ಮೈಸೂರು: ತಾಯಿ ಚಾಮುಂಡೇಶ್ವರಿ ತನ್ನ ವಾಹನ `ಸಿಂಹ’ನ ಕೈ ಬಿಡೋಲ್ಲ. ಈ ಬಾರಿಯೂ ಅನುಗ್ರಹ ತೋರುತ್ತಾಳೆ…!
ಹೌದು, ಹಾಲಿ ಸಂಸದ ಪ್ರತಾಪ್ ಸಿಂಹ ಮತ ಎಣಿಕೆ ನಡೆಯುತ್ತಿದ್ದ ಮೈಸೂರಿನ ವಾಲ್ಮೀಕಿ ರಸ್ತೆಯ ಮಹಾ ರಾಣಿ ವಾಣಿಜ್ಯ ಮತ್ತು ನಿರ್ವಹಣಾ ಮಹಿಳಾ ಕಾಲೇಜು ಆವರಣಕ್ಕೆ ಗುರು ವಾರ ಭೇಟಿ ನೀಡುತ್ತಿದ್ದಂತೆ ಹೀಗೆ ವಿಶ್ವಾ ಸದ ನುಡಿಗಳನ್ನಾಡಿದ್ದರು. ಕೊನೆಗೂ ಅವರ ವಿಶ್ವಾಸ ನಿಜವಾಯಿತು.
ಬೆಳಿಗ್ಗೆ ಚಾಮುಂಡಿ ಬೆಟ್ಟದಲ್ಲಿ ಚಾಮುಂ ಡೇಶ್ವರಿ ತಾಯಿಗೆ ಪೂಜೆ ಸಲ್ಲಿಸಿ ಎಣಿಕಾ ಕೇಂದ್ರಕ್ಕೆ ಬೆಳಿಗ್ಗೆ 9 ಗಂಟೆ ವೇಳೆಗೆ ಆಗ ಮಿಸಿದಾಗ ಗೆಲುವಿನ ಸಂಪೂರ್ಣ ಭರ ವಸೆಯೊಂದಿಗೆ ಹಸನ್ಮುಖಿಯಾಗಿಯೇ ಕಂಡರು. ಇದೇ ವೇಳೆ ಎದುರಾದ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಅವರು, ಈಗಷ್ಟೇ ತಾಯಿ ಚಾಮುಂಡೇ ಶ್ವರಿಗೆ ಪೂಜೆ ಸಲ್ಲಿಸಿ ಬಂದಿದ್ದೇನೆ. 2014ರ ಲೋಕಸಭಾ ಚುನಾವಣೆಯಲ್ಲಿ ಮೈಸೂರು -ಕೊಡಗು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯಾಗಿ ಬಂದಾಗ ಹೊಸಬನಾಗಿದ್ದೆ. ಆಗಲೂ ತಾಯಿ ಚಾಮುಂಡೇಶ್ವರಿ ತನ್ನ ವಾಹನ `ಸಿಂಹ’ನ ಕೈ ಬಿಡದ ಹಿನ್ನೆಲೆ ಯಲ್ಲಿ ಕ್ಷೇತ್ರದ ಜನತೆಯ ಆಶೀರ್ವಾದ ದೊರೆಯಿತು ಎಂದು ನುಡಿದರು.
ಈ ಬಾರಿಯೂ ಚಾಮುಂಡೇಶ್ವರಿ ತಾಯಿ ತನ್ನ ವಾಹನ `ಸಿಂಹ’ನ ಕೈಬಿಡು ವುದಿಲ್ಲ ಎಂಬ ಬಗ್ಗೆ ನನಗೆ ಬಲವಾದ ವಿಶ್ವಾಸವಿದೆ. ಕಳೆದ 5 ವರ್ಷದ ಅವಧಿ ಯಲ್ಲಿ ರಾಜ್ಯದ ಸಂಸದರ ಪೈಕಿ ಅತೀ ಹೆಚ್ಚು ಅನುದಾನ ತಂದಿದ್ದೇನೆ. ಸಂಸದರ ನಿಧಿ ಸದ್ಬಳಕೆ ಮಾಡಿದವರ ಪೈಕಿ ರಾಜ್ಯ ದಲ್ಲಿ ನಾನು ಪ್ರಥಮ ಸ್ಥಾನದಲ್ಲಿದ್ದೇನೆ. ಈ ಎಲ್ಲವನ್ನೂ ಕ್ಷೇತ್ರದ ಜನತೆ ಗಮನಿಸಿ ದ್ದಾರೆ. ಹೀಗಾಗಿ ನನಗೆ ಗೆಲುವಿನ ಭರವಸೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಳಿಕ ಉತ್ಸಾಹದಿಂದ ಎಣಿಕಾ ಕೇಂದ್ರ ದೊಳಗೆ ಪ್ರವೇಶಿಸಿದ ಅವರು ಈ ಮಧ್ಯೆ ಎಣಿಕಾ ಕೇಂದ್ರದಲ್ಲಿ ವ್ಯವಸ್ಥೆಗೊಳಿಸಿದ್ದ ಮಾಧ್ಯಮ ಕೊಠಡಿಗೆ ಭೇಟಿ ನೀಡಿ ಮಾಧ್ಯಮ ಮಿತ್ರರೊಂದಿಗೆ ಕೆಲಕಾಲ ಮಾತುಕತೆ ನಡೆಸಿದರು.ಅಂತಿಮವಾಗಿ ಭಾರೀ ಅಂತರದಲ್ಲಿ ಗೆಲುವಿನ ನಗೆ ಬೀರಿದ ಪ್ರತಾಪ್ ಸಿಂಹ, ಪುನರಾಯ್ಕೆ ಮಾಡಿದ ಕ್ಷೇತ್ರದ ಜನತೆಗೆ ಕೃತಜ್ಞತೆ ಸಲ್ಲಿಸಿದರು.
ಮಂಕಾದ ವಿಜಯಶಂಕರ್: ಇಂದು ಬೆಳಿಗ್ಗೆ ಸುಮಾರು 6.45ಕ್ಕೆ ಎಣಿಕಾ ಕೇಂದ್ರಕ್ಕೆ ಭೇಟಿ ನೀಡಿದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಸಿ.ಹೆಚ್.ವಿ ಜಯಶಂಕರ್ ಗೆಲುವಿನ ವಿಶ್ವಾಸದಿಂದ ಹಸನ್ಮುಖಿಯಾಗಿ ಕಂಡರು. ಶ್ವೇತವಸ್ತ್ರಧಾರಿಯಾಗಿ ಬಂದಿದ್ದ ಅವರು ಎಣಿಕಾ ಸ್ಥಳಕ್ಕೆ ತಮ್ಮ ಏಜೆಂಟ್ ಗಳೊಂದಿಗೆ ತೆರಳಿದರು.
ಆರಂಭದಲ್ಲಿ ಅಲ್ಪ ಪ್ರಮಾಣದ ಹಿನ್ನಡೆ ಯಲ್ಲಿದ್ದ ವಿಜಯಶಂಕರ್ ಹಲವು ಸುತ್ತು ಎಣಿಕೆ ಬಳಿಕ ಹೆಚ್ಚಿನ ಅಂತರದಲ್ಲಿ ಹಿನ್ನಡೆ ಅನುಭವಿಸುವಂತಾಯಿತು.
ಇದರಿಂದ ಬೇಸರಗೊಂಡು ಮಧ್ಯಾಹ್ನ ಸುಮಾರು 12.45ರ ವೇಳೆಗೆ ಎಣಿಕಾ ಕೇಂದ್ರದಿಂದ ನಿರ್ಗಮಿಸಿದರು. ಇದಕ್ಕೂ ಮುನ್ನ ಮಾಧ್ಯಮದವರೊಂದಿಗೆ ಹೆಚ್ಚು ಮಾತನಾಡಲು ಮುಂದಾಗದ ಅವರು, ಇನ್ನೂ 10 ಸುತ್ತು ಎಣಿಕೆ ನಡೆಯಬೇಕಿದೆ. ನಾನು ತಾಳ್ಮೆ ಕಳೆದುಕೊಳ್ಳುವುದಿಲ್ಲ. ವಿಶ್ವಾಸದೊಂದಿಗೆ ಕಾದು ನೋಡುತ್ತೇನೆ ಎಂದು ತಿಳಿಸಿ, ಕಾರು ಹತ್ತಿ ತೆರಳಿದರು.
ಮೈತ್ರಿ ಒಳಬೇಗುದಿ ಪ್ರತಾಪ್ಸಿಂಹಗೆ ವರವಾಯಿತೆ…
ಮೈಸೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಮೈಸೂರಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಪಕ್ಷಗಳ ಒಳ ಬೇಗುದಿಯು ಮತ್ತೆ ಪ್ರತಾಪ್ ಸಿಂಹ ಗೆಲುವಿಗೆ ವರವಾಯಿತು ಎಂದು ಜನ ಮಾತನಾಡುತ್ತಿದ್ದಾರೆ.
ಅತ್ಯಂತ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿರುವ ಪ್ರತಾಪ್ ಸಿಂಹ ಅವರಿಗೇ ಇಷ್ಟೊಂದು ಅಂತರದಲ್ಲಿ ಗೆಲುವು ಸಾಧಿಸುತ್ತೇನೆಂಬ ಊಹೆ ಸಹ ಇರಲಿಲ್ಲ. ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಅವರು ಚುನಾವಣಾ ರಣರಂಗಕ್ಕೆ ಧುಮುಕಿದ್ದರಿಂದ ತೀವ್ರ ಕುತೂಹಲ ಕೆರಳಿಸಿತ್ತು.
ಬಿಜೆಪಿಯಲ್ಲಿದ್ದ ಸಿ.ಹೆಚ್.ವಿಜಯಶಂಕರ್ ಅವರನ್ನು ಕಾಂಗ್ರೆಸ್ಗೆ ಕರೆತಂದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರಕ್ಕೆ ಮೈತ್ರಿ ಅಭ್ಯರ್ಥಿಯಾಗಿ ನಿಲ್ಲಿಸಿದ್ದೇ ಫಲಿತಾಂಶ ವ್ಯತಿರಿಕ್ತವಾಗಿ ಬರಲು ಕಾರಣ ಎಂಬ ಮಾತೂ ಕೇಳಿ ಬರುತ್ತಿವೆ.
ಈ ಕ್ಷೇತ್ರದಲ್ಲಿ ಒಕ್ಕಲಿಗರ ಪ್ರಾಬಲ್ಯವಿದ್ದರೂ, ಆ ಸಮುದಾಯದ ಅಭ್ಯರ್ಥಿಯನ್ನು ಕಣಕ್ಕಿಳಿಸದಿರುವುದು, ಸಿದ್ದರಾಮಯ್ಯ ಹಠಕ್ಕೆ ಬಿದ್ದು ವಿಜಯಶಂಕರ್ಗೆ ಮಣೆ ಹಾಕಿದ್ದು, ಅವರ ಗೆಲುವಿಗೆ ಮುಳುವಾಯಿತು ಎಂದು ಹೇಳಲಾಗಿದೆ.
ದೊಡ್ಡ ಮಟ್ಟದಲ್ಲಿ ನಾಯಕರು ಒಂದಾಗಿದ್ದರಾದರೂ, ತಳಮಟ್ಟದ ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರು ಮಾತ್ರ ಮಾನಸಿಕವಾಗಿ ಮೈತ್ರಿಯನ್ನು ಒಪ್ಪಿ ಕೊಂಡಿರಲಿಲ್ಲ ಎಂಬುದು ಮೊದಲು ಗೊತ್ತಿತ್ತು. ಫಲಿತಾಂಶ ಹೊರಬಿದ್ದ ನಂತರ ವಂತೂ ಭಿನ್ನಮತ ಖಚಿತವಾಗಿದೆ. ಮಂಡ್ಯದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಬಹಿರಂಗವಾಗಿಯೇ ಪಕ್ಷೇತರ ಅಭ್ಯರ್ಥಿ ಸುಮಲತಾ ಪರ ಕೆಲಸ ಮಾಡಿದ್ದರಿಂದ ಮೈಸೂರು ಭಾಗದಲ್ಲಿ ಪ್ರಬಲವಾಗಿದ್ದ ಜೆಡಿಎಸ್ ಮುಖಂಡರು ಮತ್ತು ಕಾರ್ಯ ಕರ್ತರು ಮೈಸೂರು-ಕೊಡಗು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗೆ ಮತ ಹಾಕಿಸಿದ್ದು ಗುಪ್ತವಾಗೇನೂ ಉಳಿದಿಲ್ಲ. ಸಿದ್ದರಾಮಯ್ಯನವರ ಮೇಲಿನ ಸಿಟ್ಟು. ಪರ್ಯಾಯ ಅಭ್ಯರ್ಥಿ ಇಲ್ಲದಿರುವುದರಿಂದ ಒಕ್ಕಲಿಗ ಸಮುದಾಯವು ಮತ್ತೊಬ್ಬ ಒಕ್ಕಲಿಗ ಪ್ರತಾಪಸಿಂಹ ಅವರನ್ನು ಬೆಂಬಲಿಸಲು ಕಾರಣವಾಯಿತು ಎಂದೂ ಹೇಳಲಾಗಿದೆ.
ಈ ಫಲಿತಾಂಶ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗಂತೂ ಆಘಾತ ಉಂಟು ಮಾಡಿದ್ದು, ತಮ್ಮ ತವರು ಜಿಲ್ಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಸೋಲಿನಿಂದ ಸಿದ್ದರಾಮಯ್ಯ ಅವರಿಗೆ ತೀವ್ರ ಮುಖಭಂಗವಾದಂತಾಗಿದೆ.
ದೇಶಾದ್ಯಂತ ಪ್ರಧಾನಿ ನರೇಂದ್ರ ಮೋದಿ ವರ್ಚಸ್ಸು ಪ್ರತಾಪ್ ಸಿಂಹ ಮತ್ತೆ ಸಂಸದರಾಗಿ ಆಯ್ಕೆಯಾಗಲು ಕಾರಣವಾಗಿದೆ.