

Translate »