ಮೈಸೂರು: ಕರ್ನಾಟಕ ರಾಜ್ಯ ಗಾಣಿಗರ ಗೆಳೆಯರ ಕ್ಷೇಮಾಭಿ ವೃದ್ಧಿ ಸಂಘದಿಂದ ಹೊರತಂದಿರುವ ನೂತನ ವರ್ಷದ ದಿನದರ್ಶಿಕೆಯನ್ನು ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶನಿವಾರ ಬಿಡುಗಡೆ ಮಾಡಲಾಯಿತು.
ದಿನದರ್ಶಿಕೆ ಬಿಡುಗಡೆ ಮಾಡಿದ ಮಾಜಿ ಮೇಯರ್ ಅನಂತು ಮಾತನಾಡಿ, ಕಳೆದ ವರ್ಷವೂ ಸಂಘದಿಂದ ಕ್ಯಾಲೆಂಡರ್ ಬಿಡು ಗಡೆ ಮಾಡಲಾಗಿತ್ತು. ಅದನ್ನು ಈ ವರ್ಷವೂ ಮುಂದುವರೆಸಿರುವುದು ಸಂತಸದ ಸಂಗತಿ ಎಂದು ಹರ್ಷ ವ್ಯಕ್ತಪಡಿಸಿದರು.
ಕಳೆದ 5 ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದ ಸಂಘವು ಸಮುದಾಯದ ಶ್ರೇಯೋಭಿ ವೃದ್ಧಿಗೆ ಶ್ರಮಿಸುತ್ತಿದೆ. ಅದರಲ್ಲೂ ವಿದ್ಯಾರ್ಥಿ ಗಳಿಗೆ ಉತ್ತೇಜನ ನೀಡುವಂತಹ ಕಾರ್ಯ ಕ್ರಮಗಳನ್ನು ನಡೆಸುತ್ತಿದೆ. ಸಮುದಾಯದ ಕುಲಕಸುಬಿಗೆ ಪ್ರೋತ್ಸಾಹ ನೀಡುವ ಮೂಲಕ ಸ್ವ ಉದ್ಯೋಗ ಹಾಗೂ ಸ್ವಯಂ ಉದ್ಯಮ ಆರಂಭಕ್ಕೂ ಸಮುದಾಯದವರಿಗೆ ಉತ್ತೇಜನ ನೀಡಲಾಗುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇದೇ ವೇಳೆ ಡಾಕ್ಟರೇಟ್ ಪದವಿ ಗಳಿಸಿ ರುವ ಕೆಎಎಸ್ ಅಧಿಕಾರಿ ಡಾ.ಮಾನಸ ಅವರನ್ನು ಸನ್ಮಾನಿಸಲಾಯಿತು. ಸಂಘದ ಅಧ್ಯಕ್ಷ ಡಾ.ಕೆ.ವಿಜಯಕುಮಾರ್, ಪ್ರಧಾನ ಕಾರ್ಯದರ್ಶಿ ಮಹಾದೇವ ಗಾಣಿಗ, ಸಹಾಯಕ ಪ್ರಾಧ್ಯಾಪಕ ಡಾ.ಟಿ.ಪ್ರಸನ್ನ ಮತ್ತಿತರರು ಹಾಜರಿದ್ದರು.