ಪ್ರವಾಸೋದ್ಯಮದ ಒತ್ತಡ ತಡೆದುಕೊಳ್ಳುವ ಶಕ್ತಿ ಕೊಡಗಿಗಿಲ್ಲ
ಕೊಡಗು

ಪ್ರವಾಸೋದ್ಯಮದ ಒತ್ತಡ ತಡೆದುಕೊಳ್ಳುವ ಶಕ್ತಿ ಕೊಡಗಿಗಿಲ್ಲ

July 26, 2018

ಮಡಿಕೇರಿ: ಕೊಡಗು ಅತ್ಯಂತ ಸೂಕ್ಷ್ಮ ಪರಿಸರ ವಲಯವಾ ಗಿದ್ದು, ಪ್ರವಾಸೋದ್ಯಮದ ಒತ್ತಡವನ್ನು ತಡೆದುಕೊಳ್ಳುವ ಶಕ್ತಿ ಇಲ್ಲಿನ ಪರಿಸರಕ್ಕೆ ಇಲ್ಲವೆಂದು ಅಭಿಪ್ರಾಯಪಟ್ಟಿರುವ ಕೂರ್ಗ್ ವೈಲ್ಡ್ ಲೈಫ್ ಸೊಸೈಟಿಯ ಅಧ್ಯಕ್ಷ ಕರ್ನಲ್ ಸಿ.ಪಿ.ಮುತ್ತಣ್ಣ, ಪ್ರವಾಸೋ ದ್ಯಮವನ್ನು ಮತ್ತಷ್ಟು ಉತ್ತೇಜಿಸುವುದನ್ನು ವಿರೋಧಿಸುವುದಾಗಿ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವು ಎಂದಿಗೂ ಕೊಡಗಿನ ಅಭಿವೃದ್ಧಿಯ ವಿರೋಧಿಗಳಲ್ಲ. ಆದರೆ, ಪರಿಸರ ರಕ್ಷಣೆಗೆ ಪೂರಕವಾದ ಅಭಿವೃದ್ಧಿ ಕಾರ್ಯಗಳು ಆಗಬೇಕಾಗಿದೆ. ಪ್ರವಾ ಸೋದ್ಯಮದ ವೇಗವನ್ನು ತಡೆಯುವಷ್ಟು ಶಕ್ತಿ ಈ ಸೂಕ್ಷ್ಮ ಪ್ರದೇಶವಾದ ಕೊಡಗಿಗೆ ಇಲ್ಲ. ಜಿಲ್ಲೆಯ ಜನಸಂಖ್ಯೆ ಸುಮಾರು 5.50 ಲಕ್ಷವಿದ್ದರೆ, ಇಲ್ಲಿಗೆ ಬರುತ್ತಿರುವ ಪ್ರವಾಸಿಗರ ಸಂಖ್ಯೆ 15 ಲಕ್ಷವನ್ನು ಮೀರು ತ್ತಿದೆ. ಈ ಒತ್ತಡವನ್ನು ಪುಟ್ಟ ಜಿಲ್ಲೆ ತಡೆದು ಕೊಳ್ಳಲು ಹೇಗೆ ಸಾಧ್ಯವೆಂದು ಪ್ರಶ್ನಿಸಿದರು.

ಈಗ ಇರುವ ಪ್ರವಾಸೋದ್ಯಮವೆ ಪ್ರಸ್ತುತ ಸಾಕಾಗಿದ್ದು, ಈ ಕ್ಷೇತ್ರವನ್ನು ಮತ್ತಷ್ಟು ಅಭಿವೃದ್ಧಿ ಪಡಿಸುವ ಅಗತ್ಯವಿಲ್ಲ. ಹೆಸರುವಾಸಿ ಪ್ರವಾಸಿ ತಾಣಗಳಾದ ಅಬ್ಬಿ ಜಲಪಾತ, ಇರ್ಪು ಜಲಪಾತ, ತಡಿ ಯಂಡಮೋಳ್ ಬೆಟ್ಟ ಸೇರಿದಂತೆ ಪ್ರಮುಖ ಪ್ರವಾಸಿ ತಾಣಗಳಿಗೆ ಪ್ರತಿದಿನ ಸೀಮಿತ ಪ್ರವಾಸಿಗರಿಗಷ್ಟೆ ಪ್ರವೇಶಾವಕಾಶ ಕಲ್ಪಿಸುವ ಮೂಲಕ ಒತ್ತಡವನ್ನು ನಿಯಂತ್ರಿಸುವ ಕಾರ್ಯವಾಗಬೇಕಾಗಿದೆ ಎಂದು ಕರ್ನಲ್ ಮುತ್ತಣ್ಣ ಅಭಿಪ್ರಾಯಪಟ್ಟರು.

ಪ್ರವಾಸೋದ್ಯಮದ ಹೆಸರಿನಲ್ಲಿ ಪರಿಸರಕ್ಕೆ ಮಾರಕವಾಗಬಲ್ಲ ಯಾವುದೇ ಯೋಜನೆಗಳನ್ನು ವಿರೋಧಿಸುವುದಾಗಿ ಅವರು ತಿಳಿಸಿದರು. ಇತ್ತೀಚೆಗೆ ಬೆಂಗ ಳೂರಿನಲ್ಲಿ ನಡೆದ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳ ಹಾಗೂ ಸ್ವಯಂ ಸೇವಾ ಸಂಸ್ಥೆಗಳ ಸಭೆಯಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ‘ಖಾಸಗಿ ವನ್ಯಜೀವಿ ಧಾಮ’ ಯೋಜನೆಯನ್ನು ಜಾರಿಗೆ ತರುವ ಕುರಿತು ಪ್ರಸ್ತಾಪಿಸಲಾಗಿತ್ತು. ಈ ಯೋಜನೆಯ ಪ್ರಕಾರ ಅರಣ್ಯದ ಅಂಚಿನಲ್ಲಿರುವ ಖಾಸಗಿ ಭೂಮಿಯನ್ನು ಅದರ ಮಾಲೀಕರು ಅರಣ್ಯ ಅಭಿವೃದ್ಧಿಗೆ ಮೀಸಲಿಡುವುದು ಮತ್ತು ಅವರದ್ದೆ ಒಡೆತನದಲ್ಲಿ ಪ್ರವಾಸೋದ್ಯಮಕ್ಕೆ ಪೂರಕವಾಗಿ ರೆಸಾರ್ಟ್ ಇನ್ನಿತರ ಚಟುವಟಿಕೆಗೆ ಬಳಸಿಕೊಳ್ಳುವ ಬಗ್ಗೆ ಅವಕಾಶ ನೀಡು ವುದಾಗಿ ಅರಣ್ಯ ಅಧಿಕಾರಿಗಳು ತಿಳಿಸಿದ್ದರು. ಆದರೆ, ಈ ಯೋಜನೆಗೆ ಕೂರ್ಗ್ ವೈಲ್ಡ್ ಲೈಫ್ ಸೊಸೈಟಿ ಆಕ್ಷೇಪ ವ್ಯಕ್ತಪಡಿಸಿ ಮನವಿ ಸಲ್ಲಿಸಿದೆಯೆಂದು ಕರ್ನಲ್ ಮುತ್ತಣ್ಣ ಸ್ಪಷ್ಟಪಡಿಸಿದರು.

ಖಾಸಗಿ ವನ್ಯಧಾಮ ಅಭಿವೃದ್ಧಿಯ ನೆಪದಲ್ಲಿ ಹೊರ ರಾಜ್ಯಗಳಿಂದ ಬರುವ ಬಂಡವಾಳಶಾಹಿಗಳು ರೆಸಾರ್ಟ್‍ಗಳನ್ನು ನಿರ್ಮಿಸಿ ಮೂಲ ನಿವಾಸಿಗಳ ಅಸ್ತಿತ್ವಕ್ಕೆ ಧಕ್ಕೆ ತರುವ ಸಾಧ್ಯತೆಗಳಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು. ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯಬೇಕು, ಆದರೆ, ಕೊಡಗು ಮಲೆನಾಡು ಪ್ರದೇಶ ವಾಗಿರುವ ಕಾರಣ ಯಾವ ರೀತಿ ಅಭಿವೃದ್ಧಿ ಕಾರ್ಯಗಳು ನಡೆಯಬೇಕು ಎನ್ನುವ ಬಗ್ಗೆ ವಿಭಿನ್ನ ರೀತಿಯಲ್ಲಿ ಚಿಂತನೆ ನಡೆಯ ಬೇಕಾಗಿದೆ. ಇದಕ್ಕಾಗಿ ಪರ, ವಿರೋಧ ಹೇಳಿಕೆಗಳನ್ನು ನೀಡುವ ಬದಲು ಜನಪ್ರತಿನಿಧಿಗಳು ಮತ್ತು ಪರಿಸರವಾದಿ ಗಳು ಒಂದೇ ವೇದಿಕೆಯಲ್ಲಿ ಸಮಾಲೋ ಚನೆ ನಡೆಸಿ ಅಭಿಪ್ರಾಯ ಹಂಚಿಕೆಯ ಮೂಲಕ ಕೊಡಗಿನ ಕುರಿತು ಕಾಳಜಿ ತೋರಬೇಕಾಗಿದೆ ಎಂದು ಕರ್ನಲ್ ಮುತ್ತಣ್ಣ ತಿಳಿಸಿದರು.

ಎ.ಕೆ. ಸುಬ್ಬಯ್ಯ ಹೇಳಿಕೆಗೆ ಆಕ್ಷೇಪ: ಬಾಣೆ ಜಮೀನನ್ನು ಅರಣ್ಯಕ್ಕೆ ಸೇರಿಸುವ ಹುನ್ನಾರವನ್ನು ಪರಿಸರವಾದಿಗಳು ಮಾಡುತ್ತಿದ್ದಾರೆ ಎಂದು ವಕೀಲ ಎ.ಕೆ. ಸುಬ್ಬಯ್ಯ ಅವರು ಇತ್ತೀಚೆಗೆ ಆರೋಪ ಮಾಡಿದ್ದಾರೆ ಎಂದು ತಿಳಿಸಿದ ಕರ್ನಲ್ ಮುತ್ತಣ್ಣ, ವಿನಾಕಾರಣ ಹೇಳಿಕೆಗಳನ್ನು ನೀಡುವ ಬದಲು ಸಂಬಂಧಿಸಿದ ಪರಿಸರವಾದಿಯ ಹೆಸರನ್ನು ಬಹಿರಂಗಗೊಳಿಸಲಿ ಎಂದು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ತರುಣ್ ಕಾರ್ಯಪ್ಪ ಹಾಗೂ ಸಿ.ಕೆ.ಪೂವಯ್ಯ ಉಪಸ್ಥಿತರಿದ್ದರು.

Translate »